
ಅರಣ್ಯ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಯದಂತೆ ಕ್ರಮಕೈಗೊಳ್ಳಿ
ಜಿಲ್ಲಾಧಿಕಾರಿ ನಲಿನ್ ಅತುಲ್
ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೧೩- ಜಿಲ್ಲೆಯಲ್ಲಿ ಅರಣ್ಯ ಭೂಮಿ ಹೊಂದಿರುವ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಯದಂತೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಅವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಮಂಗಳವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಟಾಸ್ಕ್ ಫೋರ್ಸ್ (ಗಣಿ) ಸಮಿತಿ, ಕೊಪ್ಪಳ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಹಾಗೂ ಕೊಪ್ಪಳ ಜಿಲ್ಲಾ ಕಲ್ಲು ಪುಡಿ ಮಾಡುವ ಘಟಕಗಳ ಲೈಸೆನ್ಸ್ ನೀಡಿಕೆ ಮತ್ತು ನಿಯಂತ್ರಣ ಪ್ರಾಧಿಕಾರ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಕೊಪ್ಪಳ ಜಿಲ್ಲೆಯಲ್ಲಿ ಅನಧಿಕೃತ ಖನಿಜ ಗಣಿಗಳ ವಿರುದ್ಧ ಜಿಲ್ಲಾ, ತಾಲೂಕು ಮಟ್ಟದಲ್ಲಿ ಸದಸ್ಯರು ಸಮಿತಿಯನ್ನು ರಚಿಸಿ ಪರಿಶೀಲನೆ ಮಾಡಬೇಕು. ಗ್ರಾನೈಟ್ ಗಣಿಗಾರಿಕೆ, ಕಟ್ಟಡ ಕಲ್ಲು ಗಣಿಗಾರಿಕೆಗಾಗಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಸಂಬಂಧಪಟ್ಟ ಕಂದಾಯ ಹಾಗೂ ಅರಣ್ಯ ಇಲಾಖೆಯ ನಿರಾಕ್ಷೇಪಣಾ ಪತ್ರಗಳ ಜಾರಿಯಾಗಿರುವ ಬಗ್ಗೆ ಪರಿಶೀಲಿಸಿ ಸಕರಾತ್ಮಕ ವರದಿಗಳಿರುವ ಪ್ರಕ್ರಿಯೆಯಲ್ಲಿ ಟಾಸ್ಕ್ಫೋರ್ಸ್ ಸಭೆಗೆ ಅನುಮೋದನೆ ನೀಡಲಾಗಿದ್ದು, ಇಟ್ಟಿಗೆ ಮರಳು ತಯಾರಿಕೆ ವಿರುದ್ಧ ಐಪಿಸಿ ಅನ್ವಯ ಕ್ರಮವಹಿಸಿ ತಿರ್ಮಾನಿಸಬೇಕು. ಅಕ್ರಮ ಖನಿಜ ಸಾಗಾಣಿಕೆ ನಿರ್ಬಂಧಿಸಲು ರೂಪಿಸಿರುವ ಫಸ್ಟ್ ಸ್ಟೇಟ್ ಫಸ್ಟ್ ಜಿಪಿಎಸ್ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ತಿರ್ಮಾನಿಸಲಾಗಿದ್ದು, ಜಿಲ್ಲೆಯ ಅರಣ್ಯ ಭೂಮಿಯ ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಜಿಲ್ಲೆಯಲ್ಲಿ ಸಣ್ಣ ನೀರಾವರಿ ಅಧೀನದಲ್ಲಿರುವ ಕೆರೆಗಳಲ್ಲಿ ಅಕ್ರಮ ಮಣ್ಣು ಎತ್ತುವಳಿ ಚಟುವಟಿಕೆಯನ್ನು ನಿರ್ಬಂಧಿಸಲು ಕರ್ನಾಟಕ ನೀರಾವರಿ ಕಾಯ್ದೆ 1968ರ ಕಾಲಂಗಳನ್ವಯ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಿ ಕಟ್ಟುನಿಟ್ಟಿನ ಕ್ರಮ ವಹಿಸಬೇಕೆಂದು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಜಿಲ್ಲಾಧಿಕಾರಿಗಳು, ಹೊಸ ಮರಳು ನೀತಿ 2023ರಂತೆ ಹಟ್ಟಿ ಚಿನ್ನದ ಗಣಿ ಕಂಪನಿಯವರಿಗೆ ನೀಡಿರುವ ಮರಳು ಬ್ಲಾಕ್ಗಳಲ್ಲಿ ಮರಳು ಗಣಿಗಾರಿಕೆ ನಡೆಸಿ ಸಾರ್ವಜನಿಕರಿಗೆ ವಿತರಿಸಲು ಅನುವಾಗುವಂತೆ ಯಾವುದೇ ಸ್ಥಳೀಯ ಸಮಸ್ಯೆಗಳನ್ನು ನಿವಾರಿಸಲು ಈ ಯೋಜನೆಯನ್ನು ಪ್ರಾರಂಭ ಮಾಡಲು ಸಹಾಯಕ ಆಯುಕ್ತರು, ತಹಶೀಲ್ದಾರರು, ಪೊಲೀಸರು ಗಣಿ ಇಲಾಖೆ ಅಧಿಕಾರಿಗಳು ಹಟ್ಟಿ ಗಣಿ ಚಿನ್ನ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಬೇಕು.
ಜೊತೆಗೆ ಪ್ರಥಮ ಹಂತದ ಮರಳು ಗಣಿ ವೃತ್ತಿಯಲ್ಲಿ ಅಳವಡಿಸಿರುವ ತೂಕ ಮಾಪನ ಯಂತ್ರಗಳನ್ನು ಗಣಿ ಇಲಾಖೆಯೊಂದಿಗೆ ಐಎಲ್ಎಮ್ಎಸ್ ತಂತ್ರಾಶದೊAದಿಗೆ ಏಕೀಕರಣಗೊಳಿಸಿದ ನಂತರ ಎಲ್ಲಾ ಕ್ರಶರ್ ಘಟಕಗಳ ತೂ ಕ ಮಾಪನ ಯಂತ್ರಗಳನ್ನು ಐಎಲ್ಎಮ್ಎಸ್ ತಂತ್ರಾಂಶದೊಂದಿಗೆ ಏಕೀಕರಣಗೊಳಿಸಬೇಕು ಎಂದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೇಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ಸುನೀಲ್ ವಂಟಗೋಡಿ, ಉಪವಿಭಾಗಾಧಿಕಾರಿಗಳಾದ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಜಿಲ್ಲಾಮಟ್ಟದ ಅಧಿಕಾರಿಗಳು, ತಹಶೀಲ್ದಾರರು, ಗಣಿ ಅಧಿಕಾರಿಗಳು ಉಪಸ್ಥಿತರಿದ್ದರು.