
45 ದಿನಗಳ ವೃತ್ತಿ ಬುನಾದಿ ತರಬೇತಿಗೆ ಅಪರ ಜಿಲ್ಲಾಧಿಕಾರಿಗಳಿಂದ ಚಾಲನೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 8- ಸರ್ಕಾರಿ ಕೆಲಸಕ್ಕೆ ಆಯ್ಕೆಯಾದ ನೌಕರರು ಶ್ರದ್ಧೆ, ಬದ್ಧತೆಯಿಂದ ತರಬೇತಿ ಪಡೆದು ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಬೇಕು ಎಂದು ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ. ಕಡಿ ಅವರು ಹೇಳಿದರು.
ಹೊಸದಾಗಿ ಆಯ್ಕೆಯಾದ ಎಫ್.ಡಿ.ಎ ಮತ್ತು ಎಸ್.ಡಿ.ಎ ನೌಕರರಿಗೆ ಆಡಳಿತ ತರಬೇತಿ ಸಂಸ್ಥೆ ಮೈಸೂರು ಇವರ ಪ್ರಾಯೋಜಕತ್ವದಲ್ಲಿ ಕೊಪ್ಪಳ ಜಿಲ್ಲಾ ತರಬೇತಿ ಸಂಸ್ಥೆಯಿAದ ಜುಲೈ 08 ರಿಂದ ಆಗಸ್ಟ್ 31ರವರೆಗೆ ನಗರದ ತಹಶೀಲ್ದಾರರ ಕಚೇರಿಯಲ್ಲಿರುವ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ನಡೆಯಲಿರುವ ವೃತ್ತಿ ಬುನಾದಿ ತರಬೇತಿ ಕಾರ್ಯಕ್ರಮಕ್ಕೆ ಜುಲೈ 08ರಂದು ಚಾಲನೆ ನೀಡಿ ಅವರು ಮಾತನಾಡಿದರು.
ಇಲಾಖೆಯಲ್ಲಿನ ವಿವಿಧ ಸೇವೆಗಳ ಬಗ್ಗೆ, ನೀತಿ ನಿಯಮಗಳ ಬಗ್ಗೆ ಸರಿಯಾದ ರೀತಿಯಲ್ಲಿ ಅಧ್ಯಯನ ನಡೆಸಿ ಅರ್ಥೈಸಿಕೊಂಡಲ್ಲಿ ಕೆಲಸ ಕಾರ್ಯಗಳನ್ನು ಸುಲಭವಾಗಿ ನಡೆಸಬಹುದಾಗಿದೆ. ಯಾವುದೇ ಕೆಲಸದಲ್ಲಿ ಶಿಸ್ತು ತುಂಬಾ ಮುಖ್ಯವಾಗಿದ್ದು, ಕಚೇರಿಯಲ್ಲಿ ಇದನ್ನು ಪಾಲಿಸಬೇಕು. ಮೇಲಧಿಕಾರಿಗಳೊಂದಿಗೆ ವಿನಯದಿಂದ ವರ್ತಿಸಬೇಕು. ಸಮಯ ಪಾಲನೆ, ಅಂದಿನ ಕೆಲಸವನ್ನು ಅಂದೇ ಪೂರ್ಣಗೊಳಿಸುವ ಹವ್ಯಾಸ ಬೆಳೆಸಿಕೊಳ್ಳಬೇಕು. ಯಾವುದೇ ಆಸೆ, ಆಮೀಷಗಳಿಗೆ ಒಳಗಾಗದೇ ಕಾರ್ಯ ನಿರ್ವಹಿಸಬೇಕು. ಉತ್ತಮವಾದ ತರಬೇತಿಯಿಂದ ಯಾವುದೇ ಕಾರ್ಯವನ್ನು ಪರಿಪೂರ್ಣವಾಗಿ ಮಾಡಲು ಸಾಧ್ಯವಿದ್ದು, ಈ ಹಿನ್ನೆಲೆಯಲ್ಲಿ ಈ ತರಬೇತಿಯ ಸದುಪಯೋಗ ಪಡಿಸಿಕೊಂಡು ಸರ್ಕಾರಿ ಸೇವೆ ಸಲ್ಲಿಸಲು ಸಿದ್ಧರಾಗಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕೊಪ್ಪಳ ಜಿಲ್ಲಾಧ್ಯಕ್ಷರಾದ ನಾಗರಾಜ ಜುಮ್ಮನ್ನವರ್ ಅವರು ಮಾತನಾಡಿ, ಸರ್ಕಾರಿ ನೌಕರರು ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಇರಬೇಕು. ಕಚೇರಿ ಕೆಲಸಗಳಲ್ಲಿ ವಿಳಂಬ ಮಾಡಬಾರದು. ಕೆಲಸಗಳನ್ನು ಬಾಕಿ ಉಳಿಸಿಕೊಂಡರೆ, ಸಮಸ್ಯೆಗಳಿಗೆ ಅವಕಾಶ ಮಾಡಿಕೊಟ್ಟ ಹಾಗೆ ಮತ್ತು ನಮ್ಮ ಮೇಲೆಯೂ ಒತ್ತಡ ಹಾಕಿಕೊಂಡಂತಾಗುತ್ತದೆ. ಆದ್ದರಿಂದ ಅಂದಿನ ಕೆಲಸವನ್ನು ಅಂದೇ ಮಾಡಿ ಮುಗಿಸುವ ಪರಿಪಾಠವನ್ನು ನೌಕರರು ಬೆಳೆಸಿಕೊಂಡಲ್ಲಿ ನೆಮ್ಮದಿಯ ಜೀವನ ಸಾಗಿಸಬಹುದಾಗಿದೆ. ತರಬೇತಿಯಲ್ಲಿ ತಿಳಿಸುವ ಪಾಠಗಳು, ಮಾರ್ಗದರ್ಶನಗಳನ್ನು ಅರಿತು ಕಚೇರಿಯ ನಿತ್ಯದ ಕಾರ್ಯಗಳಲ್ಲಿ ಅಳವಡಿಸಿಕೊಂಡು ಸೇವೆ ಸಲ್ಲಿಸಿ ಎಂದರು.
ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ ಅವರು ಮಾತನಾಡಿ, ನೌಕರರಿಗೆ ಸೇವಾಮನೋಭಾವ ಇರಬೇಕು. ಹೊಸದನ್ನು ಕಲಿಯುವ ಉತ್ಸುಕತೆ ಇರಬೇಕು. ಕಚೇರಿ ಕೈಪಿಡಿ ಪ್ರಕಾರ ಕಚೇರಿ ಕಾರ್ಯನಿರ್ವಹಿಸಬೇಕು. ಕಚೇರಿಗೆ ಬರುವ ಪತ್ರಗಳನ್ನು ಸರಿಯಾಗಿ ಓದಬೇಕು. ಶಿಸ್ತನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಕೃಷ್ಣಮೂರ್ತಿ ದೇಸಾಯಿ ಅವರು ಮಾತನಾಡಿ, ಪ್ರತಿಯೊಬ್ಬ ಸರಕಾರಿ ನೌಕರರಿಗೆ ವೃತ್ತಿ ಬುನಾದಿ ತರಬೇತಿ ಅವಶ್ಯಕವಾಗಿದ್ದು, ಹೊಸದಾಗಿ ಆಯ್ಕೆಯಾದ ಎಲ್ಲಾ ಎಫ್.ಡಿ.ಎ ಮತ್ತು ಎಸ್.ಡಿ.ಎ.ಗಳು ಈ ತರಬೇತಿಯಲ್ಲಿ ತಿಳಿಸಲಾದ ವಿಷಯಗಳನ್ನು ಅರಿತು ಚಾಚೂ ತಪ್ಪದೇ ತಮ್ಮ ತಮ್ಮ ಕಚೇರಿಗಳಲ್ಲಿ ಅಳವಡಿಸಿಕೊಂಡು ಕೆಲಸ ನಿರ್ವಹಿಸುವಂತಾಗಬೇಕು. ಪ್ರಾಮಾಣಿಕತೆಯಿಂದ, ನಿಷ್ಠೆಯಿಂದ ಕೆಲಸ ನಿರ್ವಹಿಸಬೇಕು. ಕಚೇರಿಯ ಅಧಿಕಾರಿಗಳೊಂದಿಗೆ ಗೌರವದಿಂದ ವರ್ತಿಸಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಒಂದು ಉತ್ತಮವಾದ ಸೇವೆ ನೀಡಬೇಕು ಎಂದು ತಿಳಿಸಿದರು.
ಉದ್ಘಾಟನೆ ಕಾರ್ಯಕ್ರಮದ ಬಳಿಕೆ ಸಂಪನ್ಮೂಲ ವ್ಯಕ್ತಿಗಳಾದ ಕೃಷ್ಣಮೂರ್ತಿ ದೇಸಾಯಿ, ಮೈಲಾರ್ ರಾವ್ ಕುಲಕರ್ಣಿ ಮತ್ತು ಲಾಯಕ್ ಅಲಿ ಅವರು ವಿಶೇಷ ಉಪನ್ಯಾಸ ನೀಡಿದರು. ತರಬೇತಿಯಲ್ಲಿ ಪ್ರಶಿಕ್ಷಣಾರ್ಥಿಗಳು ಪಾಲ್ಗೊಂಡಿದ್ದರು.