
ಗಣಿತಶಾಸ್ತçವನ್ನು ಶಿಕ್ಷಕರು ಮಕ್ಕಳಿಗೆ ಸರಳವಾಗಿ ಅರ್ಥವಾಗುವ ಶೈಲಿಯಲ್ಲಿ ಬೋಧಿಸಿ : ಸಿಇಓ ಪಾಂಡೇಯ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 29- ಶಾಲೆಯಲ್ಲಿ ಶಿಕ್ಷಕರು ಗಣಿತಶಾಸ್ತ್ರವನ್ನು ಮೊದಲು ತಾವು ಅರ್ಥೈಸಿಕೊಂಡು ಮಕ್ಕಳಿಗೆ ಸರಳವಾಗಿ ಅರ್ಥವಾಗುವ ಶೈಲಿಯಲ್ಲಿ ಪಾಠವನ್ನು ಬೋದಿಸಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೇಯ ಹೇಳಿದರು.
ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಬೆಂಗಳೂರು, ಕೆ.ಎಸ್.ಸಿ.ಎಸ್.ಟಿ ಪ್ರಾದೇಶಿಕ ಕಚೇರಿ ಕಲಬುರಗಿ ಹಾಗೂ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಕೊಪ್ಪಳ ಇವರ ಸಹಯೋಗದಲ್ಲಿ ಗಣಿತಶಾಸ್ತ್ರದ ಪಾಂಡಿತ್ಯದ ಬಗ್ಗೆ ಪ್ರೌಢಶಾಲಾ ಶಿಕ್ಷಕರಿಗೆ ಬೋಧನಾ ತಂತ್ರಗಳ ಕುರಿತು ಜಿಲ್ಲಾ ಪಂಚಾಯತ್ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ಅಕ್ಟೋಬರ್ ೨೯ರಂದು ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಗುವಿಗೆ ಪರಿಚಯವಿಲ್ಲದ ಪದ ಸಮಸ್ಯೆಗಳನ್ನು ಪರಿಹರಿಸಲು ಪರಿಕಲ್ಪನೆಯ ಜ್ಞಾನವನ್ನು ಬಳಸುವುದು ಮತ್ತು ಸೂಕ್ತವಾದ ಗಣಿತದ ಶಬ್ದಕೋಶವನ್ನು ಬಳಸಿಕೊಂಡು ಮಕ್ಕಳಿಗೆ ಬೋಧನೆ ಮಾಡುವುದು ಗಣಿತಶಾಸ್ತ್ರದ ಪಾಂಡಿತ್ಯವಾಗಿದೆ. ವಿದ್ಯಾರ್ಥಿಗಳ ಜೀವನದಲ್ಲಿ ಗಣಿತಶಾಸ್ತ್ರವು ತುಂಬಾ ಮುಖ್ಯವಾಗಿದ್ದು, ಶಿಕ್ಷಕರು ಮಕ್ಕಳಿಗೆ ಉತ್ತಮವಾಗಿ, ಅರ್ಥಪೂರ್ಣವಾಗಿ ಗಣಿತಶಾಸ್ತ್ರವನ್ನು ಕಲಿಸಬೇಕು. ವಿದ್ಯಾರ್ಥಿಗಳಿಗೆ ಗಣಿತಶಾಸ್ತ್ರದಲ್ಲಿ ಆಸಕ್ತಿ ಬರುವಂತೆ ಪಾಠವನ್ನು ಬೋಧಿಸಬೇಕು. ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಗಣಿತಶಾಸ್ತ್ರದ ವಿಷಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗಬೇಕು ಎನ್ನುವುದು ನಮ್ಮೆಲ್ಲರ ಉದ್ದೇಶವಾಗಿದೆ ಎಂದು ಹೇಳಿದರು.
ಶಿಕ್ಷಕರು ಮಕ್ಕಳ ಕಲಿಕೆಯ ವಾತಾವರಣಕ್ಕೆ ಸರಳ ಮತ್ತು ಸುಲಭವಾಗಿ ಅರ್ಥವಾಗುವ ಬೋಧನಾ ತಂತ್ರಗಳನ್ನು ಬಳಕೆ ಮಾಡಬೇಕು. ಈ ಕಾರ್ಯಗಾರದಿಂದ ಶಿಕ್ಷಕರು ಬೋಧನಾ ತಂತ್ರಗಳನ್ನು ಅರಿತುಕೊಳ್ಳಲು ಹಾಗೂ ಮಕ್ಕಳಿಗೆ ಗಣಿತಶಾಸ್ತ್ರದಲ್ಲಿ ಆಸಕ್ತಿ ಬರುವಂತೆ ಮಾಡಲು ಸಹಕಾರಿಯಾಗಿದೆ ಆದ್ದರಿಂದ ಎಲ್ಲಾ ಶಿಕ್ಷಕರು ಈ ಕಾರ್ಯಗಾರದ ಉಪಯೋಗವನ್ನು ಪಡೆದುಕೊಳ್ಳಿ. ನಮ್ಮ ಜಿಲ್ಲೆಯಲ್ಲಿ ಗಣಿತ ವಿಷಯದ ಫಲಿತಾಂಶ ಶೇ.೯೦ ಕ್ಕೂ ಹೆಚ್ಚು ಗುರಿಯನ್ನು ಹೊಂದಿದ್ದು, ಅದಕ್ಕಾಗಿ ಪ್ರತಿಯೊಬ್ಬ ಗಣಿತಶಾಸ್ತ್ರದ ಶಿಕ್ಷಕರು ಇದರ ಯಶಸ್ವಿಗಾಗಿ ಶ್ರಮಿಸಬೇಕು ಎಂದು ಶಿಕ್ಷಕರಿಗೆ ತಿಳಿಸಿದರು.
