11

ರಾಣಿ ಚೆನ್ನಮ್ಮರ ಹೋರಾಟ ಹೆಣ್ಣು ಮಕ್ಕಳಿಗೆ ಸ್ಫೂರ್ತಿಯಾಗಲಿ : ಹೇಮಲತಾ ನಾಯಕ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 23- ಕಿತ್ತೂರು ರಾಣಿ ಚೆನ್ನಮ್ಮ ಸ್ವಾತಂತ್ರö್ಯ ಹೋರಾಟದಲ್ಲಿ ಹೋರಾಟದ ಕಿಚ್ಚು ಹಬ್ಬಿಸಿದಂತ ಮಹಿಳೆಯಾಗಿದ್ದು, ಸ್ವಾತಂತ್ರö್ಯಕ್ಕಾಗಿ ಮಾಡಿದಂತಹ ಅವರ ಹೋರಾಟ ಇಂದಿನ ಹೆಣ್ಣುಮಕ್ಕಳಿಗೆ ಸ್ಫೂರ್ತಿಯಾಗಬೇಕು ಎಂದು ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಗರದ ಸಾಹಿತ್ಯ ಭವನದಲ್ಲಿ ಬುಧವಾರದಂದು ಆಯೋಜಿಸಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಿದಂತ ಮಹಿಳೆ ಅವರು ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿ ಕಾಡುತ್ತಿದ್ದರು. ರಾಣಿ ಚೆನ್ನಮ್ಮ ಭಾರತದ ಸ್ವಾತಂತ್ರö್ಯಕ್ಕಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿದಂತ ವೀರ ಮಹಿಳೆಯಾಗಿದ್ದರು. ಪ್ರತಿಯೊಬ್ಬ ಮಹಿಳೆಯು ಸಮಾಜದ ಮುನ್ನೆಲೆಗೆ ಬರಬೇಕು. ರಾಜಕೀಯವಾಗಿ ಮಹಿಳೆಯರಿಗೆ ೩೩% ಮೀಸಲಾತಿ ದೊರೆತಿದ್ದು, ಅದನ್ನು ಮಹಿಳೆಯರು ಬಳಸಿಕೊಂಡು ಕಿತ್ತೂರು ರಾಣಿ ಚೆನ್ನಮ್ಮ ಅವರಂತೆ ಸಾಧನೆ ಮಾಡಬೇಕು. ಜಗತ್ತನ್ನು ಆಳುವಂತ ಶಕ್ತಿ ಪ್ರತಿಯೊಬ್ಬ ಮಹಿಳೆಗೆ ಇದೆ ಎಂದು ಅವರು ಹೇಳಿದರು.

ಶೌರ್ಯ, ದೈರ್ಯದ ಪ್ರತೀಕವಾದ ಸ್ವಾತಂತ್ರö್ಯದ ಬೆಳ್ಳಿ ಚುಕ್ಕಿ ವೀರಮಾತೆಯ ರಾಣಿ ಚೆನ್ನಮ್ಮನವರ ವಿದ್ಯೆ ಹಾಗೂ ಅವರ ಆದರ್ಶಗಳನ್ನು ನಮ್ಮ ನೀಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷರಾದ ಅಮ್ಜದ್ ಪಟೇಲ್ ಅವರು ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮ ಅವರ ಹೋರಾಟದ ಪ್ರತಿಫಲದಿಂದ ಇಂದು ನಾವೆಲ್ಲರೂ ಸ್ವಾತಂತ್ರö್ಯರಾಗಿ ಬದುಕುತ್ತಿದ್ದೇವೆ. ಬ್ರಿಟಿಷರ ವಿರುದ್ಧ ಹೋರಾಡಿದಂತಹ ದೇಶದ ಮೊದಲ ಏಕೈಕ ಮಹಿಳೆ ಇವರಾಗಿದ್ದರು. ಕಿತ್ತೂರು ಚೆನ್ನಮ್ಮನವರ ಧೈರ್ಯ, ಸಂಸ್ಥಾನ ಆಳುವ ಜಾಣ್ಮೆ ಹಾಗೂ ಹೋರಾಟದ ಛಲವನ್ನು ಎಲ್ಲರೂ ಆದರ್ಶವಾಗಿ ಅಳವಡಿಸಿಕೊಂಡಾಗ ಮಾತ್ರ ಉತ್ತಮ ಸಮಾಜವನ್ನು ಕಟ್ಟುವುದಕ್ಕೆ ಸಾದ್ಯವಾಗುತ್ತದೆ ಎಂದು ಹೇಳಿದರು.

ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ನಿವೃತ್ತ ಅಧಿಕಾರಿಗಳು ಹಾಗೂ ಕೊಪ್ಪಳ ಜಿಲ್ಲಾ ಪಂಚಮಶಾಲಿ ಮಹಿಳಾ ಘಟಕದ ಅಧ್ಯಕ್ಷರಾದ ಸುಮಂಗಲಾ ಎಸ್ ಹಂಚಿನಾಳ ಅವರು ಕಿತ್ತೂರು ರಾಣಿ ಚೆನ್ನಮ್ಮರ ಕುರಿತು ವಿಶೇಷ ಉಪನ್ಯಾಸ ನೀಡಿ, ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರಿಗೆ ಸೋಲುಣಿಸಿದ ಮಹಿಳೆ. ಕಿತ್ತೂರಿನ ಸ್ವಾಭಿಮಾನ, ಕೆಚ್ಚೆದೆಯ ವೀರರು ಬ್ರಿಟೀಷರಿಗೆ ಸಿಂಹ ಸ್ವಪ್ನವಾಗಿ ಕಾಡುತ್ತಿದ್ದರು ಎಂದು ತಿಳಿಸಿದ ಅವರು ರಾಣಿ ಚೆನ್ನಮ್ಮರ ಜೀವನ ಚರಿತ್ರೆ ಕುರಿತು ವಿವರವಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯರಾದ ಲತಾ ಚಿನ್ನೂರು, ಉಮಾ ಪಾಟೀಲ್, ವಿರುಪಾಕ್ಷಪ್ಪ ಮೋರನಾಳ, ಮುತ್ತುರಾಜ ಕುಷ್ಟಗಿ, ಗುರುರಾಜ ಹಲಗೇರಿ, ಸರ್ವೇಶಗೌಡ ಹಾಗೂ ಚನ್ನಬಸಪ್ಪ ಕೋಟ್ಯಾಳ, ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಕಳಕನಗೌಡ ಪಾಟೀಲ್, ಸಮಾಜದ ಮುಖಂಡರಾದ ಬಸನಗೌಡ, ಕರಿಯಪ್ಪ ಮೇಟಿ, ವೀರಬಸಪ್ಪ, ಗವಿಸಿದ್ದಪ್ಪ ಡಂಬಳ, ಕಿಶೋರಿ ಬೂದನೂರ, ಗೀತಾ ಪಾಟೀಲ್, ಕೀರ್ತಿ ಪಾಟೀಲ್, ಪ್ರತಿಮಾ, ಸುಜಾತಾ ಪಟ್ಟಣಶೆಟ್ಟಿ ಕೊಪ್ಪಳ ಗ್ರೇಡ್-೨ ತಹಸೀಲ್ದಾರ ಗವಿಸಿದ್ದಪ್ಪ ಮಣ್ಣೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಹನುಮಂತಪ್ಪ ಕುರಿ ಅವರು ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿ.ಯು.ಸಿ ಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಅವರ ಪಾಲಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಕಿತ್ತೂರು ರಾಣಿ ಚೆನ್ನಮ್ಮ ಭಾವಚಿತ್ರದ ಮೆರವಣಿಗೆಯು ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಪ್ರಾರಂಭವಾಗಿ ಅಂಬೇಡ್ಕರ್ ಸರ್ಕಲ್, ಶಾರದಾ ಟಾಕೀಸ್, ಗಡಿಯಾರ ಕಂಬ ಮಾರ್ಗವಾಗಿ ಸಾಹಿತ್ಯ ಭವನದವರೆಗೆ ಅದ್ದೂರಿಯಾಗಿ ಜರುಗಿತು.

Leave a Reply

Your email address will not be published. Required fields are marked *

error: Content is protected !!