
3 ಕ್ಷೇತ್ರಗಳಲ್ಲೂ ಬಿಜೆಪಿ- ಎನ್ಡಿಎ ಪಕ್ಷ ಗೆಲ್ಲಲಿದೆ : ವಿಜಯೇಂದ್ರ
ಕರುನಾಡ ಬೆಳಗು ಸುದ್ದಿ
ಬೆಂಗಳೂರು, 8- ಮುಖ್ಯಮಂತ್ರಿಗಳ ಕುಮ್ಮಕ್ಕಿನಿಂದ ಜಮೀರ್ ಅಹ್ಮದ್ ಅವರೇ ನೇತೃತ್ವ ವಹಿಸಿ ರೈತರ ಜಮೀನಿಗೆ ಕನ್ನ ಹಾಕುವ ಕೆಲಸ ಮಾಡಿದ್ದರ ಪರಿಣಾಮ ಉಪ ಚುನಾವಣೆ ಮೇಲೆ ಆಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ವಿಧಾನಸೌದದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಇಂದು ಮಾತನಾಡಿದ ಅವರು, ವಕ್ಫ್ ವಿಚಾರದಲ್ಲಿ ಕಾಂಗ್ರೆಸ್ ಸರಕಾರ, ಮುಖ್ಯಮಂತ್ರಿಗಳ ಧೋರಣೆ, ನಡವಳಿಕೆಯನ್ನು ರಾಜ್ಯದ ರೈತರು- ಜನರು ಪ್ರಶ್ನೆ ಮಾಡುತ್ತಿದ್ದಾರೆ ಎಂದು ಹೇಳಿದರು. ರಾಜ್ಯದ ಸಂಡೂರು, ಶಿಗ್ಗಾಂವಿ ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗಳಲ್ಲಿ 3 ಕ್ಷೇತ್ರಗಳಲ್ಲೂ ಬಿಜೆಪಿ- ಎನ್ಡಿಎ ಪಕ್ಷ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
3 ಕ್ಷೇತ್ರಗಳ ಉಪ ಚುನಾವಣೆ ನಡೆಯುತ್ತಿದೆ. ಶಿಗ್ಗಾಂವಿ ಕ್ಷೇತ್ರದಲ್ಲಿ ಬಿಜೆಪಿ ಈಗಾಗಲೇ ಗೆದ್ದಾಗಿದೆ ಎಂಬ ವಾತಾವರಣ ನಿರ್ಮಾಣವಾಗಿದೆ. ಸಂಡೂರಿನಲ್ಲಿ ಮತ್ತು ಚನ್ನಪಟ್ಟಣದಲ್ಲಿ ಕಾಂಗ್ರೆಸ್ನವರು ಗೆದ್ದೇಗೆಲ್ಲುವ ಭ್ರಮೆಯಲ್ಲಿದ್ದರು. ಆದರೆ, ಈಗ ಮಾನ್ಯ ಮುಖ್ಯಮಂತ್ರಿಗಳಿಗೆ, ಸಚಿವರಿಗೆ ಚನ್ನಪಟ್ಟಣದಲ್ಲಿ ಜೆಡಿಎಸ್ ಪಕ್ಷಕ್ಕೆ ಮೇಲುಗೈ ಆಗುತ್ತಿರುವುದು ಅರಿವಾಗಿದೆ ಎಂದು ವಿಶ್ಲೇಷಿಸಿದರು.
ಮುಖ್ಯಮಂತ್ರಿಗಳು ತಮ್ಮ ಕಾರ್ಯಕ್ರಮಗಳನ್ನು ರದ್ದು ಮಾಡಿ ಸಂಡೂರಿನಲ್ಲಿ ಬೀಡುಬಿಡುತ್ತಿದ್ದು, ಆ ಕ್ಷೇತ್ರವೂ ಕಾಂಗ್ರೆಸ್ ಕೈಜಾರಿ ಹೋಗುವ ವಾತಾವರಣ ಇದೆ ಹಾಗೂ ಬಿಜೆಪಿಗೆ ಮೇಲುಗೈ ಆಗುವ ವಾತಾವರಣ ನಿರ್ಮಾಣವಾಗಿದೆ. ಮುಖ್ಯಮಂತ್ರಿಗಳ ರೈತ ವಿರೋಧಿ ಧೋರಣೆ, ಮಠಮಾನ್ಯಗಳ ಜಮೀನನ್ನು ಕಸಿಯುವ ಹುನ್ನಾರದ ಹಿಂದೂ ವಿರೋಧಿ ನಡವಳಿಕೆಯು ಕಾಂಗ್ರೆಸ್ಸಿಗೆ ಶಾಪ ಆಗಲಿದೆ ಎಂದು ನುಡಿದರು. ಜನರು ತಿರುಗಿ ಬೀಳಲಿದ್ದಾರೆ ಎಂದು ತಿಳಿಸಿದರು.
