
ಯೋಗದಿಂದ ಸಮೃದ್ಧ ಜೀವನ
ಡಾ.ಅನಂತ್ ಝಂಡೇಕರ್
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, ೧೩- ಯೋಗ, ಭೋಗ, ತ್ಯಾಗ ಎಂಬುವವು ಮಾನವನ ಅವಿಭಾಜ್ಯ ಅಂಗವಾಗಿವೆ ಇವುಗಳನ್ನು ನಿತ್ಯ ಜೀವನದಲ್ಲಿ ಆಳವಡಿಸಿಕೊಂಡು ಸಮೃದ್ಧ ಜೀವನ ನಮ್ಮದಾಗಿಸಿಕೊಳ್ಳಬೇಕು ಎಂದು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಅನಂತ್ ಝಂಡೇಕರ್ ಅವರು ಹೇಳಿದರು.
ನಗರದ ಹೊರವಲಯದ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ದೈಹಿಕ ಶಿಕ್ಷಣ ವಿಭಾಗ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಕೋಶ ಸಹಭಾಗಿತ್ವದಲ್ಲಿ ಯೋಗ, ಶ್ರಮದಾನ, ವ್ಯಾಯಾಮ ಮತ್ತು ಕ್ರೀಡಾ ಚಟುವಟಿಕೆಗಳ ನಿತ್ಯ ಯೋಜನೆಗಳಿಗೆ ಬುಧವಾರ ಚಾಲನೆ ನೀಡಿ ಮಾತನಾಡಿದರು.
ನಿತ್ಯದ ಒತ್ತಡ ಬದುಕಿನಿಂದ ಹೊರಬರಲು ಯೋಗ ಹಾಗೂ ಕ್ರೀಡಾ ಚಟುವಟಿಕೆಗಳು ಸಹಕಾರಿಯಾಗಿವೆ. ಯೋಗವನ್ನು ನಿತ್ಯ ಕಾಯಕವಾಗಿ ತೆಗೆದುಕೊಂಡಲ್ಲಿ ಆರೋಗ್ಯಯುತ ದಿನಚರಿ ಸಾಧ್ಯ ಎಂದು ಹೇಳಿದರು.
ವಿಶ್ವವಿದ್ಯಾಲಯದ ಕುಲಸಚಿವ ರುದ್ರೇಶ್.ಎಸ್.ಎನ್ ಅವರು ಮಾತನಾಡಿ, ಯೋಗವು ಮನಸ್ಸು ಮತ್ತು ದೇಹದ ಮೇಲೆ ನಿಯಂತ್ರಣ ಸಾಧಿಸಲು ಸಹಕಾರಿ. ಆರೋಗ್ಯ ಭಾಗ್ಯದ ಗುಟ್ಟು ನಮ್ಮಲ್ಲಿಯೇ ಇದೆ ಅದನ್ನು ಕಾಯ್ದುಕೊಳ್ಳಲು ಯೋಗ, ಶ್ರಮದಾನ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಕೇವಲ ವಿಶ್ವವಿದ್ಯಾಲಯದ ಸಿಬ್ಬಂದಿ ಮಾತ್ರವಲ್ಲದೇ ಅವರ ಕುಟುಂಬದವರು, ಸಾರ್ವಜನಿಕರು ಈ ಯೋಜನೆಯ ಪ್ರಯೋಜನ ಪಡೆಯಬಹುದು. ಈ ಕಾರ್ಯಕ್ರಮವನ್ನು ವಿಶ್ವವಿದ್ಯಾಲಯದ ಅಧೀನದ ಎಲ್ಲ ಕಾಲೇಜುಗಳಿಗೆ ವಿಸ್ತರಿಸುವ ಚಿಂತನೆ ಇದ್ದು, ಇದರಿಂದ ಎಲ್ಲ ಉಪನ್ಯಾಸಕರಿಗೆ, ಸಿಬ್ಬಂದಿಗೆ, ವಿದ್ಯಾರ್ಥಿಗಳಿಗೆ ಆರೋಗ್ಯ ಭಾಗ್ಯ ಪಡೆದುಕೊಳ್ಳುವ ಪ್ರಾತಿನಿಧ್ಯತೆ ದೊರೆಯುತ್ತದೆ ಎಂದರು.
ವಿಶ್ವವಿದ್ಯಾಲಯದ ಆವರಣದಲ್ಲಿರುವ ಗಿಡಗಳಿಗೆ ನೀರು ಶೇಖರಣೆಯಾಗಲು ಕುಣಿ ತೋಡುವ ಕಾರ್ಯಕ್ಕೆ ಖುದ್ದು ಕುಲಪತಿಗಳು ಮತ್ತು ಕುಲಸಚಿವರು ಶ್ರಮದಾನ ಮಾಡಿದರು.
ಕಾರ್ಯಕ್ರಮದಲ್ಲಿ ಯೋಗ ಉಪನ್ಯಾಸಕ ಮಹೇಶ್ಬಾಬು ತರಬೇತಿ ನೀಡಿದರು. ಈ ಸಂದರ್ಭದಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು