
ಬೂದು ನೀರು ನಿರ್ವಹಣಾ ಕಾಮಗಾರಿ ವೈಜ್ಞಾನಿಕವಾಗಿ ಅನುಷ್ಠಾನಿಸಿರಿ : ಜಿ.ಪಂ ಸಿಇಒ ರಾಹುಲ್
ಕರುನಾಡ ಬೆಳಗು ಸುದ್ದಿ
ಕೊಪ್ಪಳ,27- ಹಿಟ್ನಾಳ ಗ್ರಾಮದಲ್ಲಿ ಈಗಾಗಲೇ ಗುರುತಿಸಲಾದ ಸ್ಥಳಗಳಲ್ಲಿ ವೈಜ್ಞಾನಿಕವಾಗಿ ಬೂದು ನೀರು ನಿರ್ವಹಣಾ ಕಾಮಗಾರಿ ಅನುಷ್ಠಾನಿಸಿರೆಂದು ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆಯ ಸೂಚಿಸಿದರು.
ತಾಲೂಕಿನ ಹಿಟ್ನಾಳ ಗ್ರಾಮದಲ್ಲಿ ಬೂದು ನೀರು ನಿರ್ವಹಣಾ ಕಾಮಗಾರಿಗಳಿಗೆ ಗುರುತಿಸಲಾದ ಸ್ಥಳಗಳಿಗೆ ಭೇಟಿ ನೀಡಿ ಮಾತನಾಡಿದರು.
ಬೂದು ನೀರು ನಿರ್ವಹಣಾ ಕಾಮಗಾರಿಯನ್ನು ಅನುಷ್ಠಾನಿಸಲು ಪ್ರತಿ ತಾಲೂಕಿಗೆ 02 ಗ್ರಾಮ ಪಂಚಾಯತಿಗಳನ್ನು ಆಯ್ಕೆ ಮಾಡಿಕೊಂಡು ಅನುಷ್ಠಾನಿಸುವಂತೆ ಗ್ರಾ,ಮೀಣಾಭಿವೃದ್ದಿ ಆಯುಕ್ತಾಲಯದ ನಿರ್ದೇಶನ ನೀಡಿರುವ ಪ್ರಯುಕ್ತ ತಾಲೂಕಿನ ಹಿಟ್ನಾಳ, ಹಾಲರ್ವತಿ ಗ್ರಾಮ ಪಂಚಾಯತಿಗಳನ್ನು ಆಯ್ಕೆ ಮಾಡಿಕೊಂಡಿದ್ದು ವೈಜ್ಞಾನಿಕವಾಗಿ ಬೂದು ನೀರನ್ನು ಸಂಸ್ಕರಿಸಿ ಕಾಲುವೆ, ಕೆರೆ, ನಾಲಾಗಳಿಗೆ ಹರಿಸುವಂತೆ ಕ್ರಮವಹಿಸಲು ಸೂಚಿಸಿದರು.
ಬೂದು ನೀರು ಹೊರಗಡೆ ಹೋಗಲು ಗುರುತಿಸಲಾದ ಗುರುತುಗಳನ್ನು ವೀಕ್ಷಿಸಿದರು. ಗ್ರಾಮದಲ್ಲಿ ಬೂದು ನೀರು ಬರುವಂತಹ ಸ್ಥಳದಲ್ಲಿ ಚರಂಡಿ ಕಾಮಗಾರಿಗಳನ್ನು ಅನುಷ್ಠಾನಿಸತಕ್ಕದ್ದು. ಬೂದು ನೀರು ನಿರ್ವಹಣೆ ಕಾಮಗಾರಿಯನ್ನು ವಿವಿಧ ಯೋಜನೆಗಳಾದ 15ನೇ ಹಣಕಾಸು, ಸ್ವಚ್ಛ ಭಾರತ ಮಿಷನ್, ನರೇಗಾ ಯೋಜನೆಗಳ ಅನುದಾನವನ್ನು ಒಗ್ಗೂಡಿಸಿಕೊಂಡು ಅನುಷ್ಠಾನಿಸಲು ಸೂಚಿಸಿದರು.
ಗ್ರಾಮದಲ್ಲಿ ಅವಶ್ಯವಿದ್ದಲ್ಲಿ ವೈಯಕ್ತಿಕ ಮತ್ತು ಸಮುದಾಯ ಇಂಗು ಗುಂಡಿ ನಿರ್ಮಿಸಲು ಸ್ಥಳದ ಲಭ್ಯತೆ ನೋಡಿಕೊಂಡು ಅನುಷ್ಠಾನಿಸುವಂತೆ ಹಾಜರಿದ್ದ ಪಂಚಾಯತ ಅಭಿವೃದ್ದಿ ಅಧಿಕಾರಿ ಹಾಗು ತಾಂತ್ರಿಕ ಸಹಾಯಕರಿಗೆ ಸೂಚಿಸಿದರು. ಕಾಮಗಾರಿ ಉತ್ತಮ ಗುಣಮಟ್ಟದಿಂದ ಕೂಡಿರತಕ್ಕದ್ದು ಕಾಮಗಾರಿಯಿಂದ ಅಲ್ಲಿನ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮವಹಿಸಿರಿ.
ನಂತರ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಕರವಸೂಲಿಯ ಕುರಿತು ಪ್ರಗತಿ ಪರಿಶೀಲಿಸಿದರು. ಪ್ರತಿ ಮನೆಗೆ ವಿಧಿಸಲಾಗುತ್ತಿರುವ ಕರ ನಿರ್ಧರಣೆಯನ್ನು ಸಾಮಾನ್ಯ ಕಟ್ಟಡಗಳು, ವಾಣಿಜ್ಯ ಕಟ್ಟಡಗಳು ಹಾಗು ಖಾಲಿ ಜಾಗೆಗಳಿಗೆ ವಿಧಿಸಿದ ಕರ ವಸೂಲಾತಿಯನ್ನು ಖುದ್ದು ಪರಿಶೀಲಿಸಿದರು.
ಗ್ರಾಮ ಪಂಚಾಯತಿಗೆ ಸಾರ್ವಜನಿಕರು POS ಮಷಿನ್ ಮೂಲಕ ಕರ ಪಾವತಿಸುತ್ತಿರುವದರಿಂದ ನೇರವಾಗಿ ಬಾಪುಜೀ ಸೇವಾ ಕೇಂದ್ರದ ಖಾತೆಗೆ ಜಮೆಯಾಗುತ್ತದೆ ಎನ್ನುವ ಮಾಹಿತಿಯನ್ನು ಪಂಚಾಯತ ಅಭಿವೃದ್ದಿ ಅಧಿಕಾರಿ ಮಾಹಿತಿ ನೀಡಿದರು.
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಆಸ್ತಿಗಳ ಮಾಹಿತಿ, ಆಸ್ತಿಗಳಿಗೆ ಇಲ್ಲಿಯವರೆಗೆ ವಿತರಿಸಲಾದ ಫಾರಂ ನಂ.9&11 ಕುರಿತು ರಜಿಸ್ಟರ್ ಪರಿಶೀಲಿಸಿದರು.
ನಂತರ ಮುನಿರಾಬಾದ ಡ್ಯಾಂ ಗ್ರಾಮದ ಮೂನ್ ಲೈಟ್ ಡಾಬಾದ ಹತ್ತಿರ ಇರುವ ಚೆಕ್ ಪೋಸ್ಟ್ ಗೆ ಭೇಟಿ ನೀಡಿ ತಪಾಸಣಾ ತಂಡದ ಕಾರ್ಯ ವೈಖರಿಯನ್ನು ಪರಿಶೀಲಿಸಿದರು.
ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ, ನರೇಗಾ ಸಹಾಯಕ ನಿರ್ದೇಶಕ ಯಂಕಪ್ಪ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಹನಮಂತಪ್ಪ, ಪಂಚಾಯತ ಅಭಿವೃದ್ದಿ ಅಧಿಕಾರಿ ಸೋಮಶೇಖರ, ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ, ತಾಂತ್ರಿಕ ಸಂಯೋಜಕ ಯಮನೂರಪ್ಪ, ಕಾರ್ಯದರ್ಶಿ ಕೃಷ್ಣಮೂರ್ತಿ ಹಲಗೇರಿ, ತಾಂತ್ರಿಕ ಸಹಾಯಕ ರಮೇಶಕುಮಾರ, ಗ್ರಾಮ ಪಂಚಾಯತಿ ಸಿಬ್ಬಂದಿಗಳಾದ ಮಾರುತಿ, ದೊಡ್ಡಬಸವ ಹಾಜರಿದ್ದರು.