
ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗೆ ಮೇಘಾಲಯ ತಂಡ ಭೇಟಿ: ಅಧ್ಯಾಯನ
ಮೇಘಾಲಯದಲ್ಲಿ ಬಾಲ್ಯಾರಂಭಿಕ ಶಿಕ್ಷಣ, ಕಲಿಕಾವಸ್ಥೆ ಜಾರಿಗೆ ಪ್ರೇರಣೆ ನೀಡಿದ ವಿಜಯನಗರ
ಕರುನಾಡ ಬೆಳಗು ಸುದ್ದಿ
ಹೊಸಪೇಟೆ(ವಿಜಯನಗರ) : ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದ ಮೇಘಾಲಯದ ವಿವಿಧ ಇಲಾಖೆಗಳ ತಂಡಕ್ಕೆ ತಮ್ಮ ರಾಜ್ಯದಲ್ಲಿ ಮಕ್ಕಳ ಬಾಲ್ಯಾರಂಭಿಕ ಶಿಕ್ಷಣ, ಕಲಿಕಾವಸ್ಥೆಯನ್ನು ಜಾರಿಗಾಗಿ ವಿಜಯನಗರ ಜಿಲ್ಲೆಯಿಂದ ಪ್ರೇರಣೆ ದೊರೆತಿದೆ.
ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಬುನಾದಿ ಶಿಕ್ಷಣವು ತುಂಬಾ ಮಹತ್ವವಾದದ್ದು, ಈ ನಿಟ್ಟಿನಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿಯೇ ವಿಜಯನಗರ ಜಿಲ್ಲೆ ಹೆಸರಾಗಿದೆ.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ, ಕಲಬುರಗಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ವಿಜಯನಗರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕಲಿಕೆ-ಟಾಟಾ ಟ್ರಸ್ಟ್ ಸಹಯೋಗದಲ್ಲಿ 2017-18ನೇ ಸಾಲಿನಿಂದ ಜಿಲ್ಲೆಯ 5 ಯೋಜನೆಗಳಲ್ಲಿ 1590 ಅಂಗನವಾಡಿ ಕೇಂದ್ರಗಳಿಗೆ ಬರುವ 3 ರಿಂದ 6 ವರ್ಷದ ಮಕ್ಕಳ ಕಲಿಕೆಯು ಸಮೃದ್ಧವಾಗಿಸುವ ಹಾಗೂ ಗುಣಾತ್ಮಕ ಬಾಲ್ಯಾರಂಭಿಕ ಶಿಕ್ಷಣವನ್ನು ಹೊದಗಿಸುವ ಉದ್ದೇಶದಿಂದ ಶಾಲಾಪೂರ್ವ ಶಿಕ್ಷಣ ಬಲವರ್ಧನೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುತ್ತಿದೆ.
ಶಾಲಾಪೂರ್ವ ಶಿಕ್ಷಣ ಬಲವರ್ಧನೆ ಕಾರ್ಯಕ್ರಮದ ಅಡಿಯಲ್ಲಿ ಜಿಲ್ಲೆಯ ಅಧಿಕಾರಿ ವರ್ಗದವರಿಗೆ ಪ್ರಾದೇಶಿಕ ಮಟ್ಟದಲ್ಲಿ ಮಕ್ಕಳ ಬೆಳವಣಿಗೆ ಆಯಾಮಗಳ ಕುರಿತಂತೆ ಎರಡು ಹಂತದಲ್ಲಿ ಕಾರ್ಯಗಾರದ ಮೂಲಕ ತರಬೇತಿಗಳಾಗಿವೆ. ಅಲ್ಲದೆ ಇಲಾಖೆಯ ಅಂಗನವಾಡಿ ಮೇಲ್ವಿಚಾರಕಿಯರಿಗೆ 5 ಹಂತದಲ್ಲಿ ಶಾಲಾಪೂರ್ವ ಶಿಕ್ಷಣ ಚಟುವಟಿಕೆಗಳ ಕುರಿತು ತರಬೇತಿಗಾಳಗಿವೆ. ಕ್ಷೇತ್ರ ಮಟ್ಟದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ 4 ಹಂತಗಳಲ್ಲಿ ತರಬೇತಿಗಳಾಗಿವೆ ಮತ್ತು ಸಹಾಯಕಿಯರಿಗೂ ಸಹ ಎರಡು ಹಂತಗಳಲ್ಲಿ ಶಾಲಾಪೂರ್ವ ಶಿಕ್ಷಣದ ಆಟದ ಮೂಲಕ ಕಲಿಕೆ ಚಟುವಟಿಕೆಗಳಾದ ಮುಕ್ತ ಆಟ, ಗಣಿತ ಚಟುವಟಿಕಗಳು, ಭಾಷೆ ಚಟುವಟಿಕೆಗಳು, ಬೌದ್ಧಿಕ ಚಟುವಟಿಕೆಗಳು, ಮಕ್ಕಳನ್ನು ಕ್ರಿಯಾಶೀಲರನ್ನಾಗಿಸುವ ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಮಕ್ಕಳ ಕಲಿಕೆಯ ಗುಣಮಟ್ಟವನ್ನು ಸುಧಾರಿಸುವಲ್ಲಿ ಪ್ರಯತ್ನಿಸುತ್ತಿದೆ.
