ಅಗ್ನಿವೀರ ಸೈನಿಕ ಹುದ್ದೆಯ ಲಿಖಿತ ಪರೀಕ್ಷೆಯ ತರಬೇತಿ ಶಿಬಿರ (1)

ಅಗ್ನಿವೀರ ಸೈನಿಕ ಹುದ್ದೆಯ ಲಿಖಿತ ಪರೀಕ್ಷೆಯ ತರಬೇತಿ ಶಿಬಿರ
ವಿದ್ಯಾರ್ಥಿಗಳು ಪತ್ರಿಕೆ ಓದುವ ಹವ್ಯಾಸ ರೂಢಿಸಿಕೊಳ್ಳಿ: ಡಿಸಿ ನಲಿನ್ ಅತುಲ್

ಕರುನಾಡ ಬೆಳಗು ಸುದ್ದಿ
ಕೊಪ್ಪಳ ೦೭- ಅಗ್ನಿವೀರ ಸೈನಿಕ ಹುದ್ದೆಯ ಲಿಖಿತ ಪರೀಕ್ಷೆ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಾಗಿ ಭಾಗವಹಿಸುವ ವಿದ್ಯಾರ್ಥಿಗಳು ನಿತ್ಯ ದಿನ ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಹೇಳಿದರು.
ಜಿಲ್ಲಾ ಪಂಚಾಯತ್, ಎಲ್ & ಟಿ ಕಂಪನಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ವಿಜಯೋನ್ನತಿ ಶಿಕ್ಷಣ ಸೇವಾ ಟ್ರಸ್ಟ್, ಕೊಪ್ಪಳ ಇವರ ಸಹಯೋಗದಲ್ಲಿ ಬುಧವಾರ ನಗರದ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾದ `ಅಗ್ನಿವೀರ ಸೈನಿಕ ಹುದ್ದೆಯ ಲಿಖಿತ ಪರೀಕ್ಷೆಯ ತರಬೇತಿ ಶಿಬಿರ-೨೦೨೪’ರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಈ ತರಬೇತಿ ಶಿಬಿರವು ಅಗ್ನಿವೀರ ಸೈನಿಕ ಹುದ್ದೆಯ ಲಿಖಿತ ಪರೀಕ್ಷೆ, ಎಫ್.ಡಿ.ಎ, ಎಸ್.ಡಿ.ಎ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗಲಿದೆ. ದೈನಂದಿನ ಓದುವ ಕ್ರಮವನ್ನು ಬದಲಾವಣೆ ಮಾಡಿಕೊಳ್ಳಬೇಕು. ದಿನನಿತ್ಯ ಓದುವ ವೇಳಾಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಿ. ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಿ. ಒಂದು ಯಾವುದೇ ಸರ್ಕಾರಿ ಕಾರ್ಯಕ್ರಮದ ಬಗ್ಗೆ ಅಥವಾ ಯಾವುದೇ ಒಂದು ವಿಷಯದ ಬಗ್ಗೆ ತಿಳುವಳಿಕೆಯನ್ನು ಪಡೆದುಕೊಳ್ಳಲು ಕನಿಷ್ಠ ಬೇರೆ-ಬೇರೆ ಪತ್ರಿಕೆಗಳನ್ನು ಹಾಗೂ ಲೇಖನಗಳನ್ನು ಓದಬೇಕು. ಅಂದಾಗ ಮಾತ್ರ ನಿಮಗೆ ಸ್ಪಷ್ಟ ಮಾಹಿತಿ ತಿಳಿಯುವುದಕ್ಕೆ ಅನುಕೂಲವಾಗುತ್ತದೆ ಎಂದರು. ಯಶಸ್ಸನ್ನು ಪಡೆಯುವುದಕ್ಕಾಗಿ “ಕಾಕ ಚೇಷ್ಟ, ಬಕೋ ಧ್ಯಾನಂ, ಸ್ವಾನ ನಿಂದ್ರ ತಥೈವಚ, ಅಲ್ಪ-ಆಹಾರಿ, ಗೃಹತ್ಯಾಗಿ’’ ಈ ಪಂಚ ಲಕ್ಷಣಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕಾಗೆಯ ದೃಢ ನಿರ್ಧಾರ ಮತ್ತು ಪರಿಶ್ರಮ, ಬಕ ಪಕ್ಷಿಯಂತೆ ಏಕಾಗ್ರತೆ, ಶ್ವಾನದಂತೆ ಲಘುವಾಗಿ ಮಲಗುವುದು, ಅಲ್ಪ ಪ್ರಮಾಣದ ಆಹಾರ ಸೇವನೆ, ಮನೆಯ ಕೆಲಸ ಕಾರ್ಯಗಳಿಗೆ ಹೆಚ್ಚು ಗಮನ ನೀಡದೆ ಓದಿನ ಕಡೆ ಹೆಚ್ಚು ಒತ್ತು ಕೊಡಬೇಕು. ಈ ಪಂಚ ಸೂತ್ರವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇದರ ಜೊತೆಗೆ ದೈಹಿಕ ಆರೋಗ್ಯ ಸದೃಢತೆಗೂ ಹೆಚ್ಚು ಗಮನ ನೀಡಬೇಕು. ಸಾಮಾಜಿಕ ಜಾಲತಾಣಗಳನ್ನು ಅಧ್ಯಯನ ಉದ್ದೇಶಕ್ಕೆ ಮಾತ್ರ ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ ಅವರು ಮಾತನಾಡಿ, ಅಗ್ನಿವೀರ ಸೈನಿಕ ಹುದ್ದೆಯ ಲಿಖಿತ ಪರೀಕ್ಷೆಯ ತರಬೇತಿ ಶಿಬಿರ ಆಯೋಜಿಸುವ ಕುರಿತಂತೆ ಮಾಧ್ಯಮದವರು ಸಲಹೆ ನೀಡಿದ್ದರು. ಅದರಂತೆ ವಿದ್ಯಾರ್ಥಿಗಳಿಗಾಗಿ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಸಾಮಾನ್ಯವಾಗಿ ಅಭ್ಯರ್ಥಿಗಳು ಶೇ.೯೯ ರಷ್ಟು ತರಬೇತಿಯನ್ನು ಪೂರ್ಣಗೊಳಿಸಿಯೇ ಪರೀಕ್ಷೆ ಬರೆಯುತ್ತಾರೆ. ಇದರಲ್ಲಿ ಕೆಲವರು ಪಾಸ್ ಮತ್ತು ಇನ್ನೂ ಕೆಲವರು ಫೇಲ್ ಆಗುತ್ತಾರೆ. ಅನುತ್ತೀರ್ಣರಾದವರಲ್ಲಿ ಸಾಮಾನ್ಯವಾಗಿ ನಾವು ಲಕ್ಕಿ ಇಲ್ಲ, ಅವರು ಲಕ್ಕಿ ಇದ್ದಾರೆ ಎಂಬ ಭಾವನೆ ಬರುತ್ತದೆ.

