
ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಂದ ಮತದಾನ ಜಾಗೃತಿ ಸ್ವೀಪ್ ಕಾರ್ಯಕ್ರಮ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 1- ಮೇ-7ರಂದು ಜರುಗುವ ಲೋಕಸಭಾ ಚುನಾವಣೆಯಲ್ಲಿ ಕಡ್ಡಾಯವಾಗಿ ಮತ ಚಲಾಯಿಸಬೇಕೆಂದು ಕೊಪ್ಪಳ ತಾಲೂಕ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗಂಗಮ್ಮ ಕಳಕಾಪುರ ಕರೆ ನೀಡಿದರು.
ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಂದ ಮತದಾನ ಜಾಗೃತಿಯ ಸ್ವೀಪ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಚುನಾವಣೆ ದಿನದಂದು ನಾವು ಸಮಯ ವ್ಯರ್ಥ ಮಾಡದೇ ಚುನಾವಣೆ ಆಯೋಗ ನಿಗದಿಪಡಿಸಿದ ದಾಖಲಾತಿಗಳನ್ನು ತೆಗೆದುಕೊಂಡು ಹೋಗಿ ನಮಗೆ ಸೂಕ್ತ ಎನಿಸುವ ವ್ಯಕ್ತಿಗೆ ಮತ ಚಲಾಯಿಸಬೇಕು. ಪ್ರತಿ ಕುಟುಂಬದಲ್ಲಿರುವ 18 ವರ್ಷ ಮೇಲ್ಪಟ್ಟ ಸದಸ್ಯರು ಮತದಾನ ಬಗ್ಗೆ ತಾತ್ಸಾರ ಮನೋಭಾವ ತಾಳದೇ ನಿರಾಂತಕವಾಗಿ ಮತ ಚಲಾಯಿಸಲು ಪ್ರೇರಪಣೆ ಮಾಡಬೇಕೆಂದು ತಿಳಿಸಿದರು. ಪ್ರತಿ ಮತ ದೇಶಕ್ಕೆ ಹಿತ ಎನ್ನುವಂತೆ ಮತದಾನದಿಂದ ದೂರ ಉಳಿಯಬಾರದು.
ಪ್ರತಿ ಮತವು ನಿರ್ಣಾಯಕವಾಗಿದೆ ಎಂದರು. ಮತದಾನದ ಬಗ್ಗೆ ತಾತ್ಸಾರ ಮನೋಭಾವ ತಾಳದೇ ಖುಷಿಯಿಂದ ನಿಮ್ಮ ಮತಗಟ್ಟೆಗೆ ಹೋಗಿ ಮತ ಚಲಾಯಿಸಿರಿ. ಯಾವುದೇ ರೀತಿಯ ಆಸೆ, ಅಮೀಷಗಳಿಗೆ ಒಳಗಾಗದೇ ನಿರ್ಭಯವಾಗಿ ಮತ ಚಲಾಯಿಸಿರೆಂದು ಕರೆ ನೀಡಿದರು.
ಸದರಿ ಸ್ವೀಪ್ ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿ ಡಾ. ಮಹೇಶ್ ಉಮಚಗಿ, ಸಿನಿಯರ್ ಪಿಎಚ್ ಓ ಗಳಾದ ವಂದನಾ, ಸಿದ್ದಲಿಂಗಮ್ಮ ಹಾಗು ಆರೋಗ್ಯ ಇಲಾಖೆಯ ಇತರೇ ಸಿಬ್ಬಂದಿಗಳು ಹಾಜರಿದ್ದರು.