
ವಿಚಾರಗಳು ಸಕಾರಾತ್ಮಕವಾಗಿರಲಿ
ಯಶೋಧ ಎಸ್ ವಂಟಗೋಡಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 14- ಒತ್ತಡದ ಬದುಕಿನಲ್ಲಿ ಆಧ್ಯಾತ್ಮ ಮತ್ತು ಮೆಡಿಟೇಶನ್ ಅತ್ಯಂತ ಅವಶ್ಯಕತೆ ಇದೆ. ನಮ್ಮ ವಿಚಾರಗಳನ್ನು ಸಕಾರಾತ್ಮಕ ಮಾಡಿಕೊಂಡಾಗ ಮಾತ್ರ ನಾವು ಆರೋಗ್ಯದಿಂದ ಖುಷಿಯಿಂದ ಇರಲು ಸಾಧ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧ ಎಸ್ ವಂಟಗೋಡಿ ಹೇಳಿದರು.
ಅವರು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಪೊಲೀಸ್ ಇಲಾಖೆಯವರಿಗೆ ಏರ್ಪಡಿಸಲಾದ ಮಾನಸಿಕ ಒತ್ತಡ ನಿರ್ವಹಣೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಮನಸ್ಸಿನ ಒತ್ತಡದಿಂದಲೇ ಅನೇಕ ಶಾರೀರಿಕ ರೋಗಗಳು ಹೆಚ್ಚಾಗುತ್ತಿವೆ. ಧ್ಯಾನ ಮೆಡಿಟೇಶನ್ ಮೂಲಕ ಮಾನಸಿಕ ಆಂತರಿಕ ಸ್ಥಿತಿಯನ್ನು ಸದೃಢವಾಗಿಟ್ಟುಕೊಂಡು ಕರ್ತವ್ಯ ನಿರ್ವಹಿಸಲು ಕರೆ ನೀಡಿದರು.
ಸಾನಿಧ್ಯ ವಹಿಸಿ ಮಾತನಾಡಿದ ಬ್ರಹ್ಮಕುಮಾರಿ ಯೋಗಿನಿ ಅಕ್ಕ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮೂಲಕ ಮಾನಸಿಕ ಒತ್ತಡಕ್ಕೆ ಕಾರಣಗಳನ್ನು ಅದರಿಂದ ಆಗುವ ದುಷ್ಪರಿಣಾಮಗಳನ್ನು ಮತ್ತು ಒತ್ತಡದಿಂದ ಮುಕ್ತರಾಗಲು ನಿವಾರಣೆಗಳನ್ನು ತಿಳಿಸಿಕೊಟ್ಟು ಪ್ರಾಯೋಗಿಕವಾಗಿ ಧ್ಯಾನ ಮಾಡುವ ವಿಧಿಯನ್ನು ಹೇಳಿದರು. ನಾವು ಶರೀರದ ಆರೋಗ್ಯಕ್ಕೆ ಗಮನ ಕೊಡುವುದರ ಜೊತೆಗೆ ಮನಸ್ಸಿನ ಆರೋಗ್ಯಕ್ಕೆ ಸ್ವಲ್ಪ ಸಮಯವಾದರೂ ತೆಗೆದಿಡಬೇಕೆಂದು ತಿಳಿ ಹೇಳಿದರು.
ಪ್ರತಿನಿತ್ಯ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಬೆಳಿಗ್ಗೆ 6ರಿಂದ ಯೋಗ,ಪ್ರಾಣಾಯಾಮ ಮತ್ತು ಧ್ಯಾನ ಜ್ಞಾನ ತರಗತಿಗಳು ನಡೆಯುತ್ತಿವೆ. ಇದರ ಲಾಭವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ವೇದಿಕೆಯಲ್ಲಿ ಡಿ ಎಸ್ ಪಿ ಮುತ್ತಣ್ಣ ಗಂಗಾವತಿ ಡಿ ಎಸ್ ಪಿ ಪಾಟೀಲ್ ವೇದಿಕೆಯಲ್ಲಿದ್ದರು ಬಿ.ಕೆ ಸ್ನೇಹ ಸ್ವಾಗತಿಸಿದರು.