
ಲಾಲ್ ಬಹದ್ದೂರ್ ಶಾಸ್ತ್ರಿ ನಡೆದ ಹಾದಿ ಆದರ್ಶನಿಯ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ,11- ಮಾಜಿ ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ತ್ರಿಗಳು ನಡೆದ ಹಾದಿ ಇಂದಿನ ಯುವತಿಗೆ ಆದರ್ಶನಿಯ ಎಂದು, ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿ ಚಳಗುರ್ಕಿ ಹೇಳಿದರು.
ತಾಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಸ್ತ್ರಿ ಜೀ ಅವರ 59ಪುಣ್ಯ ಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಶಾಸ್ತ್ರಿ ಅವರು ಪ್ರಧಾನಿಯಾಗಿದ್ದಾಗ ಜೈ ಜವಾನ್,ಜೈ ಕಿಸಾನ್ ಎಂದು ಹೇಳಿ ದೇಶ ಕಾಯುವ ಸೈನಿಕರಿಗೆ,ರೈತರಿಗೆ ಗೌರವ ಸಮರ್ಪಣೆ ಮಾಡುವ ಮೂಲಕ ವಿಶ್ವ ಮನ್ನಣೆ ಪಡೆದವರು.
ಕೇಂದ್ರದಲ್ಲಿ ರೈಲ್ವೆ ಖಾತೆ, ವಿದೇಶಾಂಗ ಖಾತೆ, ಗೃಹಖಾತೆ ಸಚಿವರಾಗಿದ್ದ ಸಂದರ್ಭದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದರು.
ಇವರು ಕೂಡ ಬಡತನದಿಂದ ಮೇಲೆ ಬಂದವರು. ಆದ್ದರಿಂದ ವಿದ್ಯಾರ್ಥಿಗಳು ತಾವು ಕೂಡ ಕಷ್ಟ ಪಟ್ಟು ಕಲಿಯಬೇಕು. ಬಡತನ ಎಂಬ ಕುಂಟುನೆಪ ಹೇಳಬಾರದು.ಎಲ್ಲರೂ ಶಾಸ್ತ್ರಿ ಜೀ ಅವರ ದೇಶಾಭಿಮಾನದ ಗುಣ ಹಾಗೂ ಆದರ್ಶಗಳನ್ನು ಮೈಗೂಡಿಸಿಕೊಳ್ಳೋಣ ಎಂದರು.
ಇದೇ ಸಂದರ್ಭದಲ್ಲಿ ಆರನೇ ತರಗತಿ ಪ್ರತಿಭಾವಂತ ವಿದ್ಯಾರ್ಥಿಗಳಾದ ಕುರುಬರ ಮಾನ್ಯ ಹಾಗೂ ಹೀನ ಅವರಿಗೆ ಬಹುಮಾನ ವಿತರಿಸಲಾಯಿತು.
ಶಿಕ್ಷಕರಾದ ಚನ್ನಮ್ಮ ಪೂಜೆ ನೆರವೇರಿಸಿದರೆ, ವಿ.ಬಸವರಾಜ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಶಿಕ್ಷಕರಾದ ಎಸ್. ಶ್ವೇತಾ, ಸಮಾಜ ಶಿಕ್ಷಕಿ ಶಶಮ್ಮ, ನಲಿಕಲಿ ಶಿಕ್ಷಕರಾದ ರಾಮಾಂಜಿನೇಯ,ವಿದ್ಯಾರ್ಥಿ ಪ್ರತಿನಿದಿ ಮಹೇಶ ಮುಂತಾದವರು ಉಪಸ್ಥಿತರಿದ್ದರು.