
ಲೆಕ್ಕ ಪರಿಶೋಧನೆಗೆ ಅಗತ್ಯ ದಾಖಲಾತಿ ಸಲ್ಲಿಸಿ ತಿರುವಳಿಗೆ ಕ್ರಮ ಕೈಗೊಳ್ಳಿರಿ :ಜಿ.ಪಂ ಸಿಇಓ ರಾಹುಲ್ ರತ್ನಂ ಪಾಂಡೆಯ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 19- 2014-15 ನೇ ಸಾಲಿನ ಗ್ರಾಮ ಪಂಚಾಯತಿಗಳ ಬಾಕಿ ಉಳಿಸಿಕೊಂಡಿರುವ ಕಂಡಿಕೆಗಳನ್ನು ತಿರುವಳಿಗೊಳಿಸಲು ಅಗತ್ಯ ದಾಖಲಾತಿಗಳನ್ನು ಅಡಹಾಕ್ ಸಭೆಗೆ ಸಲ್ಲಿಸಿ ಬಾಕಿ ಉಳಿಸಿಕೊಳ್ಳದಂತೆ ಕ್ರಮವಹಿಸಿರೆಂದು ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ ಸೂಚಿಸಿದರು.
ದಿ.19 ರಂದು ಕೊಪ್ಪಳ ತಾಲೂಕ ಪಂಚಾಯತಿಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಅಡಹಾಕ್ ಪೂರ್ವಭಾವಿ ಸಭೆಗೆ ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಭಾಗವಹಿಸಿ ವಿವಿಧ ಗ್ರಾಮ ಪಂಚಾಯತಿಗಳಿಗೆ ನಿಯಮಾನುಸಾರ ದಾಖಲಾತಿಗಳನ್ನು ಸಲ್ಲಿಸುವಂತೆ ಹಾಗು 2014-15ನೇ ಸಾಲಿನ ಕಂಡಿಕೆಗಳನ್ನು ತಿರುವಳಿಗೊಳಿಸಲು ಕ್ರಮ ಕೈಗೊಳ್ಳುವಂತೆ ಕಟ್ಟು ನಿಟ್ಟಾಗಿ ಸೂಚಿಸಿದರು.
ಹಾಲಿ ಇರುವ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಸಂಬಂಧಿಸಿದವರಿಗೆ ಪತ್ರ ವ್ಯವಹಾರ ಕೈಗೊಂಡು ವಸೂಲಾತಿ ಇದ್ದಲ್ಲಿ ವಸೂಲಾತಿಗೆ ಕ್ರಮವಹಿಸತಕ್ಕದ್ದು. ಆಕ್ಷೇಪಣೆಗಳು ಇದ್ದಲ್ಲಿ ಸಂಬಂಧಿಸಿದ ಕಡತದೊಂದಿಗೆ ಅಗತ್ಯ ದಾಖಲಾತಿಗಳನ್ನು ಅಡಹಾಕ್ ಸಭೆಗೆ ಹಾಜರುಪಡಿಸಿ ತಿರುವಳಿಗೊಳಿಸತಕ್ಕದ್ದು. ಬರುವ ಮಾರ್ಚ-2024ರೊಳಗಾಗಿ ಎಲ್ಲಾ ಗ್ರಾಮ ಪಂಚಾಯತಿಯವರು ತಿರುವಳಿಗೆ ಕ್ರಮವಹಿಸಬೇಕೆಂದರು. 2014-15ನೇ ಸಾಲಿನ ಎಲ್ಲಾ ಕಂಡಿಕೆಗಳನ್ನು ತಿರುವಳಿಗೊಳಿಸಲು ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳುವಂತೆ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗು ಸಹಾಯಕ ಲೆಕ್ಕಾಧಿಕಾರಿಗಳಿಗೆ ಸೂಚಿಸಿದರು.
ಅಡಹಾಕ್ ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯಲೆಕ್ಕಾಧಿಕಾರಿ ಅಮೀನ್ ಅತ್ತಾರ, ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ, ಯಂಕಪ್ಪ ಸಹಾಯಕ ನಿರ್ದೆಶಕರು(ಗ್ರಾಉ), ಸಹಾಯಕ ಲೆಕ್ಕಾಧಿಕಾರಿ ರವಿಕುಮಾರ, ತಾಲೂಕ ಯೋಜನಾಧಿಕಾರಿ ರಾಜೇಸಾಬ ನದಾಫ್, ಜಿ.ಪಂ &ತಾ.ಪಂ ಲೆಕ್ಕಶಾಖೆಯ ಸಿಬ್ಬಂದಿಗಳು ಗ್ರಾಮ ಪಂಚಾಯತಿಗಳ ಪಿಡಿಒಗಳು ಹಾಜರಿದ್ದರು