
ಕೊಪ್ಪಳದ ಪ್ರಥಮ ಜಿಲ್ಲಾಧಿಕಾರಿ ಇನ್ನಿಲ್ಲ
ಕೊಪ್ಪಳ, 29- ಜಿಲ್ಲೆಯ ಪ್ರಥಮ ಜಿಲ್ಲಾಧಿಕಾರಿ ಕೆ ಶಿವರಾಮ್ ಗುರುವಾರ ನಿಧನರಾಗಿದ್ದಾರೆ.
ಕನ್ನಡದಲ್ಲೆ IAS ಪರೀಕ್ಷೆ ಬರೆದು ಹೆಸರು ಮಾಡಿದ್ದ ಅವರು. ಕೊಪ್ಪಳ ಜಿಲ್ಲೆಯಾದಾಗ ಜಿಲ್ಲೆಯ ಪ್ರಥಮ ಜಿಲ್ಲಾಧಿಕಾರಿಯಾಗಿ ಸೇವೆಸಲ್ಲಿಸಿ ಇಲ್ಲಿ ಸರಳ ಆಡಳಿತ ನೀಡಿ ಹೆಸರಾಗಿದ್ದರು.
ಕಳೆದ ತುಂಬಾ ದಿನಗಳಿಂದ ಅನಾರೋಗ್ಯ ದಿಂದ ತೀವ್ರ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಸಂತಾಪ ; ಕೊಪ್ಪಳ ಜಿಲ್ಲೆಯ ಮೊದಲ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ಕೆ.ಶಿವರಾಮ್ ಅವರು ನಿಧನಕ್ಕೆ ಕೊಪ್ಪಳ ಜಿಲ್ಲಾಡಳಿತದ ಪರವಾಗಿ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಗೌರವಪೂರ್ವಕವಾಗಿ ಸಂತಾಪ ಸೂಚಿಸಿದ್ದಾರೆ.
ಕೆ.ಶಿವರಾಮ ಅವರು ಈ ನಾಡು ಕಂಡ ನೆಚ್ಚಿನ ಹಿರಿಯ ಐಎಎಸ್ ಅಧಿಕಾರಿಯಾಗಿದ್ದರು. 1997ರ ಅವಧಿಯಲ್ಲಿ ಅವಿಭಜಿತ ರಾಯಚೂರು ಜಿಲ್ಲೆಯಿಂದ ಕೊಪ್ಪಳವು ಬೇರ್ಪಡೆಯಾಗಿ ನೂತನ ಜಿಲ್ಲೆಯಾಗಿ ಉದಯವಾದಾಗ ಐಎಎಸ್ ಅಧಿಕಾರಿ ಶ್ರೀ ಕೆ.ಶಿವರಾಮ ಅವರು ಕೊಪ್ಪಳ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿ `ಕೊಪ್ಪಳ ಜಿಲ್ಲೆಯ ಮೊದಲ ಜಿಲ್ಲಾಧಿಕಾರಿ’ ಎನ್ನುವ ವಿಶೇಷತೆಗೆ ಪಾತ್ರರಾದರು.
ಹಿಂದುಳಿದ ಪ್ರದೇಶ ಎನ್ನುವ ಹಣೆಪಟ್ಟಿ ಹೊತ್ತಿದ ಕೊಪ್ಪಳ ಜಿಲ್ಲೆಯನ್ನು `ನೂತನ ಜಿಲ್ಲೆ’ ಎಂದು ಸರ್ಕಾರವು ಘೋಷಿಸಲ್ಪಟ್ಟಾಗ ಜಿಲ್ಲೆಯ ಜನತೆಗೆ ಸಂಭ್ರಮದ ಜೊತೆಗೆ ಬಹಳಷ್ಟು ನಿರೀಕ್ಷೆಗಳಿರುತ್ತವೆ. ಆ ವೇಳೆ ಕೆ.ಶಿವರಾಮ ಅವರು ಜನರ ಸಂಭ್ರಮದ ಜೊತೆಗೆ ಬೆರೆತು ಹಲವಾರು ಸವಾಲುಗಳನ್ನು ಸಹ ಸಮರ್ಥವಾಗಿ ನಿರ್ವಹಣೆ ಮಾಡಿದ್ದರಿಂದ ಜಿಲ್ಲೆಯಾಗಿ ಘೋಷಣೆಯಾದ ಕೆಲವೇ ವರ್ಷಗಳಲ್ಲಿ ಕೊಪ್ಪಳ ಜಿಲ್ಲೆಯು ಜಿಲ್ಲಾಡಳಿತ ಭವನ ಕಾಣುವಂತಾಗಿದ್ದು ಕೂಡ ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿ ಉಳಿದಿದೆ.
ಕೆ.ಶಿವರಾಮ ಅವರು ದಕ್ಷ ಆಡಳಿತಗಾರಾಗಿದ್ದರು. ಆಡಳಿತ ಮತ್ತು ಸೇವೆಗೆ ಮತ್ತೊಂದು ಹೆಸರು ಕೆ.ಶಿವರಾಮ ಎಂದು ಜನರು ಮಾತನಾಡುವ ಹಾಗೆ ಕಾರ್ಯ ನಿರ್ವಹಿಸಿ ನಾಡಿನಲ್ಲಿ ಉತ್ತಮ ಐಎಎಸ್ ಅಧಿಕಾರಿ ಎನ್ನುವ ಕೀರ್ತಿಗೆ ಪಾತ್ರರಾಗಿದ್ದರು. ಜೀವನಪ್ರೀತಿ ಹಾಗೂ ವಿಶೇಷ ಮಾನವೀಯ ಗುಣಗಳನ್ನು ಹೊಂದಿದ ಅಪರೂಪದ ವ್ಯಕ್ತಿತ್ವ ಅವರದಾಗಿತ್ತು. ನೌಕರ ವರ್ಗದ ಬಗ್ಗೆ ಅಪಾರ ಕಾಳಜಿ ಹೊಂದಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಹಿರಿಯ ಐಎಎಸ್ ಅಧಿಕಾರಿ ಕೆ.ಶಿವರಾಮ ಅವರ ನಿಧನದ ಸುದ್ದಿ ಕೇಳಿ ಕೊಪ್ಪಳ ಜಿಲ್ಲೆಯ ಜನರು ದುಃಖ ವ್ಯಕ್ತಪಡಿಸಿದ್ದಾರೆ. ಕೆ.ಶಿವರಾಮ ಅವರು ಜಿಲ್ಲಾಧಿಕಾರಿಗಳಾಗಿದ್ದ ವೇಳೆ ಸೇವೆಯಲ್ಲಿದ್ದ ಅಧಿಕಾರಿ ವರ್ಗದವರು ಸಹ ದುಃಖಿತರಾಗಿದ್ದಾರೆ. ಕೊಪ್ಪಳ ಜಿಲ್ಲಾಡಳಿತವು ಗೌರವಪೂರ್ವಕವಾಗಿ ಸಂತಾಪ ತಿಳಿಸುತ್ತದೆ ಎಂದು ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.