
ದಸರಾ ಕ್ರೀಡಾಕೂಟ ಗ್ರಾಮೀಣ ಪ್ರತಿಭೆಗಳಿಗೆ ಉತ್ತಮ ವೇದಿಕೆ : ಫರೀದಾ ಬೇಗಂ
ಕರುನಾಡ ಬೆಳಗು ಸುದ್ದಿ
ಕುಕನೂರು, 23- ದಸರಾ ಕ್ರೀಡಾಕೂಟಗಳು ಗ್ರಾಮೀಣ ಪ್ರತಿಭೆಗಳಿಗೆ ಉತ್ತಮ ವೇದಿಕೆಯಾಗಿದ್ದು ಈ ಅವಕಾಶವನ್ನು ಸುದೂಪಯೋಗಪಡಿಸಿಕೊಂಡು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ವಿದ್ಯಾರ್ಥಿಗಳು ಮಿಂಚಬೇಕು ಎಂದು ಕುದುರಿ ಮೋತಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫರೀದಾ ಬೇಗಂ ಬಾಷಾ ಸಾಬ ತಂಬಾಕುದಾರ ಹೇಳಿದರು.
ಕುಕನೂರು ತಾಲೂಕಿನ ಕುದುರಿಮೋತಿ ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆಯಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಕೊಪ್ಪಳ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಕೊಪ್ಪಳ, ಕುಕನೂರ ಹಾಗೂ ಕೂಡಲಸಂಗಮೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆ ಬೇವೂರ ಇವರ ಸಹಯೋಗದೊಂದಿಗೆ ರವಿವಾರದಂದು ಹಮ್ಮಿಕೊಂಡ ಕುಕನೂರು ತಾಲೂಕ ಮಟ್ಟದ ದಸರಾ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಸಾಕಷ್ಟು ಪ್ರತಿಭೆಗಳಿದ್ದು ಅಂತಹ ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ದಸರಾ ಕ್ರೀಡಾಕೂಟ ಸಹಕಾರಿಯಾಗಲಿದೆ ಎಂದರು.
ಗ್ರಾಮ ಮುಖಂಡ ವಿಜಯಕುಮಾರ ದಾಸರ ಮಾತನಾಡಿ ವ್ಯಕ್ತಿಗೆ ಶಿಕ್ಷಣ ಎಷ್ಟು ಮುಖ್ಯವೋ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಿದ ಅಷ್ಟೇ ಮುಖ್ಯ ಆದ್ದರಿಂದ ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಕ್ರೀಡಾಕೂಟದಲ್ಲಿ ಕುಕುನೂರು ತಾಲೂಕಿನ ವಿವಿಧ ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಕೂಡಲ ಸಂಗಮೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆ ಸದಸ್ಯ ಕಾರ್ಯದರ್ಶಿ ದ್ಯಾಮಣ್ಣ ಕೆ. ಗೊಂದಿ, ಗ್ರಾಮ ಪಂಚಾಯತಿ ಉಪಾಧ್ಯಕ್ಷ ಲಕ್ಷ್ಮಿ ದಾಸರ, ಮಂಜುನಾಥ ಸಜ್ಜನ, ರವಿ ಕಟಗಿ, ಪಂಪಣ್ಣ ಹಂಪಣ್ಣವರ, ಶರಣಯ್ಯ ಹುಲುಗಪ್ಪ ಪಾಟೀಲ್, ಮುತ್ತಣ್ಣ ಹೊಸಮನಿ ಇನ್ನಿತರರು ಇದ್ದರು.