ಜಿಲ್ಲಾಧಿಕಾರಿಗಳ ಭೇಟಿ : ಇದೇ ವೇಳೆ ಕಾರ್ಯಗಾರಕ್ಕೆ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಭೇಟಿ ನೀಡಿದರು. ಬಳಿಕ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ಸ್ಪಷ್ಟವಾಗಿ, ನೇರವಾಗಿ ಮತ್ತು ರಚನಾತ್ಮಕ ರೀತಿಯಲ್ಲಿ ಏನು ಮಾಡಬೇಕೆಂದು ಮತ್ತು ಹೇಗೆ ಮಾಡಬೇಕೆಂದು ಹೇಳಬೇಕು. ಗಣಿತಶಾಸ್ತ್ರವನ್ನು ಮಕ್ಕಳಿಗೆ ಯಾವ ಭಾಷೆಯ ಶೈಲಿಯಲ್ಲಿ ಹೇಳಿದರೆ ಅವರಿಗೆ ಬೇಗ ಅರ್ಥವಾಗುತ್ತದೆ ಎಂದು ಶಿಕ್ಷಕರು ಅರಿತುಕೊಳ್ಳಬೇಕು ಎಂದು ಹೇಳಿದರು.
ಶಿಕ್ಷಕರಿಗೆ ಮಕ್ಕಳ ಬಗ್ಗೆ ಹೆಚ್ಚು ಜ್ಞಾನವಿರಬೇಕು. ಮಕ್ಕಳಿಗೆ ಎಷ್ಟು ಸುಲಭವಾಗಿ ಮತ್ತು ಆಸಕ್ತಿದಾಯಕವಾಗಿ ಬೋಧನೆ ಮಾಡುತ್ತೇವೆಯೋ ಅಷ್ಟು ಬೇಗ ಅವರಿಗೆ ಅರ್ಥೈಸಿಕೊಳ್ಳಲು ಅನುಕೂಲವಾಗುತ್ತದೆ. ಪ್ರೌಢಶಾಲಾ ಶಿಕ್ಷಕರಿಗೆ ಬೋಧನಾ ತಂತ್ರಗಳ ಕುರಿತು ಈ ಒಂದು ದಿನದ ತರಬೇತಿ ಕಾರ್ಯಾಗಾರ ನಿಮಗೆ ಸಿಕ್ಕಿರುವ ಒಳ್ಳೆಯ ಅವಕಾಶವಾಗಿದ್ದು, ಇದನ್ನು ಬಳಸಿಕೊಂಡು ಮಕ್ಕಳಿಗೆ ಗಣಿತಶಾಸ್ತ್ರವನ್ನು ಹೇಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಬೋಧನೆ ಮಾಡಬೇಕು ಎಂಬುವುದನ್ನು ಅರಿತುಕೊಳ್ಳಿ ಹಾಗೂ ಶಾಲೆಯಲ್ಲಿ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಸತತವಾಗಿ ನಿಮ್ಮ ಪರಿಶ್ರಮವಿರಲಿ ಎಂದು ಪ್ರೌಢ ಶಾಲಾ ಶಿಕ್ಷಕರಿಗೆ ತಿಳಿಸಿದರು.
ಕೆಎಸ್ಸಿಎಸ್ಟಿ ಕಾರ್ಯನಿರ್ವಾಹಕ ಕಾರ್ಯದರ್ಶಿಗಳಾದ ಡಾ.ಯು.ಟಿ ವಿಜಯ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಗಣಿತ ದೈನಂದಿನ ಜೀವನದಲ್ಲಿ ಅಸ್ತಿತ್ವದಲ್ಲಿದೆ ಮತ್ತು ಶಿಕ್ಷಕರು ಮಕ್ಕಳನ್ನು ಗಣಿತ ಕಲಿಕೆಗೆ ಪ್ರೋತ್ಸಾಹಿಸಬೇಕು ಎಂದು ಹೇಳಿದರು. ಸಂಪನ್ಮೂಲ ವ್ಯಕ್ತಿಗಳು ಗಣಿತಶಾಸ್ತ್ರದ ವಿವಿಧ ವಿಷಯಗಳ ಕುರಿತು ವಿವರವಾಗಿ ತರಬೇತಿ ನೀಡಿದರು.
ಕಾರ್ಯಾಗಾರದಲ್ಲಿ ಜಿ.ಪಂ ಮುಖ್ಯ ಯೋಜನಾಧಿಕಾರಿ ಡಿ.ಮಂಜುನಾಥ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀಶೈಲ್ ಬಿರಾದಾರ, ಕೆಎಸ್ಸಿಎಸ್ಟಿಯ ಯೋಜನಾ ಅಭಿಯಂತರರಾದ ಡಾ.ಸೈಯದ್ ಸಮೀರ್, ಗುರುಸ್ವಾಮಿ ಪಿ, ಪ್ರಾಜೆಕ್ಟ್ ಅಸೋಸಿಯೇಟ್ ಕೆಎಸಿಎಸ್ಟಿ ಪ್ರಾದೇಶಿಕ ಕೇಂದ್ರ ಕಲಬುರಗಿ ವಿಶ್ವಪ್ರಸನ್ನ ಸೇರಿದಂತೆ ಜಿಲ್ಲೆಯ ಪ್ರೌಢ ಶಾಲೆಯ ಶಿಕ್ಷಕರುಗಳು ಉಪಸ್ಥಿತರಿದ್ದರು.