
ನೇತ್ರ ತಪಾಸಣೆ: 11 ಜನರಿಗೆ ಉಚಿತ ಶಸ್ತ್ರ ಚಿಕಿತ್ಸೆ
ಕನ್ನಡಕ – ಔಷಧ ಉಚಿತ ವಿತರಣೆ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ೨೧- ತಾಲೂಕಿನ ಬೆಣಕಲ್ಲು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಉಚಿತ ನೇತ್ರ ತಪಾಸಣೆಯಲ್ಲಿ ತಪಾಸಣೆಗೆ ಒಳಗಾಗಿದ್ದ ಹಲವರಿಗೆ ಶಸ್ತ್ರಚಿಕಿತ್ಸೆ ಮಾಡಿ ಕನ್ನಡಕಗಳನ್ನು ವಿತರಿಸಲಾಯಿತು.
ಕನಕ ಜಯಂತ್ಯೋತ್ಸವ ನಿಮಿತ್ತ ಬೆಳಕು ಚಾರಿಟಬಲ್ ಟ್ರಸ್ಟ್(ರಿ) ಬಳ್ಳಾರಿ ನೇತ್ರಾಲಯ, ಬಳ್ಳಾರಿ ಹೃದಯಾಲಯ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದಲ್ಲಿ ತಾಲೂಕಿನ ಬೆಣಕಲ್ಲು ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಭಾನುವಾರ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿತ್ತು.
ಅಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ನಡೆದ ನೇತ್ರ ತಪಾಸಣಾ ಶಿಬಿರದಲ್ಲಿ ನೇತ್ರ ತಜ್ಞ ಡಾ.ಪರಸಪ್ಪ ಬಂದ್ರಕಳ್ಳಿ, ನೇತ್ರ ಶಸ್ತ್ರ ಚಿಕಿತ್ಸಕ ತಜ್ಞೆ ಡಾ.ಸಿ.ರೋಹಿಣಿ ಅವರು ತಪಾಸಣೆ ನಡೆಸಿದರು. ಸುಮಾರು 70 ಕ್ಕೂ ಹೆಚ್ಚು ಜನರು ಕಣ್ಣಿನ ತಪಾಸಣೆಗೆ ಒಳಗಾಗಿದ್ದು, ಈ ಪೈಕಿ ಶಸ್ತ್ರ ಚಿಕಿತ್ಸೆಯ ಅಗತ್ಯವುಳ್ಳ 11 ಜನರನ್ನು ಗುರುತಿಸಲಾಯಿತು.
ಮರುದಿನ ನ.20 ರಂದು ಸೋಮವಾರ ನಗರದ ಬಳ್ಳಾರಿ ಹೃದಯಾಲಯದಲ್ಲಿ ಆಯ್ದ 11 ಜನರಿಗೆ ಉಚಿತವಾಗಿ ಶಸ್ತ್ರ ಚಿಕಿತ್ಸೆ ಮಾಡಿ, ಔಷಧ, ಕನ್ನಡಕ ಸೇರಿ ಇತರೆ ಪರಿಕರಗಳನ್ನು ಸಹ ಉಚಿತವಾಗಿ ವಿತರಿಸಲಾಯಿತು.ವಿಮ್ಸ್ ಕನಕ ನೌಕರರ ಸಂಘದ ವ್ಯವಸ್ಥಾಪಕ ಸಿ.ರಾಮಚಂದ್ರ, ಮತ್ತು ಬೆಣಕಲ್ ಗ್ರಾಮದ ಹಿರಿಯರು, ಕಿರಿಯರು, ಗ್ರಾಮಸ್ಥರು ಇದ್ದರು.ನೇತ್ರಾಧಿಕಾರಿಗಳಾದ ಬಂಡಾರು ಮಂಜುನಾಥ್, ಕೆ.ಶಿವಕುಮಾರ್ ಸೇರಿ ಹಲವರು ಇದ್ದರು.