
ಡಾ. ರಾಜ್ ಕುಮಾರ್ ಕನ್ನಡದ ಸಂಸ್ಕೃತಿಯ ಪ್ರತೀಕ ;
ಶಾಸಕ ರಿಜ್ವಾನ್ ಅರ್ಷದ್
ಕರುನಾಡ ಬೆಳಗು ಸುದ್ದಿ
ಬೆಂಗಳೂರು, 24- ನೂರಾರು ನಟರು, ಸೂಪರ್ ಸ್ಟಾರ್ ಗಳು ಬಂದಿದ್ದಾರೆ ಆದರೆ ಡಾ.ರಾಜಕುಮಾರ್ ಏರಿದ ಎತ್ತರಕ್ಕೆ ಎಲ್ಲರೂ ಏರಲು ಕಷ್ಟಸಾಧ್ಯ. ಕನ್ನಡಿಗರಾಗಿ ಡಾ.ರಾಜಕುಮಾರ್ ಜನಿಸಿದ್ದು ನಮ್ಮ ನಾಡಿನ ಹೆಮ್ಮೆ ಹಾಗೂ ಪುಣ್ಯ. ಅವರು ಕನ್ನಡದ ಸಂಸ್ಕೃತಿಯ ಪ್ರತೀಕವಾಗಿದ್ದರು ಎಂದು ಶಾಸಕ ರಿಜ್ವಾನ್ ಅರ್ಷದ್ ಹೇಳಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸುಲೋಚನ ಸಭಾಂಗಣದಲ್ಲಿ ಆಯೋಜಿಸಿದ್ದ ಡಾ.ರಾಜಕುಮಾರ್ ಅವರ 97 ನೇ ಜನ್ಮದಿನಾಚರಣೆ ಉದ್ದೇಶಿಸಿ ಅವರು ಮಾತನಾಡಿದ ಅವರು ದೇಶದ ಇತಿಹಾಸದಲ್ಲಿ ಕೆಲವರು ಛಾಪು ಮೂಡಿಸಿರುವಂತೆ ಡಾ. ರಾಜ್ ಕುಮಾರ್ ಅವರು ಚಿತ್ರರಂದಲ್ಲಿ ಛಾಪು ಮೂಡಿಸಿದ್ದಾರೆ. ಜನಸಾಮಾನ್ಯರ ನೋವು ನಲಿವುಗಳಿಗೆ ಡಾ.ರಾಜ್ ಸ್ಪಂದಿಸಿದ ಮಾದರಿಯಲ್ಲಿ ಮತ್ತೊಂದು ಉದಾಹರಣೆ ಇಲ್ಲ. ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಇಡೀ ಜಗತ್ತಿನಾದ್ಯಂತ ಗುರುತಿಸುವಂತೆ ಬೆಳೆದ ಪರಿ ಸಾಮಾನ್ಯವಾದುದಲ್ಲ. ಇಂದಿಗೂ ಅವರ ನಟನೆಗೆ, ಗಾಯನಕ್ಕೆ ಮನಸೋಲದವರೇ ಇಲ್ಲ. ನಾಡು, ನುಡಿ, ನೆಲ ಜಲದ ವಿಷಯ ಬಂದಾಗ ಕನ್ನಡದ ಕಾರ್ಯಕರ್ತನಾಗಿ ಮೊದಲು ಧ್ವನಿ ಎತ್ತಿ, ಚಳವಳಿಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಿದ್ದರು ಎಂದು ಹೇಳಿದರು.
ನಟರು ಬದುಕಿದ್ದಾಗ ಅಭಿಮಾನಿಗಳಿರುವುದು ಸಹಜ. ಅವರ ಮರಣದ ನಂತರವೂ ಡಾ. ರಾಜ್ಕುಮಾರ್ ಅವರು ಇಂದಿಗೂ ಅಪಾರ ಅಭಿಮಾನಿ ಬಳಗವನ್ನು ಉಳಿಸಿಕೊಂಡಿರುವುದು ನೋಡಿದರೆ ಅದೊಂದು ದೇವರು ಕೊಟ್ಟಂತಹ ವರವೇ ಸರಿ. ಯಾವುದೇ ಜಾತಿ, ಯಾವುದೇ ಧರ್ಮ ಎನ್ನುವುದು ಇಲ್ಲ. ಎಲ್ಲರೂ ಸಹ ಡಾ. ರಾಜ್ಕುಮಾರ್ ಅವರ ಅಭಿಮಾನಿಗಳೇ. ಡಾ.ರಾಜ್ ಕುಮಾರ್ ಅವರು ಸರಳ, ಸಜ್ಜನಿಕೆ, ವಿನಯ ವಂತಿಕೆಯ ಆದರ್ಶ ವ್ಯಕ್ತಿಯಾಗಿದ್ದಾರು. ಅವರ ಆದರ್ಶ ವ್ಯಕ್ತಿವ್ಯ ಮುಂದಿನ ಪೀಳಿಗೆಗೂ ಮಾದರಿಯಾಗಬೇಕು ಎಂದು ತಿಳಿಸಿದರು.
ಹಿರಿಯ ನಟ ರಾಘವೇಂದ್ರ ರಾಜಕುಮಾರ್ ಮಾತನಾಡಿ, ಡಾ.ರಾಜಕುಮಾರ್ ಅವರು ತಮ್ಮ ಬಯಕೆಯಂತೆ ಸಾಕಷ್ಟು ಸದೃಢರಾಗಿದ್ದ ಸಮಯದಲ್ಲಿಯೇ ನಮ್ಮನ್ನೆಲ್ಲ ಅಗಲಿದರು. ನಾನಾ ಬಗೆಯ ವಿಭಿನ್ನ ಪಾತ್ರಗಳಲ್ಲಿ ಮಿಂಚಿದ್ದ ಡಾ.ರಾಜಕುಮಾರ್ ಅವರನ್ನು ವಯೋವೃದ್ಧರಾಗಿ, ಗಾಲಿ ಖುರ್ಚಿಯಲ್ಲಿ ನೋಡುವ ಪರಿಸ್ಥಿತಿ ಬರಬಾರದು ಎಂಬ ಆಸೆ ಅವರದಾಗಿತ್ತು. ತಮ್ಮ ಇಚ್ಛೆಯಂತೆ ಸಾಕಷ್ಟು ಆರೋಗ್ಯವಂತರಾಗಿದ್ದಾಗಲೇ ಅವರು ಭೌತಿಕವಾಗಿ ಅಗಲಿದರು. ಆದರೆ ಅವರ ವಿಚಾರಗಳು ಇಂದಿಗೂ ಜೀವಂತವಾಗಿವೆ ಎಂದರು.
ಹಿರಿಯ ಚಲನಚಿತ್ರ ನಿರ್ದೇಶಕ ಎಸ್.ನಾರಾಯಣ ಅವರು ವಿಶೇಷ ಮಾತುಗಳನ್ನಾಡಿ, ಜನಪ್ರಿಯತೆಯ ಉತ್ತುಂಗದಲ್ಲಿ ಇದ್ದಾಗಲೂ ಆ ಯಶಸ್ಸಿನ ಅಮಲನ್ನು ತಲೆಗೆ ಏರಿಸಿಕೊಳ್ಳದೇ ಅತ್ಯಂತ ಸರಳವಾಗಿ ಬದುಕಿದವರು ಡಾ.ರಾಜಕುಮಾರ್. ಬೇಡರ ಕಣ್ಣಪ್ಪ, ಕವಿರತ್ನ ಕಾಳಿದಾಸ, ಭಕ್ತ ಕುಂಬಾರ ಸೇರಿದಂತೆ ನಾವು ನೋಡಿರದ ಅನೇಕ ಐತಿಹಾಸಿಕ, ಪೌರಾಣಿಕ ಪಾತ್ರಗಳಿಗೆ ಜೀವ ತುಂಬಿ ಅಂತಹ ವ್ಯಕ್ತಿತ್ವಗಳನ್ನು ಕನ್ನಡಿಗರಿಗೆ ಕಟ್ಟಿಕೊಟ್ಟಿದ್ದು ಸಾಮಾನ್ಯ ಸಂಗತಿಯಲ್ಲ.
