
ಬಿತ್ತನೆಗೆ ಗುಣಮಟ್ಟದ ಬೀಜ ಆಯ್ಕೆ ಮಾಡಲು ರೈತರಿಗೆ ಸಲಹೆ
ಕರುನಾಡ ಬೆಳಗು ಸುದ್ದಿ
ವಿಜಯನಗರ, 1- ರಾಜ್ಯದಲ್ಲಿ ಪೂರ್ವ ಮುಂಗಾರು ಪ್ರಾರಂಭವಾಗಿರುವುದ್ದರಿAದ ಬಿತ್ತನೆ ಕಾರ್ಯ ಶುರುವಾಗಿದ್ದು, ರೈತರು ಬಿತ್ತನೆಗೆ ಮೊದಲು ಗುಣಮಟ್ಟದ ಬೀಜಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ ಎಂದು ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರಾದ ರಮೇಶ ಕೆ.ಎಂ.ಅವರು ತಿಳಿಸಿದ್ದಾರೆ.
ರೈತರು ಖರೀದಿಸುವ ಬೀಜದಲ್ಲಿ ಶೇ.80 ರಿಂದ ಶೇ.90ರಷ್ಟು ಮೊಳಕೆ ಒಡೆಯುವ ಶಕ್ತಿ ಇರಬೇಕು. ಬೀಜಗಳು ಕೀಟಭಾದೆ, ರೋಗಗಳು, ಅನ್ಯಜಾತಿಯ ತಳಿಗಳ ಕಲಬೆರಕೆ ಹಾಗೂ ಕಳೆಕಸದ ಬೀಜಗಳಿಂದ ಮುಕ್ತವಾಗಿರಬೇಕು. ಆದ್ದರಿಂದ ರೈತರು ಕಡ್ಡಾಯವಾಗಿ ಬೀಜಗಳನ್ನು ಅಧಿಕೃತ ಮಾರಾಟಗಾರರಿಂದ ಮಾತ್ರ ಖರೀದಿಸಬೇಕು.
ವಿಜಯನಗರ ಜಿಲ್ಲೆಯಲ್ಲಿ ಬೆಳೆಯುವ ಮುಖ್ಯ ತರಕಾರಿ ಬೆಳೆಗಳಾದ ಈರುಳ್ಳಿ, ಮೆಣಸಿನಕಾಯಿ, ಟೊಮ್ಯಾಟೋ ಹಾಗೂ ಇತರೆ ತರಕಾರಿ ಬೀಜಗಳನ್ನು ಖರೀದಿಸುವ ಮುನ್ನ ಎಚ್ಚರ ವಹಿಸಿ ಬೀಜ ಖರೀದಿಸುವುದು ಉತ್ತಮ. ಯಾವುದೇ ರೀತಿಯ ಬಿಡಿ ಬೀಜಗಳನ್ನು (ಸೀಲ್ ಮಾಡದೇ ಇರುವ ಪೊಟ್ಟಣಗಳಿಂದ) ಖರೀದಿಸಬಾರದು. ರೈತರು ಖರೀದಿಸಿದ ಬೀಜದ ಬಿಲ್ಲುಗಳನ್ನು ತಪ್ಪದೇ ತಮ್ಮೊಂದಿಗೆ ಇಟ್ಟುಕೊಳ್ಳಬೇಕು ಮತ್ತು ತರಕಾರಿ ಬೀಜದ ಬೆಲೆ ಗರಿಷ್ಟ (ಎಂ.ಆರ್.ಪಿ) ಬೆಲೆಗಿಂತ ಹೆಚ್ಚು ನಮೂದಿಸಿದ್ದಲ್ಲಿ ಆಯಾ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಿಗೆ ಲಿಖಿತ ದೂರು ನೀಡಿದ್ದಲ್ಲಿ ಕ್ರಮ ವಹಿಸಲಾಗುವುದೆಂದು ವಿಜಯನಗರದ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.