
ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ
ಫ.ಗು.ಹಳಕಟ್ಟಿಯವರ ಸಾಧನೆ ಜಗತ್ತಿಗೆ ಮಾದರಿ : ಹೇಮಲತಾ ನಾಯಕ್
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 2- ವಚನ ಸಾಹಿತ್ಯ ಸಂರಕ್ಷಣೆಯಲ್ಲಿ ಫ.ಗು.ಹಳಕಟ್ಟಿ ಅವರ ಸಾಧನೆ ಜಗತ್ತಿಗೆ ಮಾದರಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ್ ಅವರು ಹೇಳಿದರು.
ಮಂಗಳವಾರದಂದು ನಗರದ ಸಾಹಿತ್ಯ ಭವನದಲ್ಲಿ ಡಾ.ಫ.ಗು. ಹಳಕಟ್ಟಿಯವರ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ಸಂಗ್ರಹಿಸಿ, ಅವುಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ದಾಖಲೆಗಳನ್ನು ಉಳಿಸುವಂತೆ, ವಚನಗಳ ಮಹತ್ವವನ್ನು ಜಗತ್ತಿಗೆ ಸಾರುವ ಕೆಲಸವನ್ನು ಫ.ಗು.ಹಳಕಟ್ಟಿಯವರು ಮಾಡಿದ್ದಾರೆ. ವಿಜಯಪುರದಲ್ಲಿ ಬಿಎಲ್ಡಿಇ ವಿಶ್ವವಿದ್ಯಾಲಯವನ್ನು ಸ್ಥಾಪಿಸುವುದರ ಮೂಲಕ ಅತ್ಯುನ್ನತ ಶಿಕ್ಷಣ ಸಂಸ್ಥೆಗೆ ಬುನಾದಿ ಹಾಕಿದರು. ಬ್ಯಾಂಕುಗಳನ್ನು ಸ್ಥಾಪಿಸಿದರು. ಹಳಕಟ್ಟಿಯವರ ಸ್ಮರಣೀಯ ಸಾಧನೆಗಾಗಿ ವಿಜಯಪುರದಲ್ಲಿ ಅವರ ಸ್ಮಾರಕವನ್ನು ನಿರ್ಮಿಸಲಾಗಿದೆ. ಅವರ ಸಾಧನೆಯನ್ನು ಶಾಶ್ವತವಾಗಿ ಉಳಿಸುವ ಸಲುವಾಗಿ ಸರ್ಕಾರ ಅವರ ಜನ್ಮದಿನಾಚರಣೆಯನ್ನು ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯನ್ನಾಗಿ ಆಚರಿಸುತ್ತಿದೆ. ಅವರ ಕಾರ್ಯವನ್ನು ಅರ್ಥಪೂರ್ಣವಾಗಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಇದಕ್ಕಾಗಿ ನಾವೆಲ್ಲರೂ ವಚನ ಸಾಹಿತ್ಯವನ್ನು ಅಧ್ಯಯನ ಮಾಡಬೇಕು. ಅದರ ಸತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ.ಕಡಿ ಅವರು ಮಾತನಾಡಿ, ಫ.ಗು.ಹಳಕಟ್ಟಿಯವರು ಸಾಹಿತಿಗಳು ಮಾತ್ರವಲ್ಲದೆ, ಸಮಾಜಮುಖಿ ಕೆಲಸಗಳನ್ನೂ ಮಾಡಿದ್ದಾರೆ. ಶಿಕ್ಷಣ ಸಂಸ್ಥೆಗಳು, ಹಣಕಾಸು ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಅವರ ಸಾಧನೆ ನಮಗೆಲ್ಲರಿಗೂ ಸ್ಪೂರ್ತಿಯಾಗಬೇಕು. ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ವಚನ ಸಾಹಿತ್ಯದೆಡೆಗೆ ಆಕರ್ಷಿತರಾಗಿ ಅವುಗಳನ್ನು ಸಂರಕ್ಷಿಸುವ ಕಾರ್ಯ ಮಾಡಿದರು. ವಿಧಾನ ಪರಿಷತ್ ಸದಸ್ಯರಾಗಿದ್ದರು. ವಚನಗಳನ್ನು ರಕ್ಷಿಸುವ ಸಲುವಾಗಿಯೇ ತಮ್ಮ ಮನೆಯನ್ನು ಮಾರಿದ ನಿಸ್ವಾರ್ಥ ಸಾಧಕರು ಹಳಕಟ್ಟಿಯವರು ಎಂದು ಅವರು ಹೇಳಿದರು.
ಕೊಪ್ಪಳದ ವಿಶ್ವಗುರು ಬಸವೇಶ್ವರ ಟ್ರಸ್ಟ್ನ ಶಿವಕುಮಾರ ಕುಕನೂರು ಅವರು ಮಾತನಾಡಿ, ಫಕೀರಪ್ಪ ಗುರುಬಸಪ್ಪ ಹಳಕಟ್ಟಿಯವರು 1982 ರಲ್ಲಿ ಜನಿಸಿದರು. ತಮ್ಮ 24ನೇ ವಯಸ್ಸಿಗೆ ಬಿ.ಎಸ್ಸಿ, ಎಲ್ಎಲ್ಬಿ ಪೂರ್ಣಗೊಳಿಸಿ ವಕೀಲರಾಗಿ ಸೇವೆ ಆರಂಭಿಸಿದರು. 25ನೇ ವಯಸ್ಸಿನಲ್ಲಿ ವಚನ ಸಾಹಿತ್ಯದೆಡೆಗೆ ಆಕರ್ಷಿತರಾಗಿ ವಚನಗಳನ್ನು ಸಂರಕ್ಷಿಸಲು ಮುಂದಾದರು. ಅವರ ಈ ಕಾರ್ಯ ಅವರ ಕೊನೆಯವರೆಗೂ ನಡೆಯಿತು. ಹಳಕಟ್ಟಿಯವರು ಒಟ್ಟು 23,000 ವಚನಗಳನ್ನು ಸಂಗ್ರಹಿಸಿ, ಅವುಗಳ ಸಮಗ್ರ ಪುಸ್ತಕವನ್ನಾಗಿ ಮಾಡಿ ವಚನ ಸಾಹಿತ್ಯ ಪುಸ್ತಕವನ್ನು ಪ್ರಕಟಿಸಿದರು. ಒಂದು ವಿಶ್ವವಿದ್ಯಾಲಯ 100 ವರ್ಷಗಳ ಮಾಡುವಂತಹ ಕೆಲಸವನ್ನು ಹಳಕಟ್ಟಿಯವರು ಒಬ್ಬರೇ ಸಾಧಿಸಿದರು. ನವಕರ್ನಾಟಕ ಪತ್ರಿಕೆಯನ್ನು ಆರಂಭಿಸಿದರು. ಕರ್ನಾಟ ಏಕೀಕರಣ ಚಳುವಳಿಗೆ ನವಕರ್ನಾಟಕ ಪತ್ರಿಕೆಯು ಬುನಾದಿಯಾಗಿ ಕಾರ್ಯನಿರ್ವಹಿಸಿತು. 1926 ರಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಅವರು ಸ್ಥಾಪಿಸಿದ ವಿಜಯಪುರದ ಬಿ.ಎಲ್.ಡಿ.ಇ ಶಿಕ್ಷಣ ಸಂಸ್ಥೆಯು ಇಂದು ಪ್ರಪಂಚದ ಹತ್ತು ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ. ತಮ್ಮ ವೈಯಕ್ತಿಕ ಬದುಕು ತೀವ್ರ ಬಡತನದಲ್ಲಿದ್ದಾಗಲೂ, ಕೌಟುಂಬಿಕ ಜೀವನದಲ್ಲಿ ಅನೇಕ ನೋವುಗಳನ್ನು ಉಂಡರೂ ವಚನ ಸಾಹಿತ್ಯದ ಬಗ್ಗೆ ಅವರಿಗೆ ಕಿಂಚಿತ್ತೂ ಆಕರ್ಷಣೆ ಕಡಿಮೆಯಾಗಿರಲಿಲ್ಲ. ಅವರ ಮಗನ ಸಾವಿನ ನೋವಿನಲ್ಲೂ ವಚನ ಸಾಹಿತ್ಯದ ಕುರಿತ ಪುಸ್ತಕದ ಪ್ರಕಟಿಸುವ ಬಗ್ಗೆ ಯೋಚಿಸುತ್ತಿದ್ದರು. ವಚನ ಸಾಹಿತ್ಯವನ್ನು ಮುಂದಿನ ಪೀಳಿಗೆಗಾಗಿ ಸಂರಕ್ಷಿಸುವ ಬಗ್ಗೆ ಅವರಿಗೆ ಅತೀವ ಆಸಕ್ತಿಯಿತ್ತು. ಇಡೀ ಜಗತ್ತಿಗೆ ನಮ್ಮ ನಾಡಿನ ವಚನ ಸಾಹಿತ್ಯವನ್ನು ಪರಿಚಯಿಸುವ ದೃಷ್ಠಿಯಿಂದ ಇಂಗ್ಲೀಷಿನಲ್ಲಿ 100 ವಚನಗಳನ್ನು ತರ್ಜುಮೆ ಮಾಡುವ ಕಾರ್ಯ ಆರಂಭಿಸಿದ್ದರು. ಇಂದಿನ ಮಕ್ಕಳು, ಯುವ ಜನತೆ ವಚನ ಸಾಹಿತ್ಯವನ್ನು ಅಧ್ಯಯನ ಮಾಡಬೇಕು. ಅವುಗಳನ್ನು ವಿಶ್ಲೇಷಿಸಿ, ಅವುಗಳ ಸಾರವನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹಳಕಟ್ಟಿಯವರ ಜೀವನ ಸಾಧನೆ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕೊಟ್ರೇಶ್ ಮರಬನಳ್ಳಿ, ಡಾ.ಸಂಗಮೇಶ ಕಲಾಲ್, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು. ಸಾಹಿತಿ ಸಾವಿತ್ರಿ ಮುಜಂದಾರ ಅವರು ಕಾರ್ಯಕ್ರಮ ನಿರೂಪಿಸಿದರು. ಗಂಗಾವತಿಯ ರಿಜ್ವಾನ ಮುದ್ದಾಬಳ್ಳಿ ಹಾಗೂ ಸಂಗಡಿಗರು ನಾಡಗೀತೆ ಹಾಗೂ ವಚನ ಗೀತೆಗಳನ್ನು ಪ್ರಸ್ತುತ ಪಡಿಸಿದರು.