ಆದರೆ ಅರ್ಥ ಮಾಡಿಕೊಂಡರೆ, ಈ ರೀತಿಯ ಭಾವನೆ ಬರುವುದಿಲ್ಲ. ಸಫಲತೆ ಸಿಗದಿದ್ದಲ್ಲಿ ಯಾರೂ ಸಹ ನಿರಾಸಕ್ತರಾಗಬಾರದು. ಕಠಿಣ ಪರಿಶ್ರಮದಿಂದ ಕಡ್ಡಾಯವಾಗಿ ಯಶಸ್ಸು ಸಿಗುತ್ತದೆ. ನಿರಂತರ ಪ್ರಯತ್ನದಿಂದ ಸಫಲತೆ ಸಾಧ್ಯ. ಈ ಹಿನ್ನೆಲೆಯಲ್ಲಿ ನಿಮ್ಮ ಹೋರಾಟ ಇರಲಿ. ಪ್ರತಿ ದಿನ ೪ ರಿಂದ ೫ ಗಂಟೆಗಳ ಕಾಲ ಓದಿಗಾಗಿಯೇ ಮೀಸಲಿಡಿ. ಸಾಮಾಜಿಕ ಜಾಲತಾಣದಿಂದ ನಿಮ್ಮ ಓದಿಗೆ ಸಮಸ್ಯೆಯಾದರೆ ಅದನ್ನು ಇಂದೇ ನಿಲ್ಲಿಸಬೇಕು. ಅಗ್ನಿವೀರ ಸೈನಿಕ ಹುದ್ದೆಯ ಲಿಖಿತ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಈ ತರಬೇತಿ ಶಿಬಿರದ ಮೂಲಕ ಪ್ರೋತ್ಸಾಹಿಸಲಾಗುತ್ತಿದೆ. ಜಿಲ್ಲೆಯಿಂದ ಹೆಚ್ಚು ಅಭ್ಯರ್ಥಿಗಳು ಅಗ್ನಿವೀರ ಸೈನಿಕ ಹುದ್ದೆಗೆ ಆಯ್ಕೆಯಾಗಬೇಕು ಎಂದು ಹೇಳಿದರು. ಐ.ಎಫ್.ಎಸ್ ಅಧಿಕಾರಿಗಳಾದ ಕಾವ್ಯ ಚತುರ್ವೇದಿ ಅವರು ಮಾತನಾಡಿ, ಅಗ್ನಿವೀರ ಸೈನಿಕ ಹುದ್ದೆಗಳ ಲಿಖಿತ ಪರೀಕ್ಷೆಯು ರಾಷ್ಟಿçÃಯ ಮಟ್ಟದ ಪರೀಕ್ಷೆಯಾಗಿದೆ. ಈ ತರಬೇತಿ ಕಾರ್ಯಕ್ರಮದ ಸದ್ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳು ಯಶಸ್ವಿಯಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಲೆಕ್ಕಾಧಿಕಾರಿಗಳಾದ ಅಮಿನ್ ಅತ್ತಾರ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ರಾಜು ತಳವಾರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ವಿಠ್ಠಲ ಬಿ ಜಾಬಗೌಡರ, ತಾ.ಪಂ ಇಒ ದುಂಡಪ್ಪ ತುರಾದಿ, ಮಾರ್ಗದರ್ಶಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಸಂಸ್ಥೆಯ ಶರಣಯ್ಯ ಅಬ್ಬಿಗೇರಿಮಠ ಹಾಗೂ ಶ್ರೀಧರ ವಾಸಿ, ವಿಜಯೋನ್ನತಿ ಶಿಕ್ಷಣ ಸೇವಾ ಟ್ರಸ್ಟ್ನ ತಿಪ್ಪಣ್ಣ ಬಿಜಕಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!