ಮುಂದಿನ ಮೂರೂವರೆ ವರ್ಷ ನಾನೇ ಸಿಎಂ ಎಂಬ ಸಿದ್ದರಾಮಯ್ಯನವರ ಹೇಳಿಕೆ ಕುರಿತು ಪತ್ರಕರ್ತರು ಗಮನ ಸೆಳೆದಾಗ, ಆರೋಪಿ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳು ಒಂದು ಕಡೆ ತಮ್ಮ ಬೆನ್ನನ್ನು ತಾವು ತಟ್ಟಿಕೊಳ್ಳುತ್ತಿದ್ದಾರೆ. ತಾವೇ ಮುಖ್ಯಮಂತ್ರಿಗಳಾಗಿ ಮುಂದುವರೆಯುವುದಾಗಿ ಹೇಳಿ ಶಾಸಕರಿಗೆ ವಿಶ್ವಾಸ ತುಂಬುವ ಕೆಲಸ ಮಾಡುತ್ತಿದ್ದಾರೆ. ಆದರೆ, ಸತ್ಯ ಏನೆಂದು ಸಿದ್ದರಾಮಯ್ಯನವರಿಗೂ ಗೊತ್ತಿದೆ; ಅವರು ಯಾವಾಗ ರಾಜೀನಾಮೆ ಕೊಡುತ್ತಾರೆಂದು ಡಿ.ಕೆ.ಶಿವಕುಮಾರ್ ಅವರಿಗೆ ಹಾಗೂ ಮಲ್ಲಿಕಾರ್ಜುನ ಖರ್ಗೆಯವರಿಗೆ ಗೊತ್ತಿದೆ ಎಂದು ತಿಳಿಸಿದರು.
ಚುನಾವಣೆ ಸಂದರ್ಭದಲ್ಲಿ ಕೆಲವು ಸಮಾಜಗಳ ಮತ ಕೀಳುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದಾರೆ. ಸಿಎಂ ರಾಜೀನಾಮೆ ಈಗಾಗಲೇ ನಿಶ್ಚಯವಾಗಿದೆ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಮಾತಿನ ಮೇಲೆ ಹಿಡಿತವಿರಲಿ : ಡಿ.ಕೆ.ಶಿವಕುಮಾರ್ ಅವರ ತಗ್ಗಿ ಬಗ್ಗಿ ನಡೆಯಬೇಕೆಂಬ ಹೇಳಿಕೆ ಕುರಿತು ಪತ್ರಕರ್ತರು ಪ್ರಶ್ನಿಸಿದಾಗ, ಅಧಿಕಾರದ ದರ್ಪ ಈ ರೀತಿ ಮಾಡಿಸುತ್ತದೆ. ಈ ಕಾಂಗ್ರೆಸ್ ಸರಕಾರ ಮತ್ತು ಸಚಿವರ ನಡವಳಿಕೆ ನೋಡಿದರೆ ಅಧಿಕಾರದ ದರ್ಪದಿಂದ ಈ ರೀತಿ ಮಾತುಗಳು ಬರುತ್ತಿವೆ. ಪಾಪ, ಜಯನಗರ ವಿಧಾನಸಭಾ ಕ್ಷೇತ್ರದ ಮತದಾರರು ಏನು ಮಾಡಿದ್ದಾರೆ? ಅಲ್ಲಿ ಬಿಜೆಪಿ ಶಾಸಕ ರಾಮಮೂರ್ತಿ ಅವರು ಗೆದ್ದಿದ್ದಾರೆಂಬ ಕಾರಣಕ್ಕೆ ತಗ್ಗಿ ಬಗ್ಗಿ ನಡೆಯಬೇಕೆಂದು ಹೇಳಿದರೆ, ಇವರೇನು ಪ್ರಜಾಪ್ರಭುತ್ವದಲ್ಲಿ ಇದ್ದಾರಾ? ಇವರದು ಸರ್ವಾಧಿಕಾರಿ ಪ್ರವೃತ್ತಿಯೇ? ಎಂದು ಕೇಳಿದರು.
ಶಾಸಕರೊಬ್ಬರ ಬಗ್ಗೆ ಹಗುರವಾಗಿ ಮಾತನಾಡುವುದು ಕೇವಲ ಶಾಸಕರಿಗೆ ಮಾಡುವ ಅವಮಾನವಲ್ಲ; ವಿಧಾನಸಭಾ ಕ್ಷೇತ್ರದ ಮತದಾರರಿಗೆ ಮಾಡುವ ಅವಮಾನ ಎಂದು ಖಂಡಿಸಿದರು. ಮಾನ್ಯ ಡಿ.ಕೆ.ಶಿವಕುಮಾರ್ ಅವರೇ, ಅಧಿಕಾರ ಎಂಬುದು ಶಾಶ್ವತವಲ್ಲ; ಅದು ನಿಮಗೂ ಗೊತ್ತಿದೆ. ಕ್ಷೇತ್ರದ ಜನರಿಗೂ ಗೊತ್ತಿದೆ. ರಾಜ್ಯದ ಜನರಿಗೂ ಗೊತ್ತಿದೆ. ವಿಪಕ್ಷಗಳ ಶಾಸಕರ ಮೇಲೆ ದಬ್ಬಾಳಿಕೆ ಮಾಡುವುದು ಶೋಭೆ ತರುವುದಿಲ್ಲ; ಅವರು ಮಾತಿನ ಮೇಲೆ ಹಿಡಿತ ಇಟ್ಟುಕೊಳ್ಳಬೇಕೆಂದು ಎಚ್ಚರಿಸಿದರು.
ವಕ್ಫ್ ವಿಚಾರದಲ್ಲಿ ನೋಟಿಸ್ ಕೊಡುವ- ಮಣ್ಣು ತಿನ್ನುವ ಕೆಲಸಕ್ಕೆ ಯಾಕೆ ಸರಕಾರ ಕೈ ಹಾಕಬೇಕಿತ್ತು ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದರು.