
ರಾಷ್ಟ್ರೀಯ ಲೋಕ್ ಅದಾಲತ್ ಮೂಲಕ 24,693 ಪ್ರಕರಣಗಳ ಇತ್ಯರ್ಥ
ಕರುನಾಡ ಬೆಳಗು ಸುದ್ದಿ
ಕೊಪ್ಪಳ,18- ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಶನಿವಾರದಂದು (ಮಾ. 16) ನಡೆದ ರಾಷ್ಟ್ರೀಯ ಲೋಕ್ ಅದಾಲತ್ನಲ್ಲಿ ಜಿಲ್ಲೆಯಾದ್ಯಂತ 24,693 ಪ್ರಕರಣಗಳು ಇತ್ಯರ್ಥಗೊಂಡಿವೆ.
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಇವರ ನಿರ್ದೇಶನದ ಮೇರೆಗೆ ಮಾರ್ಚ್ 16 ರಂದು ಕೊಪ್ಪಳ ಜಿಲ್ಲೆಯ ಗಂಗಾವತಿ, ಕುಷ್ಟಗಿ, ಯಲಬುರ್ಗಾ ಮತ್ತು ಕೊಪ್ಪಳ ನ್ಯಾಯಾಲಯಗಳಲ್ಲಿ “ ರಾಷ್ಟ್ರೀಯ ಲೋಕ್ ಆದಾಲತ್” ಅನ್ನು ವಿದ್ಯುನ್ಮಾನದ ಮೂಲಕ ಏರ್ಪಡಿಸಲಾಗಿತ್ತು. ಈ ಲೋಕ್ ಅದಾಲತ್ನಲ್ಲಿ ನ್ಯಾಯಾಲಯದಲ್ಲಿರುವ ಚಾಲ್ತಿ ಪ್ರಕರಣಗಳು ಹಾಗೂ ನ್ಯಾಯಾಲಯಕ್ಕೆ ದಾಖಲಿಸದೇ ಇರುವ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, 78 ಮೋಟಾರು ವಾಹನ ಅಪಘಾತ ಪರಿಹಾರ ಪ್ರಕರಣಗಳು, 334 ಸಿವಿಲ್ ಪ್ರಕರಣಗಳು, 62 ರಾಜೀ ಆಗಬಹುದಾದ ಕ್ರಿಮಿನಲ್ ಪ್ರಕರಣಗಳು, 186 ಚೆಕ್ ಬೌನ್ಸ್ ಪ್ರಕರಣಗಳು, 3530 ಇತರೆ ಕ್ರಿಮಿನಲ್ ಪ್ರಕರಣಗಳು, 208 ವಿದ್ಯುತ್ ಪ್ರಕರಣಗಳು, 20,295 ಇತರ ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿದಂತೆ ಒಟ್ಟು 24,693 ಪ್ರಕರಣಗಳನ್ನು ರಾಜೀ ಮೂಲಕ ಇತ್ಯರ್ಥಪಡಿಸಿ ಒಟ್ಟು ರೂ. 70,28,40,374/- ಮೊತ್ತದ ಪರಿಹಾರ ಹಣವನ್ನು ರಾಜೀ ಮೂಲಕ ಸಂತ್ರಸ್ಥರಿಗೆ ನೀಡಲಾಯಿತು.
11 ವಿಚ್ಚೇದನ ಕೋರಿ ಬಂದಿದ್ದ ಪ್ರಕರಣಗಳು ರಾಜೀ ಮಾಡಿಕೊಂಡು ಹೊಂದಾಣಿಕೆಯಾಗಿದ್ದು, ಮತ್ತು 1 ಎಮ್ವಿಸಿ ಪ್ರಕರಣವು ರೂ.61 ಲಕ್ಷಕ್ಕೆ ರಾಜೀಯಾಗಿದೆ ಎಂದು ಗೌರವಾನ್ವಿತ ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಸಿ.ಚಂದ್ರಶೇಖರ ಅವರು ತಿಳಿಸಿರುತ್ತಾರೆ.
ಈ ಲೋಕ್ ಅದಾಲತ್ಗೆ ಸಹಕರಿಸಿದ ಜಿಲ್ಲೆಯ ಎಲ್ಲ ನ್ಯಾಯಾಧೀಶರುಗಳಿಗೆ, ಸಂಧಾನಕಾರರಿಗೆ, ವಕೀಲರ ಸಂಘಗಳ ಅಧ್ಯಕ್ಷರು ಮತ್ತು ಸರ್ವ ಸದಸ್ಯರುಗಳಿಗೆ, ಬ್ಯಾಂಕ್/ ಇನ್ಸೂರೆನ್ಸ್ ಕಂಪನಿ ಮ್ಯಾನೇಜರ್ಗಳಿಗೆ, ಕಕ್ಷಿದಾರರಿಗೆ ಮತ್ತು ನ್ಯಾಯಾಲಯಗಳ ಸಿಬ್ಬಂದಿಗಳಿಗೆ ಈ ಮೂಲಕ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ದೇವೇಂದ್ರ ಪಂಡಿತ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