ಕನ್ನಡಕ್ಕೆ ಡಬ್ಬಿಂಗ್ ಚಿತ್ರಗಳು ಬಾರದಂತೆ ನಿಷೇಧ ತರುವಲ್ಲಿ ಡಾ.ರಾಜ್ ಅವರ ಪಾತ್ರ ಮಹತ್ವದ್ದಾಗಿತ್ತು. ಅವರ ಈ ನಿಲುವಿನಿಂದಾಗಿಯೇ ಕನ್ನಡ ಚಿತ್ರರಂಗ, ಚಿತ್ರೋದ್ಯಮ ಉಳಿದು ಅನೇಕ ಕಲಾವಿದರು, ತಂತ್ರಜ್ಞರು ಬೆಳೆಯಲು, ಬದುಕು ಕಟ್ಟಿಕೊಳ್ಳಲು ಸಾಧ್ಯವಾಯಿತು. ಡಾ.ರಾಜ್ ಇರದಿದ್ದರೆ ಚಿತ್ರೋದ್ಯಮ ಈ ಮಟ್ಟದಲ್ಲಿ ಬೆಳೆಯಲು ಸಾಧ್ಯವಿರುತ್ತಿರಲಿಲ್ಲ. ಅಂದು ರಾಜ್ಯದಲ್ಲಿ ಇದ್ದ 182 ಚಿತ್ರಮಂದಿಗಳು, ಅವರ ಪರಿಶ್ರಮದಿಂದಾಗಿ ಸುಮಾರು 1800 ಚಿತ್ರ ಮಂದಿರಗಳಾಗಿ ಎಲ್ಲಾ ಚಿತ್ರಮಂದಿರಗಳಲ್ಲಿ ಹೌಸ್ಫುಲ್ ಪ್ರದರ್ಶನ ನೀಡಿ, ಚಿತ್ರೋದ್ಯಮ ಲಾಭದಾಯಕವಾಗಿ ಬೆಳೆಯುವಂತಾಯಿತು. ಸಣ್ಣ ಸಣ್ಣ ಹಳ್ಳಿಗಳಲ್ಲಿ ಟೆಂಟ್ಗಳ ತಲೆ ಎತ್ತಿದವು. ಇಂದು ಉತ್ತಮ ಚಿತ್ರಗಳ ಕೊರತೆಯಿಂದಾಗಿ ಚಿತ್ರಮಂದಿರಗಳು ಮುಚ್ಚುತ್ತ ಸಾಗಿವೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಚಿತ್ರೋದ್ಯಮದ ಭವಿಷ್ಯ ಆತಂಕ ಹುಟ್ಟಿಸುತ್ತದೆ. ರಾಜ್ ಅಭಿನಯದ ಚಿತ್ರಗಳು ಕನ್ನಡಿಗರನ್ನಷ್ಟೇ ಅಲ್ಲ ಎಲ್ಲ ಭಾರತೀಯರನ್ನು ಸೆಳೆದವು ಶಂಕರ್ ಗುರು ಸೇರಿ ಅನೇಕ ಚಿತ್ರಗಳು ಇತರೆ ಭಾಷೆಗಳಿಗೆ ರಿಮೇಕ್ ಆಗಿ ತಲುಪಿವೆ. ಪ್ರಾರಂಭದಿಂದ ಹಿಡಿದು ಕೊನೆಯವರೆಗೂ ಅವರು ನಟಿಸಿದ ಎಲ್ಲ 205 ಚಿತ್ರಗಳು ‘ಯು’ ಸರ್ಟಿಫಿಕೇಟ್ ಪಡೆದದ್ದು ಈಗ ಇತಿಹಾಸ. ಅವರ ಸಮಕಾಲೀನರಾಗಿ ನಾವೆಲ್ಲ ಜೀವಿಸಿದ್ದು ಹೆಮ್ಮೆ ಹಾಗೂ ಸಾರ್ಥಕ ಸಂಗತಿ ಎಂದರು.
ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಡಾ. ಸಾಧು ಕೋಕಿಲ ಮಾತನಾಡಿ, ಕನ್ನಡ ಭಾಷೆ, ಸಂ, ನೆಲ-ಜಲಕ್ಕಾಗಿ ದುಡಿದ ಮೇರು ಚೇತನ ಡಾ.ರಾಜಕುಮಾರ್ ಆಗಿದ್ದರು. ಅವರ ಬೆನ್ನ ಹಿಂದಿನ ಶಕ್ತಿಯಾಗಿ ಅವರ ಸಹೋದರ ಎಸ್.ಪಿ.ವರದರಾಜ್ ನಿರ್ವಹಿಸಿದ ಕಾರ್ಯವೂ ಸ್ಮರಣೀಯ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಹೇಮಂತ್ ಎಂ.ನಿಂಬಾಳ್ಕರ್ ಮಾತನಾಡಿ, ಡಾ.ರಾಜ್, ಅಮಿತಾಬ್ ಬಚ್ಚನ್, ಶಿವಾಜಿ ಗಣೇಶನ್ ಮೊದಲಾದ ಹಿರಿಯ ನಟರು ಪ್ರೇಕ್ಷಕರೊಂದಿಗೆ ನೇರ ಸಂಬಂಧ, ಸಂಪರ್ಕ ಸಾಧಿಸಿಕೊಳ್ಳುತ್ತಿದ್ದರು. ಆ ಕಾರಣಕ್ಕಾಗಿ ದೊಡ್ಡ ಹೆಸರು, ಜನಪ್ರಿಯತೆ ಗಳಿಸಲು ಸಾಧ್ಯವಾಯಿತು. ಮರಾಠಿ ಮಾಧ್ಯಮದಲ್ಲಿ ಸಾಂಪ್ರದಾಯಿಕ ಶಿಕ್ಷಣ ಪಡೆದ ತಾವು ಕರ್ನಾಟಕ ಕೇಡರ್ಗೆ ಐಪಿಎಸ್ ಅಧಿಕಾರಿಯಾಗಿ ಬಂದಾಗ ಕನ್ನಡ ಕಲಿಯಲು ಡಾ.ರಾಜಕುಮಾರ್ ಚಲನಚಿತ್ರಗಳೇ ಗುರುವಾದವು. ಡಾ.ರಾಜ್ ಸಂಭಾಷಣೆಗಳೇ ಸ್ಫೂರ್ತಿ, ಪ್ರೇರಣೆಯಾದವು ಎಂದರು.
ಸಮಾರಂಭದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಂ, ಶ್ರೀ ಕಂಠೀರವ ಸ್ಟುಡಿಯೋಸ್ ಅಧ್ಯಕ್ಷ ಮೆಹಬೂಬ್ ಪಾಷಾ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ.ನರಸಿಂಹಲು ಮತ್ತಿತರರು ಉಪಸ್ಥಿತರಿದ್ದರು.
ಸಮಾರಂಭಕ್ಕೂ ಮುನ್ನ ರಾಮಚಂದ್ರ ಹಡಪದ, ಸ್ಪರ್ಶ ಹಾಗೂ ತಂಡದವರಿಂದ ಡಾ.ರಾಜಕುಮಾರ್ ಅಭಿನಯದ ಚಿತ್ರಗೀತೆಗಳ ಗಾಯನ ಕಾರ್ಯಕ್ರಮ ಜರುಗಿತು.
ಪ
ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಡಿ.ಡೊಳ್ಳಿನ ಸ್ವಾಗತಿಸಿ ಮಾತನಾಡುತ್ತಾ, 2017ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಾ. ರಾಜ್ ಕುಮಾರ್ ಅವರ ಜನ್ಮ ದಿನಾಚರಣೆಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಲು ಆದೇಶ ಮಾಡಿದರು ಅಂದಿನಿಂದ ರಾಜ್ ಕುಮಾರ್ ಜನ್ಮದಿನಾಚರಣೆಯನ್ನು ರಾಜ್ಯಾದ್ಯಂತ ಸರ್ಕಾರಿ ಕಾರ್ಯಕ್ರಮವಾಗಿ ಪ್ರತಿ ಜಿಲ್ಲೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೂಲಕ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಶ್ರೀಮತಿ ಭಾನುಮತಿ ಅವರು ಕಾರ್ಯಕ್ರಮ ನಿರೂಪಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜಂಟಿನಿರ್ದೇಶಕರಾದ ಸಿದ್ದೇಶ್ವರಪ್ಪ ಜಿ.ಬಿ ಅವರು ವಂದಿಸಿದರು.