Screenshot_2023_1101_093048

ನೆಲ‌, ಜಲ, ಭಾಷೆ ವಿಚಾರದಲ್ಲಿ‌ ರಾಜೀ ಪ್ರಶ್ನೆಯೇ ಇಲ್ಲ

ಸಚಿವ ಶಿವರಾಜ್ ತಂಗಡಗಿ

 ಎಲ್ಲಾ ಉದ್ದಿಮೆ,‌‌ ಶಿಕ್ಷಣ ಸಂಸ್ಥೆ ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಬಳಕೆ‌ ಆಗಲೇಬೇಕು

 ಕೇವಲ ದಂಡವಲ್ಲ, ಪರವಾನಗಿಯೇ ರದ್ದುಪಡಿಸುವ ಕಾನೂನು ಶೀಘ್ರ ‌ಜಾರಿ

ಕರುನಾಡ ಬೆಳಗು ಸುದ್ದಿ

ಬೆಂಗಳೂರು, ೨೭- ರಾಜ್ಯದ ನೆಲ, ಜಲ, ಭಾಷೆಯ ವಿಚಾರದಲ್ಲಿ ಯಾವುದೇ ರಾಜೀ ಇಲ್ಲ. ಎಲ್ಲಾ ವ್ಯಾಪಾರ ಉದ್ದಿಮೆ ಹಾಗೂ ಶಿಕ್ಷಣ ಸಂಸ್ಥೆಗಳ ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಬಳಕೆ‌ ಆಗಲೇಬೇಕು ಎಂಬುದರ ಬಗ್ಗೆ ಕಠಿಣ ನಿಯಮಗಳನ್ನು ರೂಪಿಸಲಾಗುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಹೇಳಿದರು.

ವಿಕಾಸಸೌಧದ ತಮ್ಮ‌ ಕೊಠಡಿಯಲ್ಲಿ ಬುಧವಾರ ಭೇಟಿಯಾದ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಉದ್ದಿಮೆ, ಶಿಕ್ಷಣ‌ ಸಂಸ್ಥೆಗಳಲ್ಲಿ ಶೇ.60ರಷ್ಟು ಕನ್ನಡ ಪದಗಳೇ ಇರಬೇಕು. ಈ ಸಂಬಂಧ‌‌ ಗೃಹ ಇಲಾಖೆ‌‌,‌ ಶಿಕ್ಷಣ ‌ಇಲಾಖೆಯೊಂದಿಗೆ ಕಾನೂನು ಜಾರಿಗೆ ತರಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಕನ್ನಡ ಸಮಗ್ರ ಭಾಷಾ ಅಭಿವೃದ್ಧಿ ವಿಧೇಯಕ ಮಸೂದೆ ವಿಧಾನಸಭೆ ಹಾಗೂ ವಿಧಾನಪರಿಷತ್ ನಲ್ಲಿ ಮಂಡನೆಯಾಗಿದೆ.

ಕೇವಲ ದಂಡ ವಿಧಿಸಿದರೆ ಪ್ರಯೋಜನವಿಲ್ಲ. ಶೇ.60ರಷ್ಟು ಕನ್ನಡ ‌ಬಳಕೆ‌ ಮಾಡದ ಉದ್ದಿಮೆಗಳ ಪರವಾನಗಿಯನ್ನು ರದ್ದು ಮಾಡುವಂತಹ ಕಠಿಣ ನಿಯಮ ಈ ಕಾನೂನಿನಲ್ಲಿ‌ ಇರಲಿದ್ದು, ಶೀಘ್ರ ಕಾನೂನನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದರು.

 ಟಾಸ್ಕ್‌‌ಪೋರ್ಸ್ ರಚನೆಗೆ ಚಿಂತನೆ:ಕನ್ನಡ ನಾಮಫಲಕಗಳ‌ ಅಳವಡಿಕೆ ಸಂಬಂಧ ಟಾಸ್ಕ್ ಪೋರ್ಸ್ ನ್ನು ರಚಿಸುವ ಚಿಂತನೆ ಮಾಡಲಾಗಿದೆ. ಕೆಲವು ಶಿಕ್ಷಣ ಸಂಸ್ಥೆಗಳು ಕೂಡ ಉದ್ದೇಶ ಪೂರ್ವಕವಾಗಿ ನಾಮಫಲಕದಲ್ಲಿ ಕನ್ನಡ ಅಳವಡಿಕೆ‌ ಮಾಡದಿರುವುದು ಗಮನಕ್ಕೆ ಬಂದಿದೆ.‌ ನಾವು ಅನ್ಯಭಾಷಿಕ ವ್ಯಾಪಾರಿಗಳನ್ನು ಗೌರವಿಸುತ್ತೇವೆ. ಅವರು ಇಲ್ಲಿನ‌ ಕಾನೂನನ್ನು ಗೌರವಿಸಬೇಕು. ಪ್ರತಿಯೊಂದು‌‌ ಇಲಾಖೆಯಲ್ಲಿನ‌ ಕಡತಗಳಲ್ಲಿ‌ ಕಡ್ಡಾಯವಾಗಿ ಅಧಿಕಾರಿಗಳು‌ ಕನ್ನಡವನ್ನೇ ಬಳಕೆ‌ ಮಾಡಬೇಕು ಎಂದರು.

