
ಅಜೀಂ ಪ್ರೇಮ್ಜಿ ಫೌಂಡೇಶನ್ ಕಾರ್ಯ ಪ್ರಪಂಚಕ್ಕೆ ಮಾದರಿ : ಸಂಸದ ಹಿಟ್ನಾಳ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 28- ಅಜೀಂ ಪ್ರೇಮ್ಜಿ ಫೌಂಡೇಶನ ಮಾಡುತ್ತಿರುವ ಸೇವಾ ಕಾರ್ಯವು ಪ್ರಪಂಚಕ್ಕೆ ಮಾದರಿಯಾಗಿದೆ ಎಂದು ಸಂಸದÀ ಕೆ.ರಾಜಶೇಖರ ಹಿಟ್ನಾಳ ಹೇಳಿದರು.
ನಗರದ ಸಿ.ಪಿ.ಎಸ್.ಶಾಲೆಯಲ್ಲಿ ಅಜೀಂ ಪ್ರೇಮ್ಜಿ ಫೌಂಡೇಶನ್ ವತಿಯಿಂದ ಶಾಲಾ ಮಕ್ಕಳಿಗೆ ವಾರದಲ್ಲಿ ೪ ದಿನಗಳ ಮೊಟ್ಟೆ ವಿತರಣೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ,ಸರಕಾರವು ಶಾಲಾ ಮಕ್ಕಳಲ್ಲಿ ಇರುವ ಅಪೌಷ್ಟಿಕತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಕ್ಷೀರಭಾಗ್ಯ, ಮಧ್ಯಾಹ್ನದ ಬಿಸಿಯೂಟ ಸೇರಿದಂತೆ ವಾರದಲ್ಲಿ ೨ ದಿನಗಳ ಮೊಟ್ಟೆ ನೀಡುವಂತೆ ಅನೇಕ ಯೋಜನೆಗಳನ್ನು ಜಾರಿಗೆ ಮಾಡಿದೆ. ಸರಕಾರದ ಇಂತಹ ಮಹತ್ವದ ಯೋಜನೆಗಳಿಗೆ ಕೈ ಜೋಡಿಸುವ ನಿಟ್ಟಿನಲ್ಲಿ ಅಜೀಂ ಪ್ರೇಮ್ಜಿ ಫೌಂಡೇಶನ ವತಿಯಿಂದ ವಾರದಲ್ಲಿ ೪ ದಿನಗಳ ಮೊಟ್ಟೆ ಕೊಡುವ ಕಾರ್ಯಕ್ಕೆ ರೂ. ೧೫೦೦ ಕೋಟಿಯನ್ನು ನೀಡಿರುವುದು ಶ್ಲಾಘನೀಯ ಕಾರ್ಯವಾಗಿದೆ.
ದೇಶದಲ್ಲಿ ಶ್ರೀಮಂತರು ಅನೇಕರಿದ್ದಾರೆ.ಆದರೆ ದಾನ ಮಾಡಬೇಕು ಎಂಬ ಮನೋಭಾವ ಇರುವವರು ಕೇಲವರು ಮಾತ್ರ.ಅಜೀಂ ಪ್ರೇಮ್ಜಿಯ ಫೌಂಡೇಶನ್ ಕೇವಲ ಮೊಟ್ಟೆ ಕೊಡುವ ಕೆಲಸಕ್ಕೆ ಮಾತ್ರ ಸಿಮಿತವಾಗಿಲ್ಲಾ, ಇದರ ಜೊತೆಯಲ್ಲಿ ವಿವಿಧ ಶೈಕ್ಷಣಿಕ ಚಟುವಟಿಕೆಗಳನ್ನು ಮಾಡುವ ಮೂಲಕ ಪ್ರಪಂಚಕ್ಕೆ ಮಾದರಿಯಾಗಿದ್ದಾರೆ ಅಲ್ಲದೇ ಶಾಲೆಗೆ ಶೌಚಾಲಯದ ಅಗತ್ಯವಿರುವುದಾಗಿ ತಿಳಿಸಿದ್ದಾರೆ ಅದನ್ನು ಶೀಘ್ರದೇ ಒದಗಿಸುವ ಕಾರ್ಯ ಮಾಡಲಾಗುತ್ತದೆ ಎಂದು ಹೇಳಿದರು.
ಶಿಕ್ಷಕರಾದ ಬೀರಪ್ಪ ಅಂಡಗಿ ಮಾತನಾಡಿ,ಶಿಕ್ಷಕರು ಹಾಗೂ ದಾನಿಗಳ ಸಹಾಯದಿಂದ ಶಾಲೆಯನ್ನು ಅಭಿವೃದ್ದಿ ಪಡಿಸಲಾಗಿದೆ,ಹಸಿರು ಶಾಲೆಯನ್ನಾಗಿ ಮಾಡಲಾಗಿದೆ.ನಗರ ಪ್ರದೇಶದಲ್ಲಿ ಅತಿ ಹೆಚ್ಚು ದಾಖಲಾತಿ ಹೊಂದಿರುವ ಶಾಲೆಯಾಗಿದೆ.ಆದರೆ ಶೌಚಾಲಯ ಇಲ್ಲದ ಕಾರಣ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು,ಅದನ್ನು ನಿರ್ಮಿಸಿ ಕೊಡುವಂತೆ ಸಂಸದರಿಗೆ ಮನವಿ ಮಾಡಿದರು.
ನಗರಸಭೆಯ ಅಧ್ಯಕ್ಷ ಅಮಜ್ದ ಪಟೇಲ ಮಾತನಾಡಿ, ಶಾಲಾ ಮಕ್ಕಳಿಗಾಗಿ ಸರಕಾರವು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಸಮರ್ಪಕವಾದ ರೀತಿಯಲ್ಲಿ ವಿದ್ಯಾರ್ಥಿಗಳು ಬಳಸಿಕೊಳ್ಳುವ ಕಾರ್ಯವಾಗಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಗರಸಭೆಯ ಸದಸ್ಯ ಅಜೀಮ ಅತ್ತಾರ, ಅಕ್ಷರ ದಾಸೋಹದ ಜಿಲ್ಲಾ ಅಧಿಕಾರಿ ಅನಿತಾ, ತಾಲೂಕ ಅಧಿಕಾರಿ ಮಲ್ಲಿಕಾರ್ಜುನ ಗುಡಿ, ನಿಕಟ ಪೂರ್ವ ಅಧಿಕಾರಿ ಹನುಮಂತಪ್ಪ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ವಿರುಪಾಕ್ಷಪ್ಪ ಬಾಗೋಡಿ, ಕಾಶಿನಾಥ ಸಿರಿಗೇರಿ ಮುಂತಾದವರು ಹಾಜರಿದ್ದರು.
ಕಾರ್ಯಕ್ರಮವನ್ನು ಶಿಕ್ಷಕ ಮಲ್ಲಿಕಾರ್ಜಿನ ಹ್ಯಾಟಿ ನಿರೂಪಿಸಿದರು, ಶಿಕ್ಷಕ ಮಹಮ್ಮದ ಆಬೀದ ಹುಸೇನ ಅತ್ತಾರ ಸ್ವಾಗತಸಿದರು, ನಾಗಪ್ಪ ನರಿ ವಂದಿಸಿದರು.