ಜಿಲ್ಲೆಯಲ್ಲಿ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ಉದ್ದೇಶದಿಂದ ಜಿಲ್ಲೆಯ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸಹ ಅಂಗನವಾಡಿ ಕೇಂದ್ರಗಳಿಗೆ ಭೇಟಿನೀಡಿದಾಗ ಕಾರ್ಯಕ್ರಮವನ್ನು ಪರಿಶೀಲನೆಮಾಡಿ ಇಲಾಖೆಯ ಅಧಿಕಾರಿಗಳಿಗೆ ಮಾರ್ಗದರ್ಶಿಸುತ್ತಿದ್ದಾರೆ. ಅಲ್ಲದೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಹಾಗೂ ಜಿಲ್ಲಾ ನಿರೂಪಣಾಧಿಕಾರಿ, ಯೋಜನೆಯ ಅಧಿಕಾರಿಗಳ ಹಾಗೂ ಮೇಲ್ವಿಚಾರಕಿಯರ ಸಭೆಗಳಲ್ಲಿ ಪ್ರಗತಿ ಪರಿಶೀಲನೆ ಮಾಡುವ ಮೂಲಕ ಕಾರ್ಯಕ್ರಮದ ಯಶಸ್ವಿಯಾಗಿಸುವ ನಿಟ್ಟಿನಲ್ಲಿ ಮಾರ್ಗದರ್ಶನ ಮಾಡಲಾಗುತ್ತಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಶಾಲಾಪೂರ್ವ ಶಿಕ್ಷಣವು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲದೇ ದೇಶದ ಹಲವು ರಾಜ್ಯಗಳಿಗೆ ಮಾದರಿಯಾಗಿ ಹೊರಹೊಮ್ಮಿದೆ.
ವಿಜಯನಗರ ಜಿಲ್ಲೆಯ ಅಂಗನವಾಡಿಗಳಲ್ಲಿ ನಡೆಯುತ್ತಿರುವ ಶಾಲಾಪೂರ್ವ ಶಿಕ್ಷಣವನ್ನು ಅಧ್ಯಾಯಿಸಲು ಕಳೆದ 8 ತಿಂಗಳಲ್ಲಿ, ಛತ್ತಿಸಗಡ, ಆಂಧ್ರಪ್ರದೇಶ, ಮಧ್ಯಪ್ರದೇಶ, ಉತ್ತರಪ್ರದೇಶ, ರಾಜಸ್ತಾನ ರಾಜ್ಯಗಳಲ್ಲದೆ ಹಲವು ರಾಜ್ಯಗಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು, ನೀತಿ ಆಯೋಗದ ಅಧಿಕಾರಿಗಳು ಹಾಗೂ ಶಾಲಾಪೂರ್ವ ಶಿಕ್ಷಣ ಮತ್ತು ಶಾಲಾ ಶಿಕ್ಷಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಲವಾರು ಸಂಘ ಸಂಸ್ಥೆಗಳು ಶಿಕ್ಷಣ ಆಸಕ್ತರು ಭೇಟಿ ನೀಡಿ ಶಾಲಾಪೂರ್ವ ಶಿಕ್ಷಣವನ್ನು ಅಧ್ಯಾಯನ ಮಾಡಿರುತ್ತಾರೆ.