ಕಲ್ಲೆಸೆತ‌ ಸರಿಯಲ್ಲ: ಕರ್ನಾಟಕ ರಕ್ಷಣಾ ವೇದಿಕೆ, ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆ ಇರಬೇಕು ಕೂಗಿಗೆ ನಮ್ಮ ಬೆಂಬಲ ಕೂಡ ಇದೆ. ಕನ್ನಡಪರ ಸಂಘಟನೆಗಳಷ್ಟೇ‌ ಕಳಕಳಿ‌ ಸರ್ಕಾರಕ್ಕೂ ಇದೆ.‌ ಇಲಾಖೆ‌ ಕೂಡ ಕನ್ನಡ ಬಳಕೆ‌ ಬಗ್ಗೆ ಶ್ರಮಿಸುತ್ತಿದೆ.‌ ಪ್ರತಿಭಟನೆ ಯಾವುದೇ ಕಾರಣಕ್ಕೂ ತೀವ್ರ ಸ್ವರೂಪ ಪಡೆಯಬಾರದು. ಯಾವುದೇ ಅಂಗಡಿಗಳ ಮೇಲೆ‌ ಕಲ್ಲು ಎಸೆಯುವಂತಹ ಘಟನೆ‌‌ ಸರಿಯಲ್ಲ. ಪ್ರತಿಭಟನೆ ಶಾಂತಿಯುತವಾಗಿ ನಡೆಯಲಿ ಎಂದು ಸಚಿವರು ಮನವಿ ಮಾಡಿದರು.

ಯಾವುದೇ ಸಮಾಜದ ಸಮಾವೇಶಗಳು ನಡೆದಾಗ ಆ ಸಮುದಾಯದ ಸಂಘಟನೆ‌ ಮಾಡುವ ನಿಟ್ಟಿನಲ್ಲಿ ಸಮಾವೇಶ ನಡೆದಿರುತ್ತವೆ. ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ‌ ಎಂದು ಸಚಿವ ಶಿವರಾಜ್ ತಂಗಡಗಿ ಅವರು ಹೇಳಿದರು.‌

ವೀರಶೈವ ಸಮಾಜದ ಸಮಾವೇಶದಲ್ಲಿ ಕಾಂತರಾಜು ‌ವರದಿ ತಿರಸ್ಕರಿಸುವ ನಿರ್ಣಯ ತೆಗೆದುಕೊಂಡಿದ್ದರಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಈ ಮೇಲಿನಂತೆ ಸಚಿವರು ಪ್ರತಿಕ್ರಿಯಿಸಿದರು.ಆ ಸಮಾಜದ ಸಂಘಟನೆಯಲ್ಲಿ ಇದೊಂದು ಬೇಡಿಕೆ. ಕಾಂತರಾಜು ವರದಿ ಜಾತಿಗೆ ಸೀಮಿತವಾದ ವರದಿ ಅಲ್ಲ. ಸಾಮಾಜಿಕ, ‌ಶೈಕ್ಷಣಿಕ, ಆರ್ಥಿಕತೆ ಬಗ್ಗೆ ತಿಳಿದುದಕೊಳ್ಳುವ ವರದಿ. ವರದಿ ಸ್ವೀಕಾರ ಮಾಡದೇ ವರದಿ ತಿರಸ್ಕಾರ ಮಾಡಿ ಎಂದು ಹೇಳುವುದು ಸರಿಯಲ್ಲ ಎಂದರು.

ಸಚಿವ ಸಂಪುಟದ ಸದಸ್ಯರೇ ಕಾಂತರಾಜು ಅವರ ವರದಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ, ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ. ವರದಿ ಸ್ವೀಕಾರ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಹೇಳಿದ್ದಾರೆ‌. ನಾವು ಯಾವುದೋ ಖಾಸಗಿ ಏಜೆನ್ಸಿಯಿಂದ ಈ ವರದಿ ತಯಾರು ಮಾಡಿಸಿಲ್ಲ.‌ ಸರ್ಕಾರದ ಅಧಿಕಾರಿಗಳು ಹಾಗೂ ಶಿಕ್ಷಕರು ಪ್ರತಿಯೊಂದು ಮನೆಗೆ ಹೋಗಿ ಸಮೀಕ್ಷೆ ನಡೆಸಿದ್ದಾರೆ. ವರದಿ ಸ್ವೀಕಾರ ಮಾಡಬಾರದು ಎಂಬುದು ತಪ್ಪು. ವರದಿ ಸೋರಿಕೆ ಆಗಿದೆ ಎಂಬುದು ಸುಳ್ಳು ಎಂದು ಸಚಿವರು ಉತ್ತರಿಸಿದರು.

Leave a Reply

Your email address will not be published. Required fields are marked *

error: Content is protected !!