
ಹಿಂಗಾರು ಹಂಗಾಮು: ಬಿತ್ತನೆ ಬೀಜ, ರಸಗೊಬ್ಬರ ವಿತರಣೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 3- ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಜಿಲ್ಲೆಯ ಹಿಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ ಬಿತ್ತನೆಗೆ ಅವಶ್ಯವಿರುವ ವಿವಿಧ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದು ಕೊಪ್ಪಳ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಪ್ರಸಕ್ತ ಹಿಂಗಾರು ಹಂಗಾಮು ಪ್ರಾರಂಭವಾಗಿದ್ದು, ಹಿಂಗಾರು ಹಂಗಾಮಿನಲ್ಲಿ ಬೇಕಾಗುವ ಕಡಲೆ, ಜೋಳ, ಗೋದಿ, ಸೂರ್ಯಕಾಂತಿ ಹಾಗೂ ಕುಸುಬೆ ಬಿತ್ತನೆ ಬೀಜಗಳನ್ನು ಈಗಾಗಲೇ ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದ್ದು, ಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ ರೈತ ಸಂಪರ್ಕ ಕೇಂದ್ರಗಳ ಮುಖಾಂತರ ವಿತರಣೆ ಮಾಡಲಾಗುತ್ತಿದೆ.
ಬಿತ್ತನೆ ಕಾರ್ಯಕ್ಕೆ ಹಾಗೂ ಬೆಳೆಗಳಿಗೆ ಬೇಕಾಗುವ ರಸಗೊಬ್ಬರವು ಜಿಲ್ಲೆಯಲ್ಲಿ ದಾಸ್ತಾನಿವಿದ್ದು, 13487 ಟನ್ ಯೂರಿಯಾ, 1988 ಟನ್ ಡಿಎಪಿ, 20236 ಟನ್ ಕಾಂಪ್ಲೆಕ್ಸ್, 2696 ಟನ್ ಎಂಓಪಿ ಸೇರಿದಂತೆ ಒಟ್ಟಾರೆ 38936 ಮೆಟ್ರಿಕ್ ಟನ್ ಅಷ್ಟು ರಸಗೊಬ್ಬರ ಜಿಲ್ಲೆಯಲ್ಲಿ ಲಭ್ಯವಿದ್ದು, ರೈತರು ಇದರ ಸದಪಯೋಗ ಪಡೆದುಕೊಳ್ಳಬೇಕು. ಬಿತ್ತನೆ ಬೀಜ ಪಡೆಯಲು ಎಫ್.ಐ.ಡಿ ಸಂಖ್ಯೆ ಕಡ್ಡಾಯವಾಗಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.