
ಹಲಗೇರಿ ಗ್ರಾಮ ಪಂಚಾಯತಿಯ ಹಣವಾಳ ಗ್ರಾಮದಲ್ಲಿ “ವಲಸೆ ಯಾಕ್ರೀ, ನಿಮ್ಮೂರಲ್ಲೇ ಉದ್ಯೋಗ ಖಾತ್ರಿ ಅಭಿಯಾನ” ಕಾರ್ಯಕ್ರಮ
ಕರುನಾಡ ಬೆಳಗು ಸುದ್ದಿ
ಕೊಪ್ಪಳ,26- ಮಾ.-15 ರಿಂದ ಮೇ-31ರವರೆಗೆ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಕೊಪ್ಪಳ ತಾಲೂಕಿನ ಹಲಗೇರಿ ಗ್ರಾಮ ಪಂಚಾಯತಿಯ ಹಣವಾಳ ಗ್ರಾಮದ ಆಂಜನೇಯ ದೇವಸ್ಥಾನದ ಆವರಣದಲ್ಲಿ ಐಇಸಿ ಕಾರ್ಯಕ್ರಮದಡಿ“ವಲಸೆ ಯಾಕ್ರೀ, ನಿಮ್ಮೂರಲ್ಲೇ ಉದ್ಯೋಗ ಖಾತ್ರಿ ಅಭಿಯಾನ” ಜರುಗಿತು.
ಕಾರ್ಯಕ್ರಮದ ಉದ್ದೇಶ ಕುರಿತು ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ ಮಾತನಾಡಿ ಬರಗಾಲ ಇರುವದರಿಂದ ಕೂಲಿ ಬಯಸಿ ಬೇರೆ ಕಡೆಗೆ ಗುಳೆ ಹೋಗುವದನ್ನು ತಡೆದು ಸ್ಥಳಿಯವಾಗಿ ನಿರಂತರವಾಗಿ 60 ದಿನಗಳ ಕೂಲಿ ಕೆಲಸ ನೀಡುವ ಉದ್ದೇಶದಿಂದ ಗ್ರಾಮೀಣಾಭಿವೃದ್ದಿ ಆಯುಕ್ತಾಲಯವು ಈ ಅಭಿಯಾನವನ್ನು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜರುಗಿಸುವಂತೆ ನಿರ್ದೇಶನ ನೀಡಿದೆ.
ಬೇಸಿಗೆ ಇರುವದರಿಂದ ಕೂಲಿಕಾರರಿಗೆ ಕೃಷಿ ಚಟುವಟಿಕೆಗಳಲ್ಲಿ ಕೆಲಸ ನಿರ್ವಹಿಸಲು ಯಾವುದೇ ರೀತಿಯ ಕೆಲಸ ಇರುವದಿಲ್ಲ. ಇದರಿಂದ ಕೆಲಸಕ್ಕಾಗಿ ಗುಳೆ ಹೋಗುವದನ್ನು ನಿಯಂತ್ರಿಸುವದಾಗಿದೆ. ಒಂದು ಕುಟುಂಬಕ್ಕೆ 100 ದಿನಗಳ ಕೂಲಿ ಕೆಲಸ ನೀಡಲಾಗುತ್ತಿದ್ದು ಏಪ್ರೀಲ್& ಮೇ ತಿಂಗಳುಗಳಲ್ಲಿ ಪ್ರತಿಯೊಂದು ಕುಟುಂಬ 60 ದಿನಗಳ ಪೂರೈಸಬೇಕೆನ್ನುವ ಉದ್ದೇಶ ಹೊಂದಿದೆ. ವಿಕಲಚೇತನರಿಗೆ& ಹಿರಿಯ ನಾಗರೀಕರಿಗೆ ಕೆಲಸದ ಪ್ರಮಾಣದಲ್ಲಿ ಶೇ.50% ರಿಯಾಯಿತಿ ನೀಡಿದೆ. ಪ್ರತಿ ಸಾಮುದಾಯಿಕ ಕಾಮಗಾರಿಯಲ್ಲಿ ಶೇ.60ರಷ್ಟು ಮಹಿಳೆಯರು ಕಾಮಗಾರಿ ನಿರ್ವಹಿಸುತ್ತಿದ್ದಲ್ಲಿ ಶೇ.10ರಷ್ಟು ಕೆಲಸದ ಪ್ರಮಾಣದಲ್ಲಿ ರಿಯಾಯಿತಿ ನೀಡಿದೆ. ಮಹಿಳೆಯರಿಗೆ ಮತ್ತು ಪುರುಷರಿಗೆ ಸಮಾನ ಕೆಲಸ, ಸಮಾನ ಕೂಲಿ ಪಾವತಿಸಲಾಗುತ್ತದೆ. ಕೆಲಸದ ಅಳತೆಗನುಗುಣವಾಗಿ ಕೂಲಿ ಪಾವತಿಸಲಾಗುತ್ತಿದ್ದು ಎಲ್ಲಾ ಕೂಲಿಕಾರರು ಹಾಲಿ ಇರುವ ರೂ.316/-ಕ್ಕೆ ನಿರ್ಧರಿಸಿದಂತೆ ಕೆಲಸವನ್ನು ನಿರ್ವಹಿಸಿ ಪೂರ್ತಿ ಪ್ರಮಾಣದಲ್ಲಿ ಕೂಲಿ ಪಡೆಯಬೇಕೆಂದರು.