ಶನಿವಾರ (ಡಿ.2ರಂದು) ಜಿಲ್ಲೆಯ ಹೊಸಪೇಟೆ ಶಿಶು ಅಭಿವೃದ್ಧಿ ಯೋಜನೆಯ ಗಾಧಿಗನೂರು ವಲಯದ ಗಾಧಿಗನೂರು 4ನೇ ಅಂಗನವಾಡಿ ಕೇಂದ್ರಕ್ಕೆ ಹಾಗೂ ಬೈಲವದ್ದೀಗೇರಿ 3ನೇ ಅಂಗನವಾಡಿ ಕೇಂದ್ರಗಳಿಗೆ ಮೇಘಾಲಯ ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ವರ್ಗವು ಭೇಟಿನೀಡಿ ಅಂಗನವಾಡಿಯ ಕಲಿಕಾ ಕೊಠಡಿಯ ಆಯೋಜನೆ, ಮಕ್ಕಳ ಕಲಿಕಾ ಪೂರಕ ಸಾಮಗ್ರಿಗಳನ್ನು (ಇಲಾಖೆಯಿಂದ ನೀಡಿದ ಹಾಗೂ ಕಾರ್ಯಕರ್ತೆಯರು ಸಂಗ್ರಹಿಸಿ, ತಯಾರಿಸಿದ ಕಲಿಕಾ, ಆಟಿಕೆ ಸಾಮಗ್ರಿಗಳು), ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯವರು ಮಕ್ಕಳಿಗೆ ಕೈಗೊಳ್ಳುವ ಚಟುವಟಿಕೆಗಳನ್ನು ಅವಲೋಕಿಸಿ ವರದಿ ಸಂಗ್ರಹಿಸಿದರು. ಈ ವೇಳೆ ಅಂಗನವಾಡಿ ಕೇಂದ್ರವನ್ನು ನೋಡಿ ಸಂತೋಷ ವ್ಯಕ್ತಪಡಿಸಿದ ಅವರು, ತಮ್ಮ ರಾಜ್ಯದಲ್ಲಿ ಈ ರೀತಿಯಾದ ಮಕ್ಕಳಿಗೆ ಕಲಿಕಾವ್ಯವಸ್ಥೆ ಇಲ್ಲ. ಕರ್ನಾಟಕದಲ್ಲಿ ತುಂಬಾ ಚೆನ್ನಾಗಿ 3 ರಿಂದ 6 ವರ್ಷದ ಮಕ್ಕಳಿಗೆ ಬಾಲ್ಯಾರಂಭಿಕ ಶಿಕ್ಷಣವನ್ನು ನೀಡಲಾಗುತ್ತಿದೆ. ನಮ್ಮಲ್ಲಿಯು ಸಹ ಇದೇ ರೀತಿಯ ವ್ಯವಸ್ಥೆ ಮಾಡಿಕೊಳ್ಳಲು ಈ ಕ್ಷೇತ್ರಭೇಟಿಯು ಪ್ರೇರಣೆ ನೀಡಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ವೇತಾ ಎಸ್., ಜಿಲ್ಲಾ ನಿರೂಪಣಾಧಿಕಾರಿ ಸುಭದ್ರಾದೇವಿ, ಶಾಲಾಪೂರ್ವ ಶಿಕ್ಷಣದ ಹಿರಿಯ ಅಧಿಕಾರಿ ಡಾ. ಚಿತ್ಕಲಾಂಬ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿಂಧೂ, ಹಿರಿಯ ಮೇಲ್ವಿಚಾರಕಿ ಅಂಬುಜ, ವಲಯದ ಮೇಲ್ವಿಚಾರಕಿಯರಾದ ಲಕ್ಷ್ಮಿದೇವಿ, ಎಲ್.ಡಿ ನಧಾಫ್, ನಸೀಮ ಬೇಗಮ್, ಸುಜಾತ, ಕಾರ್ಯಕ್ರಮದ ಜಿಲ್ಲಾ ವ್ಯವಸ್ಥಾಪಕ ಕೊಟ್ರೇಶ ಎ.ವೈ., ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.ನಂತರ ಮೇಘಾಲಯದ ವಿವಿಧ ಇಲಾಖೆಗಳ ಅಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ, ಜಿಲ್ಲೆಯಲ್ಲಿನ ಮಕ್ಕಳ ಶಾಲಾ ಪೂರ್ವ ಶಿಕ್ಷಣ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಅವರು ಜಿಲ್ಲೆಯ ಶಾಲಾಪೂರ್ವ ಶಿಕ್ಷಣವು ದೇಶದಲ್ಲಿ ಮುಂಚೂಣಿಯಲ್ಲಿ ರುವುದು ತುಂಬಾ ಖುಷಿಯಿದೆ. ಮಕ್ಕಳ ಕಲಿಕೆಗೆ ಶಾಲಾಪೂರ್ವ ಶಿಕ್ಷಣವು ಮಹತ್ತರವಾದ ಸ್ಥಾನಪಡೆದುಕೊಂಡಿದೆ. ಜಿಲ್ಲೆಯಲ್ಲಿ ಕಾರ್ಯಕ್ರಮದ ಇನ್ನೂ ಪರಕಾರಿಗೊಳಿಸುವ ನಿಟ್ಟಿನಲ್ಲಿ ಸಾಗುತ್ತೇವೆ ಎಂದು ಹೇಳಿದರು.