
ಎಂಎಸ್ ಪಿಎಲ್ ಕಂಪನಿಯಿಂದ ಪರಿಹಾರ ನೀಡಲಿ : ವಕ್ಕಳದ
ಕರುನಾಡ ಬೆಳಗು ಸುದ್ದಿ
ಕೊಪ್ಪಲ, 2- ನಗರದ ಸಮಿಪ ಇರುವ ಎಂಎಸ್ ಪಿಎಲ್ ಕಂಪನಿ ನಮ್ಮ ಪ್ಲಾಟ್ ಗಳನ್ನು ಅಕ್ರಮವಾಗಿ ವಶಪಡಿಸಿಕೊಂಡು ಕಂಪೌಡ ನೀರ್ಮಿಸಿದ್ದು ತಕ್ಷಣ ಕ್ರಮ ಕೈಗೋಳ್ಳಬೇಕು ಎಂದು ಮೆ.ಮಳೆಮಲ್ಲೇಶ್ವರ ಗೃಹ ನಿಮಾರ್ಣ ಸಹಕಾರ ಸಂಘದ ಸದಸ್ಯ ಹಾಗೂ ನಿವೇಶನ ಮಾಲಿಕ ಸಂಗಪ್ಪ ವಕ್ಕಳದ ಆಗ್ರಹಿಸಿದರು.
ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಿವೇಶನ ಜಾಗವನ್ನು ಎಂಎಸ್ ಪಿಎಲ್ ಕಂಪನಿಗೆ ನೀಡಿರುವ ಕೆಐಎಡಿಬಿ ಅಧಿಕಾರಿಗಳು ನಿವೇಶನ ಮಾಲೀಕರಿಗೆ ಪರಿಹಾರ ನೀಡಿಲ್ಲ. ಈ ಬಗ್ಗೆ ಧಾರವಾಡ ಹೈಕೋರ್ಟ್ ಸೂಚಿಸಿ ಎರಡು ವರ್ಷವಾದರೂ ಕ್ರಮವಹಿಸದೇ ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂದು ದೂರಿದರು.
ನಮ್ಮ ಸಹಕಾರ ಸಂದಿಂದ ಭಾಗ್ಯನಗರದ ಸರ್ವೆನಂ.293/1, 296/1 ನಲ್ಲಿ 15 ಎಕರೆ ಜಮೀನನ್ನು ದಿ.ಡಾ.ಓಂಕೇಶಪ್ಪ ಅಬ್ಬಿಗೇರಿ ಅವರಿಂದ 1998ರಲ್ಲಿ ಖರೀದಿ ಮಾಡಿ ಬಡಾವಣೆ ನಿರ್ಮಿಸಲಾಗಿದೆ. 1999ರಲ್ಲಿ ಸಕ್ಷಮ ಪ್ರಾಧಿಕಾರಿಗಳೆಲ್ಲವೂ ಅನುಮೋದನೆ ನೀಡಿವೆ. ಮೆ.ಮಳೆಮಲ್ಲೇಶ್ವರ ಗೃಹ ನಿಮಾರ್ಣ ಸಹಕಾರ ಸಂಘವೇ ಅಧಿಕೃತ ಮಾಲೀಕರೆಂದು ದಾಖಲೆಗಳಿವೆ. 15 ಎಕರೆ ಜಾಗದಲ್ಲಿ 221 ನಿವೇಶನ ರಚಿಸಿ ಸಾರ್ವಜನಿಕರಿಗೆ ಮಾರಾಟ ಮಾಡಲಾಗಿದೆ. 221 ಸೈಟ್ ಪೈಕಿ 61 ನಿವೇಶನಗಳ ಜಾಗವನ್ನು ಯಾವುದೇ ಪರಿಹಾರ ನೀಡದೇ ಎಂಎಸ್ಪಿಎಲ್ ಕಂಪನಿಗೆ ಕೆಐಎಡಿಬಿ ಅಧಿಕಾರಿಗಳು ನೀಡಿದ್ದಾರೆಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಈ ಬಗ್ಗೆ ಧಾರವಾಡ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು 2022ರಲ್ಲಿ ನಿವೇಶನ ಮಾಲೀಕರು ಪರಿಹಾರ ಪಡೆಯಲು ಅರ್ಹರೆಂದು ತೀರ್ಪು ನೀಡಿದೆ. ಕಂಪನಿಗೆ 300 ಎಕರೆ ಜಾಗ ಸಾಕು. ಆದರೆ, 2006&07ರಲ್ಲೇ 1200 ಎಕರೆ ಸ್ವಾಧಿನಪಡಿಸಿಕೊಂಡಿದ್ದಾರೆ.
ಶೇ.80ರಷ್ಟು ಜಾಗ ನಿರುಪಯುಕ್ತವಾಗಿದೆ. ಹೈಕೋರ್ಟ್ ತೀರ್ಪಿನಂತೆ ಹಲವು ಬಾರಿ ಪತ್ರ ಬರೆದರೂ ಪರಿಹಾರ ನೀಡಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಸೇರಿ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲವೆಂದರು.
ಈ ಸಂದರ್ಭದಲ್ಲಿ ನಿವೇಶನಗಳ ಮಾಲೀಕರಾದ ಶ್ರೀಶೈಲಪ್ಪ, ಮಹೇಶ ಅಂಗಡಿ ಇತರರಿದ್ದರು.