
ವರದಿ ಬೆನ್ನಲ್ಲೆ ಶಾಸಕರಿಂದ ಗ್ರಾಮಗಳಿಗೆ ಕಾಮಗಾರಿಗಳಿಗೆ ಭೂಮಿ ಪೂಜೆ
ಕರುನಾಡ ಬೆಳಗು ಸುದ್ದಿ
ಲಕ್ಕಿಮರದ. ಮಂಜುನಾಥ
ಮರಿಯಮ್ಮನಹಳ್ಳಿ, 23- “ಅಂಬೇಡ್ಕರ್ ಕಾಲೋನಿಯಲ್ಲಿ ಅಭಿವೃದ್ಧಿ ಮರೀಚಿಕೆ ಭಾರಿ ಮಳೆಗೆ ಮನೆಯೊಳಗೆ ನುಗ್ಗಿದ ನೀರು ಸ್ಥಳೀಯರ ಆಕ್ರೋಶ, ಮತ್ತು “ಧಾರಕಾರವಾಗಿ ಸುರಿದ ಮಳೆಗೆ ಅಸ್ತಾ ವ್ಯಸ್ತರಾದ ಗ್ರಾಮಸ್ಥರು ಶಾಸಕರ ಹುಡುಕಾಟದಲ್ಲಿ” ಎನ್ನುವ ಶೀರ್ಷಿಕೆಯೊಂದಿಗೆ ಅ.೬, ಮತ್ತು ೮ ರಂದು “ನಾಗರಿಕ” ಕನ್ನಡ ದಿನಪತ್ರಿಕೆಯಲ್ಲಿ ಸರಣಿ ಸುದ್ದಿ ಪ್ರಸಾರ ಮಾಡಲಾಗಿತ್ತು. ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಕೆ.ನೇಮಿರಾಜ್ ನಾಯ್ಕ್ ವರದಿಗೆ ಸ್ಪಂದಿಸಿ ಮಳೆಯಿಂದ ಹಾನಿಗೋಳಗಾದ ಗರಗ ಗ್ರಾಮ ಸೇರಿದಂತೆ ಮರಿಯಮ್ಮನಹಳ್ಳಿ ಹೋಬಳಿಯ ಗ್ರಾಮಗಳಲ್ಲಿ ರಸ್ತೆ ಚರಂಡಿ ಕಾಮಗಾರಿಗಳಿಗೆ ಕೂಡಲೇ ಚಾಲನೆ ನೀಡಿದರು.
ಅವರು ಅ. ೨೧ರಂದು ಗರಗ ಗ್ರಾಮಕ್ಕೆ ಭೇಟಿನಿಡಿ ಕೂಡಲೇ ಗ್ರಾಮದ ಅಭಿವೃದ್ಧಿಗೆ ತಲಾ ೫೦ ಲಕ್ಷ ರೂಪಾಯಿಗಳ ಮೊತ್ತದ ಸಿಸಿ ರಸ್ತೆ ಚರಂಡಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಇತ್ತೀಚಿಗೆ ಬೆಂಬಿಡದೇ ಸುರಿದ ಭಾರಿ ಮಳೆಗೆ ಇಲ್ಲಿನ ಜನಜೀವನ ಅಸ್ತಾವ್ಯಸ್ಥವಾಗಿತ್ತು. ರಸ್ತೆ ಮತ್ತು ಚರಂಡಿಗಳಿಲ್ಲದ ಕಾರಣ ಮಳೆ ನೀರು ಮನೆಯೊಳಗೆ ನುಗ್ಗಿ ಕಿರಿಕಿರಿ ಉಂಟಾಗಿತ್ತು. ಈ ಕುರಿತು ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾದ ಬೆನ್ನಲ್ಲೇ ಗಮನಿಸಿದ ಶಾಸಕರು ಇಲ್ಲಿನ ಹೋಬಳಿ ವ್ಯಾಪ್ತಿಯ ಹಳೇ ಗರಗ, ಹೊಸಗರಗ, ಬ್ಯಾಲಕುಂದಿ, ಅಯ್ಯನಹಳ್ಳಿ ಗ್ರಾಮಗಳಲ್ಲಿ ಪ್ರತಿಯೊಂದು ಗ್ರಾಮಕ್ಕೆ ತಲಾ ೫೦ ಲಕ್ಷ ರೂಪಾಯಿಗಳ ಮೊತ್ತದ ಸಿಸಿ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿ ಜನರಲ್ಲಿ ಸಂತಸದ ವಾತಾವರಣ ಮೂಡುವಂತೆ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿ ಪಕ್ಷಾತೀತ, ಜಾತ್ಯಾತೀತವಾಗಿ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುವುದು. ಕೆಎಂಆರ್ಸಿ, ಡಿಎಂಎಫ್, ಕೆಕೆಆರ್ಡಿಸಿ ಯೋಜನೆ ಅಡಿ ಅನುದಾನದಲ್ಲಿ ಈ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ಹಳ್ಳಿಗಳಿಗೂ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ತಲಾ ೫೦ ಲಕ್ಷ ರೂಪಾಯಿಗಳ ಮೊತ್ತದ ಕಾಮಗಾರಿಗಳನ್ನು ಈ ಯೋಜನೆಯಡಿ ನಿರ್ಮಿಸಲಾಗುವುದು. ಮರಿಯಮ್ಮನಹಳ್ಳಿ ಹೋಬಳಿಯಾದ್ಯಂತ ಗ್ರಾಮಗಳಿಗೆ ೧೪೫ ಕೋಟಿ ರೂ.ಗಳ ಸಿಸಿ ರಸ್ತೆ ನಿರ್ಮಿಸಲಾಗುವುದು ಎಂದರು.
ಡಣನಾಯಕನಕೆರೆಯ ಕೆರೆಯ ಕಾಲುವೆ ದುರಸ್ತಿಗೆ ಸುಮಾರು ೪ ಕೋಟಿ ರೂಪಾಯಿ ಅನುದಾನವನ್ನು ಮೀಸಲಿಡಲಾಗಿದೆ. ಇನ್ನೂ ಅತೀ ಶೀರ್ಘದಲ್ಲಿ ಕಾಮಾಗಾರಿಗೆ ಚಾಲನೆ ನೀಡಲಾಗುವುದು. ಅಲ್ಲದೆ ಗುಂಡಾ ಗ್ರಾಮದಿಂದ ನಾಗಲಾಪುರ ಗ್ರಾಮಕ್ಕೆ ತೆರಳುವ ರಸ್ತೆಗೆ ೨.೫೦ ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ನಿರ್ಮಿಸಲಾಗುವುದು. ಗೊಲ್ಲರಹಳ್ಳಿ ಕ್ರಾಸ್ನಿಂದ ಗರಗ ಗ್ರಾಮದವರಿಗೂ ರಸ್ತೆ ನಿರ್ಮಿಸಲಾಗುವುದು ಈ ಎಲ್ಲಾ ಕಾಮಗಾರಿಗಳಿಗೆ ಅತೀ ಶೀರ್ಘದಲ್ಲಿ ಚಾಲನೆ ನೀಡಲಾಗುವುದು ಎಂದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪರಿಮಳ ಅನಂತಸ್ವಾಮಿ, ಸದಸ್ಯ ವಾಟಾಳ ನಾಗರಾಜ, ಕೆ.ಮಂಜುನಾಥ, ವಡ್ಡಟ್ಟಿ ಪ್ರಕಾಶ್, ಮಾಜಿ ಗ್ರಾ.ಪಂ. ಅಧ್ಯಕ್ಷ ಜಾತಪ್ಪ ರೆಡ್ಡಿ. ಹನುಮಂತಪ್ಪ, ಕೋಮಾರ ಸ್ವಾಮಿ, ಡಿ.ಹುಲುಗಪ್ಪ, ನವೀನ್ ಕುಮಾರ್, ವಿರೇಶ್, ಗುಂಡಾ ಸ್ವಾಮಿ, ಕೂಳಿ ಸಾರೆಪ್ಪ ಹಾಗೂ ಗ್ರಾಮದ ಹಿರಿಯರು ಮುಖಂಡರು ಭಾಗವಹಿಸಿದ್ದರು.