
ಕಾಲಮಿತಿಯೊಳಗೆ ವಿವಿಧ ಯೋಜನೆಗಳ ಪ್ರಗತಿ ಸಾಧಿಸಿರಿ : ಜಿ.ಪಂ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ,9- ತಾಲೂಕಿನಲ್ಲಿ ನಡೆಯುತ್ತಿರುವ ಎಲ್ಲ ಇಲಾಖೆಯ ಕಾಮಗಾರಿಗಳು ಗುಣಮಟ್ಟ ಹಾಗೂ ತ್ವರಿತಗತಿಯಲ್ಲಿ ಸಾಗಬೇಕು, ಆ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಕಾರ್ಯನಿರ್ವಹಿಸಿರೆಂದು ಕೊಪ್ಪಳ ತಾಲೂಕ ಪಂಚಾಯತಿಯ ಆಡಳಿತಾಧಿಕಾರಿ ಹಾಗು ಜಿ.ಪಂ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಸೂಚಿಸಿದರು.
SSLC ಓದುತ್ತಿರುವ ಮಕ್ಕಳ ಈ ಬಾರಿ ಫಲಿತಾಂಶ ಹೆಚ್ಚಿಸಲು ವಿವಿಧ ವಿಷಯ ಪರಿಣಿತರಿಂದ ವಿಶೇಷ ತರಗತಿಗಳನ್ನು ಜರುಗಿಸಲು ಪ್ರತಿ ಶಿಕ್ಷಕರಿಗೆ 2 ಮಕ್ಕಳ ಜವಾಬ್ದಾರಿ ವಹಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಂಕ್ರಯ್ಯ ಮಾಹಿತಿ ನೀಡಿದರು.
ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಹನಿ ನೀರಾವರಿ ಸೌಲಭ್ಯ ಇಲಾಖೆಯಿಂದ ಒದಗಿಸತಕ್ಕದ್ದು. ಅಂಗನವಾಡಿ ಕೇಂದ್ರಗಳಿಗೆ ಈಗಾಗಲೇ ಮೊಟ್ಟೆ ವಿತರಣೆಗೆ ಟೆಂಡರ್ ಆಗಿದೆ. ಗರ್ಭಿಣಿಯಾದ ಮಹಿಳೆಯರು ಬಾಣಂತಿವರೆಗೆ ಅಂಗನವಾಡಿ ಕೇಂದ್ರಗಳಿಗೆ ಹೋಗಿ ಆಹಾರ ಸೇವಿಸಬೇಕು.08 ಕೇಂದ್ರಗಳಿಗೆ ಅಂಗನವಾಡಿ ಕಟ್ಟಡ ಸಮಸ್ಯೆ ಇದ್ದು ಕಾಮಗಾರಿ ಪ್ರಾರಂಭಿಸಿರುವದಿಲ್ಲ ಎಂಬ ಮಾಹಿತಿಯನ್ನು ಸಿಡಿಪಿಒ ಜಯಶ್ರೀ ಆರ್ ಮಾಹಿತಿ ನೀಡಿದರು.
ಗ್ರಾಮದಲ್ಲಿ ಎಸ್.ಸಿ/ಎಸ್.ಟಿ ಕಾಲೋನಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಇಲಾಖೆಯಿಂದ ಅನುದಾನ ಒದಗಿಸಿದಲ್ಲಿ ಸಂಪರ್ಕ ಕಲ್ಪಿಸಲಾಗುವದು ಎಂದರು. ಎಸ್.ಸಿ.ಪಿ/ಟಿ.ಎಸ್.ಪಿ ಯೋಜನೆಯಡಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಅವಕಾಶ ಇರುವ ಬಗ್ಗೆ ಇಲಾಖಾಧಿಕಾರಿಗಳು ಮಾಹಿತಿ ನೀಡಿದರು.
ಜೆಜೆಎಂ ಸಂಬಂಧಿಸಿದಂತೆ ಮುಕ್ತಾಯ ಹಂತದಲ್ಲಿರುವ ಎಲ್ಲಾ ಕಾಮಗಾರಿಗಳನ್ನು ತೀವ್ರಗತಿಯಲ್ಲಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಕ್ರಮವಹಿಸಿರಿ. ಯಾವುದೇ ಕಾರಣಕ್ಕೂ ವಿಳಂಬತೆ ಅನುಸರಿಸುವಂತಿಲ್ಲ ಹಾಜರಿದ್ದ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಸೂಚಿಸಿದರು.
ಈ ವೇಳೆ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ದುಂಡಪ್ಪ ತುರಾದಿ, ನರೇಗಾ ಸಹಾಯಕ ನಿರ್ದೇಶಕ ಯಂಕಪ್ಪ, ತಾಲೂಕ ಯೋಜನಾಧಿಕಾರಿ ರಾಜೆಸಾಬ ನದಾಫ್, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಮಹೇಶ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಹನಮಂತಪ್ಪ ಸೇರಿದಂತೆ ತಾಲೂಕ ಮಟ್ಟದ ವಿವಿಧ ಇಲಾಖಾಧಿಕಾರಿಗಳು ಹಾಜರಿದ್ದರು.