
ಶಾಂತಿಯುತ ಮತದಾನ : ಎಲ್ಲರ ಚಿತ್ತ ಜೂ. 04 ರತ್ತ
ಮತಯಂತ್ರಗಳ ದಾಸ್ತಾನು ಕಟ್ಟಡಕ್ಕೆ ಬಿಗಿ ಬಂದೋಬಸ್ತ್
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 8- ಲೋಕಸಭಾ ಚುನಾವಣೆ ನಿಮಿತ್ಯ ಮೇ. 07 ರಂದು ಮತದಾನ ಪ್ರಕ್ರಿಯೆ ಬಹುತೇಕ ಶಾಂತಿಯುತವಾಗಿ ಜರುಗಿದ್ದು, ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದೆ. ಮತಯಂತ್ರಗಳು ಬಳ್ಳಾರಿ ನಗರದ ರಾವ್ ಬಹದ್ದೂರು ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯ (ಆರ್ವೈಎಂಸಿ) ಕಟ್ಟಡದಲ್ಲಿ ವಿಶೇಷವಾಗಿ ನಿರ್ಮಿಸಿರುವ ಸ್ಟ್ರಾಂಗ್ ರೂಂಗಳಲ್ಲಿ ಇರಿಸಿ, ಕಟ್ಟಡಕ್ಕೆ ಪೊಲೀಸ್ ಬಿಗಿ ಬಂದೋಬಸ್ತ್ ಹಾಕಲಾಗಿದೆ.
ಬುಧವಾರದಂದು ಆರ್ವೈಎಂಸಿ ಕಾಲೇಜು ಕಟ್ಟಡದಲ್ಲಿ ಜಿಲ್ಲಾಧಿಕಾರಿ, ಚುನಾವಣಾ ಸಾಮಾನ್ಯ ವೀಕ್ಷಕರು, ಅಭ್ಯರ್ಥಿಗಳು ಹಾಗೂ ಅಭ್ಯರ್ಥಿಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಮತಯಂತ್ರಗಳ ಸ್ಟ್ರಾಂಗ್ ರೂಂ. ಬಾಗಿಲಿಗೆ ಬೀಗ ಹಾಕಿ ಮೊಹರು ಹಾಕಲಾಯಿತು, ಜೊತೆಗೆ ಬಾಗಿಲನ್ನು ದಪ್ಪ ಹಲಗೆಯ ಮೂಲಕ ಸಂಪೂರ್ಣ ಮುಚ್ಚಿ ಸೀಲ್ ಮಾಡಲಾಯಿತು.
ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ನಗರದ ಆರ್ವೈಎಂಸಿ ಕಾಲೇಜು ಕಟ್ಟಡ ಆವರಣದಲ್ಲಿ ಮಾಧ್ಯಮದವರಿಗೆ ಮಾಹಿತಿ ನೀಡಿ, ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಮೇ. 07 ರಂದು ಸುಗಮವಾಗಿ ಶಾಂತಿಯುತವಾಗಿ ಜರುಗಿದೆ. ಈ ಬಾರಿ ಶೇ. 73.92 ರಷ್ಟು ಮತದಾನವಾಗಿದ್ದು, ಕ್ಷೇತ್ರ ವ್ಯಾಪ್ತಿಯ ಕಂಪ್ಲಿ, ಬಳ್ಳಾರಿ, ಬಳ್ಳಾರಿ ನಗರ, ಸಂಡೂರು, ಹಡಗಲಿ, ಹಗರಿಬೊಮ್ಮನಹಳ್ಳಿ, ವಿಜಯನಗರ ಹಾಗೂ ಕೂಡ್ಲಿಗಿ ವಿಧಾನಸಭಾ ಕ್ಷೇತ್ರಗಳಲ್ಲಿ ದಾಖಲಾದ ಇವಿಎಂ, ವಿವಿ ಪ್ಯಾಟ್ ಮತಯಂತ್ರಗಳನ್ನು ಕಾಲೇಜು ಕಟ್ಟಡದಲ್ಲಿ ಡಿಮಸ್ಟರಿಂಗ್ ಮಾಡಿಕೊಳ್ಳಲಾಗಿದೆ.
