
ಅಂಗನವಾಡಿ ಕೇಂದ್ರಗಳಿಗೆ ನ್ಯಾ.ಚಂದ್ರಶೇಖರ ಸಿ ಅನಿರೀಕ್ಷಿತ ಭೇಟಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 23- ಗೌರವಾನ್ವಿತ ಕೊಪ್ಪಳದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಚಂದ್ರಶೇಖರ ಸಿ. ಅವರು ಜುಲೈ 22ರಂದು ಕೊಪ್ಪಳ ನಗರದ ಗದಗ ರಸ್ತೆಯ ಗಾಂಧೀನಗರದ ಅಕ್ಕ ಪಕ್ಕದಲ್ಲಿರುವ ಅಂಗನವಾಡಿ ಕೇಂದ್ರ-1 ಹಾಗೂ ಅಂಗನವಾಡಿ ಕೇಂದ್ರ-2ಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿದರು.
ನ್ಯಾಯಾಧೀಶರ ಭೇಟಿ ಸಮಯದಲ್ಲಿ ಅಂಗನವಾಡಿಗಳಲ್ಲಿ ಕೆಲ ನ್ಯೂನತೆಗಳು ಕಂಡುಬಂದಿದ್ದು, ಎರಡೂ ಅಂಗನವಾಡಿ ಕೇಂದ್ರಗಳಲ್ಲಿ ಯಾವುದೇ ಸಿಬ್ಬಂದಿ ಹಾಜರಿರಲಿಲ್ಲ. ಅಂಗನವಾಡಿ ಕೇಂದ್ರ-2ರಲ್ಲಿ ಸಿಬ್ಬಂದಿ ಪರವಾಗಿ ಬೇರೆಯವರನ್ನು ಕೂರಿಸಿದ್ದರು. ಎರಡೂ ಅಂಗನವಾಡಿ ಕೇಂದ್ರಗಳಲ್ಲಿ ಯಾವುದೇ ಮಕ್ಕಳು ಹಾಜರಿರಲಿಲ್ಲ. ಎರಡೂ ಅಂಗನವಾಡಿ ಕೇಂದ್ರಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳದೇ ಇರುವುದು, ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದು ಕಂಡುಬಂದಿರುವುದಲ್ಲದೇ ದಿನ ಬಳಕೆ ಹಾಗೂ ಶೌಚಾಲಯಕ್ಕೂ ನೀರಿನ ಸರಬರಾಜು ಸಹ ಇರುವುದಿಲ್ಲ.
ಅಲ್ಲದೆ ಒಳ ಚರಂಡಿಯ ತ್ಯಾಜ್ಯವು ಅಂಗನವಾಡಿಗಳ ಆವರಣದಲ್ಲಿ ಹರಡಿರುವುದು ಕಂಡು ಬಂದಿದೆ. ಅಂಗನವಾಡಿ ಕೇಂದ್ರಗಳಲ್ಲಿ ಅಡುಗೆ ಮಾಡಿದ ಯಾವುದೇ ಗುರುತು ಕಾಣಲಿಲ್ಲ. ಭೇಟಿ ದಿನವು ಸಹ ಅಡುಗೆ ಮಾಡಿರುವುದಿಲ್ಲ. ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಹಾಜರಾತಿ ಪುಸ್ತಕದಲ್ಲಿ ಜುಲೈ 20 ಮತ್ತು ಜು.22ರ ಮಕ್ಕಳ ಹಾಜರಿಯನ್ನು ನಮೂದಿಸಿರುವುದಿಲ್ಲ ಹಾಗೂ ಅಂಗನವಾಡಿ ಸಿಬ್ಬಂದಿ ಸಹಿ ಸಹ ಇರುವುದಿಲ್ಲ.
ನ್ಯಾಯಾಧೀಶರು ಭೇಟಿ ನೀಡಿದ ಕೆಲ ಸಮಯದ ನಂತರ ಒಬ್ಬ ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕ ಸಿಬ್ಬಂದಿಯವರು ಬಂದು ಯಾವುದೇ ಸಮರ್ಪಕ ವಿವರಣೆಗಳನ್ನು ನೀಡಿರುವುದಿಲ್ಲ. ಈ ಬಗ್ಗೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವುದರ ಜೊತೆಗೆ ಕೂಡಲೇ ಈ ಬಗ್ಗೆ ವರದಿ ನೀಡುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.