IMG-20240327-WA0018(1)

ಡಿ.ಕೆ.ಶಿವಕುಮಾರ್, ಹೇಮಂತ್ ನಿಂಬಾಳ್ಕರ್ ವಿರುದ್ಧ ಚುನಾವಣಾ ಕಮಿಷನರ್‍ಗೆ ಬಿಜೆಪಿ ದೂರು

ಕರುನಾಡ ಬೆಳಗು ಸುದ್ದಿ
ಬೆಂಗಳೂರು, 27- ನಗರದ ನೃಪತುಂಗ ರಸ್ತೆಯಲ್ಲಿರುವ ಚುನಾವಣಾ ಆಯೋಗ ಕಚೇರಿಗೆ ಇಂದು ಭೇಟಿ ನೀಡಿದ ಬಿಜೆಪಿ ನಿಯೋಗವು ಡಿ.ಕೆ.ಶಿವಕುಮಾರ್ ಅವರ ವಿರುದ್ಧ ದೂರು ನೀಡಿದೆ.

ಡಿ.ಕೆ.ಶಿವಕುಮಾರ್ ಅವರು ತಮ್ಮ ಅಧಿಕೃತ ಫೇಸ್‍ಬುಕ್ ಪೇಜಿನಲ್ಲಿ ಕರ್ನಾಟಕ ಸರಕಾರದ ಚಿಹ್ನೆ, ಕಾಂಗ್ರೆಸ್ ಪಕ್ಷದ ಚಿಹ್ನೆ ಬಳಸಿಕೊಂಡು ಡಿ.ಕೆ.ಸುರೇಶ್ ಅವರ ಪರವಾಗಿ ಚುನಾವಣಾ ಪ್ರಚಾರ ಮಾಡಿ ಚುನಾವಣಾ ನೀತಿಸಂಹಿತೆ ಉಲ್ಲಂಘಿಸಿದ್ದಾಗಿ ಗಮನಕ್ಕೆ ತರಲಾಯಿತು.
ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ, ರಾಜ್ಯ ವಕ್ತಾರರಾದ ಎಚ್.ಎನ್. ಚಂದ್ರಶೇಖರ್, ಹೆಚ್. ವೆಂಕಟೇಶ್ ದೊಡ್ಡೇರಿ, ಕಾನೂನು ಪ್ರಕೋಷ್ಟದ ರಾಜ್ಯ ಸಂಚಾಲಕ ವಸಂತ್ ಕುಮಾರ್ ಅವರು ಈ ದೂರನ್ನು ಸಲ್ಲಿಸಿದ್ದಾರೆ.
ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ ಅವರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಮೀಷನರ್ ಹೇಮಂತ್ ನಿಂಬಾಳ್ಕರ್ ಅವರನ್ನು ಆ ಹುದ್ದೆಯಿಂದ ವರ್ಗಾವಣೆ ಮಾಡಲು ಕೋರಲಾಗಿದೆ.

ಅವರು ತಮ್ಮ ಕಚೇರಿಯನ್ನು ಬಳಸಿಕೊಂಡು ಪತ್ನಿ, ಉತ್ತರ ಕನ್ನಡದ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಪರವಾಗಿ ಮತ ನೀಡಲು ಕೇಳುತ್ತಿರುವುದಾಗಿ ಮಾಹಿತಿ ಸಿಕ್ಕಿದೆ. ಆದ್ದರಿಂದ ತಕ್ಷಣ ಅವರನ್ನು ಅಲ್ಲಿಂದ ವರ್ಗಾವಣೆ ಮಾಡುವಂತೆ ಚುನಾವಣಾ ಕಮೀಷನರ್ ಅವರಿಗೆ ಮನವಿ ಮಾಡಿದ್ದೇವೆ.            ರಾಜ್ಯದ ಒಳಗಡೆ ಇದ್ದರೆ ಮತ್ತೆ ಪ್ರಭಾವ ಬಳಸುವ ಸಾಧ್ಯತೆ ಇದ್ದು, ಅವರಿಗೆ ಕರ್ನಾಟಕದಿಂದ ಹೊರಗಡೆ ಕೆಲಸ ಮಾಡಲು ಅವಕಾಶ ಕೊಡಿ ಎಂದು ವಿನಂತಿಸಿದ್ದಾಗಿ ವಿವರಿಸಿದರು.
ಚುನಾವಣಾ ವೇಳಾಪಟ್ಟಿ ನಾಳೆಯಿಂದ (ಮಾ.28) ಆರಂಭವಾಗಲಿದ್ದು, ಈ ಸಂಬಂಧ ಕೂಡಲೇ ಕ್ರಮ ಕೈಗೊಳ್ಳುವುದಾಗಿ ಚುನಾವಣಾ ಕಮೀಷನರ್ ತಿಳಿಸಿದ್ದಾರೆ ಎಂದರು.
ರಾಜ್ಯ ಸರಕಾರದ ಕೆಲವು ಸಚಿವರು ತಮ್ಮ ಅಧಿಕೃತ ಕಚೇರಿಗಳನ್ನು ಲೋಕಸಭಾ ಚುನಾವಣಾ ಕೆಲಸಕ್ಕಾಗಿ ದುರ್ಬಳಕೆ ಮಾಡಿಕೊಳ್ಳುವ ಸಂಬಂಧ ಇನ್ನೊಂದು ದೂರಿನಲ್ಲಿ ಗಮನ ಸೆಳೆಯಲಾಗಿದೆ. ಬಿಜೆಪಿ ಚುನಾವಣಾ ಬೋನಸ್ ಕುರಿತಂತೆ ವಾಟ್ಸ್ ಆಪ್ ನಕಲಿ ಸಂದೇಶದ ಕುರಿತು ಮತ್ತೊಂದು ದೂರು ಕೊಡಲಾಗಿದ್ದು, ಕ್ರಮ ಕೈಗೊಳ್ಳಲು ಕೋರಲಾಗಿದೆ.

Leave a Reply

Your email address will not be published. Required fields are marked *

error: Content is protected !!