
ಇಂದು ಜರುಗಲಿರುವ
ಕರಮುಡಿಯ ಕರವೀರಭದ್ರೇಶ್ವರ ಕಾರ್ತಿಕೋತ್ಸವ
(ದಿ.26—12—2023 ರಂದು ಜರುಗಲಿರುವ ಕಾರ್ತಿಕೋತ್ಸವ ನಿಮಿತ್ಯ)
ಕರುನಾಡ ಬೆಳಗು
ದಕ್ಷಬ್ರಹ್ಮ ಹಾಗೂ ಪ್ರಸೂತಿದೇವಿ ದಂಪತಿಗಳಿಗೆ 63 ಜನ ಹೆಣ್ಣು ಮಕ್ಕಳು ಇರುತ್ತಾರೆ. ಅದರಲ್ಲಿ 63 ನೇಯವಳೆ ದಾಕ್ಷಾಯಣಿ. ಇವಳನ್ನು ಶಿವನಿಗೆ ಕೊಟ್ಟು ಮದುವೆ ಮಾಡಲಾಗುವುದು. ದಕ್ಷಬ್ರಹ್ಮ ಒಂದು ಸಂದರ್ಭದಲ್ಲಿ ಶಿವ ಎಂಬ ಅಳಿಯನ ಮನೆಗೆ ಬಂದಾಗ ಶಿವನು ಆತನಿಗೆ ಗೌರವವನ್ನು ಕೊಡುವದಿಲ್ಲ . ಯಾಕೆಂದರೆ ದಕ್ಷಬ್ರಹ್ಮನು ಅಹಂಕಾರಿ ಯಾಗಿರುವದನ್ನು ಶಿವನು ಅರಿತಿರುತ್ತಾನೆ. ದಕ್ಷಬ್ರಹ್ಮ ತನಗಾದ ಅವಮಾನದ ಸೇಡನ್ನು ತೀರಿಸಿಕೊಳ್ಳಲು ದದೀಚಿ ಮಹಾೠಷಿಯ ನೇತ್ರತ್ವದಲ್ಲಿ “ಯಜ್ಞ” ವನ್ನು ಪ್ರಾರಂಭಿಸಿದಾಗ ದಾಕ್ಷಾಯಣಿ ಹಾಗೂ ಶಿವನನ್ನು ಹೊರತು ಪಡಿಸಿ ಎಲ್ಲಾ 62 ಜನ ಹೆಣ್ಣು ಮಕ್ಕಳನ್ನು ˌ ಅಳಿಯಂದಿರನ್ನು ಹಾಗೂ ದೇವಾನು ದೇವತೆಗಳನ್ನು ಆಹ್ವಾನಿಸಿ ಶಿವನಿಗೆ ಅವಮಾನ ಮಾಡಲು ಸಂಚು ಮಾಡುತ್ತಿರುತ್ತಾನೆ.
ಈ ಸಂದರ್ಭದಲ್ಲಿ ತಂದೆ ಮಾಡುವ ಯಜ್ಞದಲ್ಲಿ ನಾನು ಪಾಲ್ಗೊಳ್ಳುತ್ತೇನೆ ಅವಕಾಶ ಮಾಡಿಕೊಡಿ ಎಂದು ದಾಕ್ಷಾಯಣಿ ಪತಿದೇವನಾದ ಶಿವನಲ್ಲಿ ಬೇಡಿಕೊಳ್ಳುವಳು. ನಮಗೆ ಆಹ್ವಾನ ಮಾಡದೇ ಅವಮಾನ ಮಾಡಲೆಂದೆ ನಿನ್ನ ತಂದೆ ಯಜ್ಞ ಮಾಡುತ್ತಿದ್ದಾನೆ ಇಂತಹ ಸಮಯದಲ್ಲಿ ನೀನು ಅಲ್ಲಿಗೆ ಹೋಗುವದು ಉಚಿತವಲ್ಲವೆಂದು ಶಿವ ಅಂದಾಗಲೂ ತಂದೆ ಕರೆಯದಿದ್ದರೂ ತಾಯಿ ಇರುತ್ತಾಳೆ ನಾನು ಹೋಗುವೆ ಎಂದು ಹಠಹಿಡಿಯುತ್ತಾಳೆ. ನಿನ್ನ ಇಷ್ಟವಿದ್ದರೆ ಹೋಗು ನಾನು ಬರುವದಿಲ್ಲ ಎನ್ನುತ್ತಾನೆ ಶಿವ.