ಮತಯಂತ್ರಗಳನ್ನು ಇರಿಸಲು ಕಾಲೇಜು ಕಟ್ಟಡದಲ್ಲಿ ವಿಶೇಷ ವ್ಯವಸ್ಥೆ ಮಾಡಿ ನೆಲಮಹಡಿ, ಮೊದಲನೆ ಮಹಡಿ ಹಾಗೂ ಮೂರನೆ ಮಹಡಿಗಳಲ್ಲಿ ಸ್ಟ್ರಾಂಗ್ ರೂಂ ಗಳನ್ನು ನಿರ್ಮಿಸಿ, ಒಪ್ಪವಾಗಿ ಜೋಡಿಸಿಡಲಾಗಿದೆ. ಸ್ಟ್ರಾಂಗ್ ರೂಂ. ಗಳನ್ನು ಚುನಾವಣೆಯ ಸಾಮಾನ್ಯ ವೀಕ್ಷಕರಾದ ಚಂದ್ರಶೇಖರ್ ಸಖಮುರಿ ಅಲ್ಲದೆ ಅಭ್ಯರ್ಥಿಗಳು ಹಾಗೂ ಅವರ ಅಧಿಕೃತ ಪ್ರತಿನಿಧಿಗಳ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂ ಗಳನ್ನು ಸೀಲಿಂಗ್ ಮಾಡಲಾಗಿದೆ. ಕಟ್ಟಡದಲ್ಲಿ ಮತಯಂತ್ರಗಳನ್ನು ಇರಿಸಲು ಒಟ್ಟು 20 ಸ್ಟ್ರಾಂಗ್ ರೂಂ ಗಳು, ಪೋಸ್ಟಲ್ ಬ್ಯಾಲೆಟ್ಗಳನ್ನು ಇರಿಸಲು 02 ಸ್ಟ್ರಾಂಗ್ ರೂಂ ಗಳನ್ನು ಮಾಡಲಾಗಿದೆ ಎಂದರು.
ಜೂ. 04 ರಂದು ಮತಗಳ ಎಣಿಕಾ ಕೇಂದ್ರ ಇದೇ ಕಾಲೇಜು ಕಟ್ಟಡದಲ್ಲಿ ಜರುಗಲಿದ್ದು, ಇದಕ್ಕಾಗಿ 08 ಮತ ಎಣಿಕಾ ಕೊಠಡಿಗಳನ್ನು ವ್ಯವಸ್ಥಿತವಾಗಿ ಸಿದ್ಧಪಡಿಸಲಾಗಿದೆ. ಪ್ರತಿ ಎಣಿಕಾ ಕೊಠಡಿಯಲ್ಲಿ 14 ಟೇಬಲ್ಗಳನ್ನು ಹಾಕಲಾಗುತ್ತಿದ್ದು, ಮತಗಟ್ಟೆಗಳ ಸಂಖ್ಯೆಗೆ ಅನುಗುಣವಾಗಿ ಮತ ಎಣಿಕೆ ಸುತ್ತುಗಳು ನಿರ್ಧಾರವಾಗಲಿವೆ. ಜಿಲ್ಲೆಯಲ್ಲಿನ ಶಾಂತಿಯುತ ಮತದಾನಕ್ಕೆ ಸಹಕರಿಸಿದ ಎಲ್ಲರೂ ಅಭಿನಂದನಾರ್ಹರು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರು ಮಾತನಾಡಿ, ಜಿಲ್ಲೆಯಲ್ಲಿ ಬಹುತೇಕ ಶಾಂತಿಯುತ ಮತದಾನವಾಗಿದೆ. ಮತ ಎಣಿಕಾ ಕೇಂದ್ರ ಕಟ್ಟಡಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸಿಆರ್ಪಿಎಫ್, ಕೆಎಸ್ಆರ್ಪಿ, ಸಿವಿಲ್ ಪೊಲೀಸ್, ಡಿವೈಎಸ್ಪಿ, ಇನ್ಸ್ಪೆಕ್ಟರ್ ಹಂತಗಳ ಅಧಿಕಾರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಧಿಕಾರಿ, ಸಿಬ್ಬಂದಿಯು ದಿನದ 24 ಗಂಟೆ ಕಟ್ಟಡಕ್ಕೆ ಬಿಗಿ ಭದ್ರತೆ ನೀಡಲಿದ್ದು, ಶಿಫ್ಟ್ ಆಧಾರದಲ್ಲಿ ಅಧಿಕಾರಿ, ಸಿಬ್ಬಂದಿ ಭದ್ರತಾ ಕಾರ್ಯ ನಿರ್ವಹಿಸಲಿದ್ದಾರೆ ಎಂದರು.
ಚುನಾವಣಾ ಸಾಮಾನ್ಯ ವೀಕ್ಷಕ ಚಂದ್ರಶೇಖರ ಸಖಮುರಿ, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ನವೀನ್ ಕುಮಾರ್ ಹಾಗೂ ರವಿಕುಮಾರ್ ಸೇರಿದಂತೆ ವಿವಿಧ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.