WhatsApp Image 2024-03-18 at 6.16.41 PM

ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ಪಕ್ಷಗಳು ಚುನಾವಣಾ ಆಯೋಗದ ಮಾರ್ಗಸೂಚಿ ಅನುಸರಿಸಲಿ : ಎಂ.ಎಸ್.ದಿವಾಕರ

ಕರುನಾಡ ಬೆಳಗು ಸುದ್ದಿ

ವಿಜಯನಗರ,18- ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ ಅವರು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾರ್ಚ 18ರಂದು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಕಚೇರಿ ಸಭಾಂಗಣದಲ್ಲಿ ಸಭೆ
ನಡೆಸಿ ಮಾತನಾಡಿದರು.

ಲೋಕಸಭಾ ಚುನಾವಣೆ-2024ಕ್ಕೆ ಮಾರ್ಚ 16ರಿಂದಲೇ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ. ಏಪ್ರೀಲ್ 12ರಂದು ರಂದು ಅಧಿಸೂಚನೆ ಹೊರಡಿಸಲಾಗುವುದು. ಮೇ 7ರಂದು ಮತದಾನ ಮತ್ತು ಜೂನ್ 4ರಂದು ಮತ ಎಣಿಕೆ ನಡೆಯಲಿದೆ. ಪುರುಷರು ಮತ್ತು ಮಹಿಳೆಯರು ಸೇರಿ ಒಟ್ಟು 11,18,543 ಮತದಾರರು ತಮ್ಮ ಮತಹಕ್ಕನ್ನು ಚಲಾಯಿಸಲು ಅರ್ಹರಿದ್ದಾರೆ ಎಂದು ತಿಳಿಸಿದರು.

ಜಿಲ್ಲೆಯ ಎಲ್ಲಾ ಸರ್ಕಾರಿ ಪ್ರವಾಸಿ ಮಂದಿರಗಳಲ್ಲಿ ರಾಜಕೀಯ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಎಲ್ಲಾ ನಾಮ ನಿರ್ದೇಶನಗೊಂಡಿರುವಂತಹ ನಿಗಮ ಮಂಡಳಿಗಳನ್ನು ಹಾಗೂ ಸಮಿತಿಗಳನ್ನು ಸಂಪೂರ್ಣ ಚುನಾವಣೆ ಪ್ರಕ್ರಿಯೆ ಮುಕ್ತಾಯದವರೆಗೆ ಅಮಾನತ್ತಿನಲ್ಲಿಡಲಾಗಿದೆ ಎಂದು ತಿಳಿಸಿದರು.

ರಾಜಕೀಯ ಪಕ್ಷಗಳು ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಅನುಸರಿಸಬೇಕು ಯಾವುದೇ ಉದ್ದೇಶಿತ ಸಭೆಗೆ ಸಂಬಂಧಿಸಿದಂತೆ ಧ್ವನಿವರ್ಧಕಗಳು ಅಥವಾ ಇತರೆ ಯಾವುದೇ ಸೌಲಭ್ಯವನ್ನು ಬಳಸಲು ಅನುಮತಿ ಅಥವಾ ಪರವಾನಿಗಿ ಪಡೆಯಬೇಕಾದರೆ ಸಂಬಂಧ ಪಟ್ಟ ಪ್ರಾಧಿಕಾರಕ್ಕೆ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು. ಮತ್ತು ಅಂತಹ ಅನುಮತಿ ಮತ್ತು ಪರವಾನಿಗೆ ಪಡೆಯಬೇಕು. ಮೆರವಣಿಗೆಯನ್ನು ಆಯೋಜಿಸುವ ಪಕ್ಷ ಅಥವಾ ಅಭ್ಯರ್ಥಿಯು ಮೆರವಣಿಗೆ ಪ್ರಾರಂಭವಾಗುವ ಸಮಯ ಮತ್ತು ಸ್ಥಳ, ಅನುಸರಿಸಬೇಕಾದ ಮಾರ್ಗ ಮತ್ತು ಮೆರವಣಿಗೆ ಕೊನೆಗೊಳ್ಳುವ ಸಮಯ ಮತ್ತು ಸ್ಥಳವನ್ನು ಮುಂಚಿತವಾಗಿ ನಿರ್ಧರಿಸಿ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕು. ಒಮ್ಮೆ ಅನುಮತಿ ಪಡೆದ ಮೇಲೆ ಯಾವುದೇ ಕಾರಣಕ್ಕು ಮಾರ್ಗವನ್ನಾಗಲಿ ಅಥವಾ ಕಾರ್ಯಕ್ರಮವನ್ನಾಗಲಿ ಬದಲಾಯಿಸುವಂತಿಲ್ಲ. ಸ್ಥಳೀಯ ಪೊಲೀಸ್ ಮತ್ತು ಚುನಾವಣಾ ಸಿಬ್ಬಂದಿ ನೀಡುವ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎನ್ನುವ ನಿಯಮಗಳನ್ನು ಪಾಲನೆ ಮಾಡಬೇಕು ಎಂದು ತಿಳಿಸಿದರು.