ಮಹಿಳಾ ಭಾಗವಹಿಸುವಿಕೆ ಹೆಚ್ಚಳಕ್ಕೆ ಪ್ರೋತ್ಸಾಹಿಸಲು ಮಹಿಳಾ ಕಾಯಕ ಬಂಧುಗಳ ನೇಮಕವಾಗಲು ಪ್ರತಿ ಪುರುಷ ಕಾಯಕ ಬಂಧುವಿಗೆ ರೂ.4/- ಹಾಗು ಮಹಿಳಾ ಕಾಯಕ ಬಂಧುವಿಗೆ ರೂ.5/-ಪಾವತಿಸಲಾಗುತ್ತದೆ ಎಂದರು. ಮಹಾತ್ಮಾ ಗಾಂಧಿ ನರೇಗಾದಡಿ ವೈಯಕ್ತಿಕ ಕಾಮಗಾರಿಗಳಾದ ಜಾನುವಾರ ಶೆಡ್, ಮೆಕೆಶೆಡ್, ಕೃಷಿಹೊಂಡ, ಕೋಳಿಶೆಡ್, ಹಂದಿಶೆಡ್, ಬದು ನಿರ್ಮಾಣ ಕಾಮಗಾರಿ ಅನುಷ್ಠಾನಿಸಲು ಅವಕಾಶ ಇರುತ್ತದೆ. ಜಮೀನು ಸ್ಥಳಾವಕಾಶ ಇಲ್ಲದವರು ಸಾಮೂಹಿಕ ಕಾಮಗಾರಿಯಲ್ಲಿ ಕೂಲಿ ಕೆಲಸ ನಿರ್ವಹಿಸಿ ಯೋಜನೆಯಡಿ ಕೂಲಿ ಹಣವನ್ನು ಪಡೆಯಬಹುದಾಗಿದೆ. ಬರಗಾಲ ಇರುವದರಿಂದ ಕೂಲಿಕಾರರು 60 ದಿನಗಳ ಕಾಲ ಕೂಲಿ ಕೆಲಸ ನಿರ್ವಹಿಸಿದಲ್ಲಿ ರೂ.18960/- ಕೂಲಿ ಹಣ ದೊರೆಯುತ್ತದೆ. ಬಿತ್ತನೆಯ ಸಮಯದಲ್ಲಿ, ಮಕ್ಕಳ ಶಾಲಾ ಶಿಕ್ಷಣ ಉದ್ದೇಶಕ್ಕಾಗಿ ಬಳಕೆಗೆ ಸಹಕಾರಿಯಾಗುತ್ತದೆ ಎಂದರು. ಇದೇ ಸಂದರ್ಭದಲ್ಲಿ 342 ಕೂಲಿಕಾರರಿಂದ ಫಾರಂ 6 ಸ್ವೀಕರಿಸಲಾಯಿತು.
ನಂತರ ಕೂಲಿಕಾರರಿಗೆ ಲೋಕಸಭಾ ಚುನಾವಣೆಯ ಮತದಾನ ಜಾಗೃತಿಯ ಸ್ವೀಪ್ ಕಾರ್ಯಕ್ರಮ ಜರುಗಿತು. ಮೇ-7ರಂದು ಲೋಕಸಭಾ ಚುನಾವಣೆ ಜರುಗಲಿದ್ದು ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಕೇಂದ್ರಕ್ಕೆ ಹೋಗಿ ಮತ ಚಲಾಯಿಸಬೇಕೆಂದು ಕರೆ ನೀಡಿದರು. ಪ್ರತಿ ಮತ, ದೇಶದ ಅಭಿವೃದ್ದಿಗೆ ಹಿತ, ಅರಿತುಕೊಂಡು ನಾವೆಲ್ಲರೂ ಮತ ಚಲಾವಣೆಯಲ್ಲಿ ಭಾಗವಹಿಸೊಣ ಎಂದರು. ಮತದಾನ ಪ್ರತಿಜ್ಞಾ ವಿಧಿಯನ್ನು ಹಲಗೇರಿ ಗ್ರಾಮ ಪಂಚಾಯತಿಯ ಕಾರ್ಯದರ್ಶಿ ದೊಡ್ಡನಗೌಡ ಪಾಟೀಲ್ ಬೋಧಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ದೊಡ್ಡನಗೌಡ ಪಾಟೀಲ್, ಬೇರ್ ಫೂಟ್ ಟೆಕ್ನಿಷಿಯನ್ ಮಲ್ಲಯ್ಯ ಮಳ್ಳಯ್ಯನವರ, ಗ್ರಾಮ ಕಾಯಕ ಮಿತ್ರ ವಿಜಯಲಕ್ಷ್ಮೀ, ಕಾಯಕ ಬಂಧು ರುದ್ರಪ್ಪ ಕರ್ಕಿಹಳ್ಳಿ, ಸಿದ್ದಪ್ಪ ಬಾರಕೇರ, ಸಿದ್ದಬೀರಪ್ಪ ಸಿಂಧೋಗೆಪ್ಪನವರ, ವಿಜಯಲಕ್ಷ್ಮೀ ಕರ್ಕಿಹಳ್ಳಿ, ಮಂಜುಳಾ ಬಾರಕೇರ, ಕೂಲಿಕಾರರು, ಗ್ರಾಮದ ಸಾರ್ವಜನಿಕರು ಭಾಗವಹಿಸಿದ್ದರು.