ಯಜ್ಞಕ್ಕೆ ದಾಕ್ಷಾಯಣಿ ಬಂದಾಗ ಅಲ್ಲಿ ಅವಳನ್ನು ಯಾರು ಬರಮಾಡಿಕೊಳ್ಳುವದಿಲ್ಲ . ಮತ್ತೇ ಅವಳು ಅವಮಾನಿತಳಾಗುತ್ತಾಳೆ. ಶಿವ ಬೇಡವೆಂದರೂ ನೀನು ಇಲ್ಲಿಗೆ ಬಂದೆ ಈಗ ಅವನಿಗೆ ಹೇಗೆ ಮುಖ ತೋರಿಸುವೆ ಎಂದು ನಂದಿಯು ಅಂದಾಗ ಹೌದು ನಾನು ಶಿವನಿಗೆ ಮುಖ ತೋರಿಸಲಾರೆ ಎಂದು ಯಜ್ಞ ನಡೆಯುವ ಅಗ್ನಿಕುಂಡದಲ್ಲಿ ಹಾರಿ ದಹನವಾಗುತ್ತಾಳೆ. ಈ ವಿಷಯ ಶಿವನಿಗೆ ಗೊತ್ತಾದಗ ಕೋಪಗೊಂಡು ಕೈಲಾಸದಲ್ಲಿ ಉಗ್ರ ನರ್ತನ ಮಾಡುತ್ತಾ ಮೂರನೇ ಉರಿಗಣ್ಣು ತೆರೆದಾಗ ಆ ಅಗ್ನಿಯಲ್ಲಿ ಅವತರಿಸಿದವನೇ ಕರವೀರಭದ್ರನೆಂದು ಪುಟ್ಟರಾಜ ಕವಿಗಳ ರಚಿಸಿದ ಪುರಾಣದಲ್ಲಿ ಉಲ್ಲೇಖಿಸಿದ್ದಾರೆ.
ಮುಂದೆ ಕರವೀರಭದ್ರನು ಅಹಂಕಾರದಿಂದ ಮೆರೆಯುತ್ತಿರುವ ದಕ್ಷಬ್ರಹ್ಮನ ರುಂಡವನ್ನು ಸಂಹರಿಸುತ್ತಾನೆ.ಆಗ ಪ್ರಸೂತಿ ದೇವಿ ಕರವೀರಭದ್ರನ ಪಾದಕ್ಕೆ ಏರಗಿ ನನ್ನ ಮುತ್ತ್ಯೇದೆಭಾಗ್ಯವನ್ನು ಕಸಿದುಕೊಳ್ಳದಿರು ಎಂದು ಪ್ರಾರ್ಥಿಸಿದಾಗ ಉತ್ತರ ದಿಕ್ಕಿನಲ್ಲಿ ಬಿದ್ದಿರುವ ಟಗರಿನ ತಲೆಯನ್ನು ದಕ್ಷಬ್ರಹ್ಮನಿಗೆ ಇಟ್ಟಾಗ ಜೀವಕಳೆ ಮರುಕಳಿಸುತ್ತದೆ. ಅಂದಿನಿಂದ ಕರವೀರಭದ್ರನ ಸೇವಕರಾಗಿ ದಕ್ಷಬ್ರಹ್ಮ ಬಲಕ್ಕೆ ಹಾಗೂ ಪ್ರಸೂತಿದೇವಿಯವರು ಎಡಕ್ಕೆ ನಿಂತಿರುವ ಭಾವಚಿತ್ರವನ್ನು ಕಾಣಬಹುದಾಗಿದೆ.
ಆಂಜನೇಯನಿಗೂ ಕರವೀರಭಧ್ರನೆ ಲಿಂಗಧಾರಣೆ ಮಾಡಿದ್ದಾನೆ ಎನ್ನಲಾಗಿದೆ. ಕಲಿಯುಗದಲ್ಲಿಯೂ ಕರವೀರಭಧ್ರನ ಮೇಲೆ ನಂಬಿಕೆಇಟ್ಟವರನ್ನು ಅವನು ಸದಾ ರಕ್ಷಿಸುತ್ತಾನೆ ಎನ್ನುವ ನಿದರ್ಶನಗಳು ಸಾಕಷ್ಟಿವೆ.
ವೀರಪ್ಪ ಮಲ್ಲಪ್ಪ ನಿಂಗೋಜಿ
ಯಲಬುರ್ಗಾ