
ತಾಪಂ ಕಾರ್ಯಾಲಯದಲ್ಲಿ ಎಂ.ಆರ್.ಡಬ್ಲ್ಯೂ, ಯು.ಆರ್.ಡಬ್ಲ್ಯೂ ಹಾಗೂ ವಿ.ಆರ್.ಡಬ್ಲ್ಯೂ ಸಭೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 26- ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ತಮ್ಮ ವ್ಯಾಪ್ತಿಯಲ್ಲಿ ಬರುವ ಮತಗಟ್ಟೆಗಳಲ್ಲಿ ಶೇ.100 ರಷ್ಟು ವಿಕಲಚೇತನರ ಮತದಾನವಾಗಲು ತಾವೆಲ್ಲರೂ ಕೈಜೋಡಿಸಬೇಕು ಎಂದು ಕಾರಟಗಿ ತಾ.ಪಂ ಸಹಾಯಕ ನಿರ್ದೇಶಕರಾದ ವೈ.ವನಜಾ ಅವರು ಹೇಳಿದರು.
ತಾಲೂಕು ಪಂಚಾಯತಿ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಎಂ.ಆರ್.ಡಬ್ಲ್ಯೂ, ಯು.ಆರ್.ಡಬ್ಲ್ಯೂ ಹಾಗೂ ವಿ.ಆರ್.ಡಬ್ಲ್ಯೂ ರವರ ತಾಲೂಕು ಮಟ್ಟದ ಸಭೆಯಲ್ಲಿ ಮಾತನಾಡಿದರು.
ಚುನಾವಣಾ ಆಯೋಗದಿಂದ ವಿಕಲಚೇತನರು ವ್ಯವಸ್ಥಿತ ರೀತಿಯಲ್ಲಿ ಮತ ಚಲಾಯಿಸಲು ಈಗಾಗಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಅದರಂತೆ ತಮ್ಮ ಮತಗಟ್ಟೆಗಳಲ್ಲಿ ಸುರಕ್ಷಿತವಾಗಿ ಮತದಾನ ಮಾಡಲು ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದ್ದು. ಈ ಅವಕಾಶವನ್ನು ಬಳಸಿಕೊಂಡು ಸದೃಢ ಭಾರತಕ್ಕಾಗಿ ತಪ್ಪದೇ ಮತ ಹಾಕಿ. ಯಾವುದೇ ಕಾರಣಕ್ಕೂ ವಿಶೇಷಚೇತನರು ಮತದಾನದಿಂದ ಹೊರಗುಳಿಯದಂತೆ ಕ್ರಮವಹಿಸಲು ತಿಳಿಸಿದರು.
ನಂತರ ಮತಗಟ್ಟೆಗಳಲ್ಲಿ ರ್ಯಾಂಪ್, ವ್ಹೀಲ್ ಚೇರ್ ಇನ್ನಿತರ ಪರಿಕರಗಳು ಹಾಗೂ ಅಗತ್ಯ ಸೌಕರ್ಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿದರು. ತಾ.ಪಂ ಐಇಸಿ ಸಂಯೋಜಕರು ಮತದಾನದ ಪ್ರತಿಜ್ಞಾ ವಿಧಿ ಬೋಧಿಸಿದರು.
ಈ ವೇಳೆ ಎಂ.ಆರ್. ಡಬ್ಲ್ಯೂ ಮಂಜುಳಾ ಹಾಗೂ ಯು.ಆರ್. ಡಬ್ಲ್ಯೂ, ವಿ.ಆರ್. ಡಬ್ಲ್ಯೂಗಳು ಸೇರಿದಂತೆ ತಾ.ಪಂ ಸಿಬ್ಬಂದಿಗಳು ಇದ್ದರು.