ಮತದಾನದ ದಿನ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಜರುಗಲು ಎಲ್ಲಾ ಸಹಕಾರ ನೀಡಬೇಕು. ಪಕ್ಷದ ಕಾರ್ಯಕರ್ತರಿಂದ ಯಾವುದೇ ಅಡಚಣೆಗಳು ಉಂಟಾಗದಂತೆ ಸೂಕ್ತ ಮುನ್ನೆಚ್ಚರಿಕೆಗಳನ್ನು ಮೊದಲೇ ತೆಗೆದುಕೊಳ್ಳಬೇಕು. ಮತಗಟ್ಟೆ ಪ್ರವೇಶಕ್ಕೆ ಅನುಮತಿ ಹೊಂದಿದ ಏಜೆಂಟರುಗಳಿಗೆ ಮಾತ್ರ ಅವಕಾಶವಿರುತ್ತದೆ. ನಿರ್ಬಂಧಿಸಿದ ಪ್ರದೇಶದೊಳಗೆ ಯಾವುದೇ ಚುನಾವಣಾ ಪ್ರಚಾರ ಮಾಡುವಂತಿಲ್ಲ ಎನ್ನುವ ಬೇರೆ ಬೇರೆ ನಿಯಮಗಳನ್ನು ಪಾಲನೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಯಾವುದೇ ಪಕ್ಷ ಅಥವಾ ಅಭ್ಯರ್ಥಿಯು ಅಸ್ತಿತ್ವದಲ್ಲಿರುವ ಭಿನ್ನಾಭಿಪ್ರಾಯಗಳನ್ನು ಉಲ್ಬಣಗೊಳಿಸಬಹುದಾದ ಅಥವಾ ಪರಸ್ಪರ ದ್ವೇಷವನ್ನು ಉಂಟು ಮಾಡುವ ಅಥವಾ ವಿವಿಧ ಜಾತಿಗಳು ಮತ್ತು ಸಮುದಾಯಗಳ ನಡುವೆ ಧಾರ್ಮಿಕ ಅಥವಾ ಭಾಷಿಕ ನಡುವೆ ಉದ್ವಿಘ್ನತೆಯನ್ನು ಉಂಟು ಮಾಡುವ ಯಾವುದೇ ಚಟುವಟಿಕೆಯಲ್ಲಿ ತೊಡಗಬಾರದು. ಚುನಾವಣಾ ಭಾಷಣ ಅಥವಾ ಸುದ್ದಿಗೋಷ್ಠಿಯಲ್ಲಿ ಪರಸ್ಪರ ದ್ವೇಷವನ್ನು ಉಂಟು ಮಾಡುವ ಅಥವಾ ವಿವಿಧ ಜಾತಿಗಳು ಮತ್ತು ಸಮುದಾಯಗಳ ನಡುವೆ ಧಾರ್ಮಿಕ ಅಥವಾ ಭಾಷಿಕ ನಡುವೆ ಉದ್ವಿಘ್ನತೆಯನ್ನು ಉಂಟು ಮಾಡುವ ಹೇಳಿಕೆಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ. ಮತಗಳನ್ನು ಪಡೆಯಲು ಜಾತಿ ಅಥವಾ ಕೋಮು ಭಾವನೆಗಳ ಆಧಾರದ ಮೇಲೆ ಮನವಿ ಮಾಡಬಾರದು.

ಮಸೀದಿಗಳು, ಚರ್ಚ್ಗಳು, ದೇವಾಲಯಗಳು ಅಥವಾ ಇತರೆ ಪೂಜಾ ಸ್ಥಳಗಳನ್ನು ಚುನಾವಣಾ ಪ್ರಚಾರಕ್ಕಾಗಿ ವೇದಿಕೆಯಾಗಿ ಬಳಸಬಾರದು ಎನ್ನುವ ನಿಯಮಗಳನ್ನು ಎಲ್ಲ ರಾಜಕೀಯ ಪಕ್ಷಗಳು ಪಾಲನೆ ಮಾಡಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅನುರಾಧ ಜಿ., ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಡಿ.ಶಿವಶಂಕರ, ಕೆ.ಅನಂತ ಪ್ರದ್ಮನಾಭ, ಚಂದ್ರಕಾಂತ ಕೆ, ನಿಂಬಗಲ್ ರಾಮಕೃಷ್ಣ, ವಿ.ನಾಗರಾಜ, ಎಂ.ಡಿ.ಜಾವೀದ್ ಹಾಗೂ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!