
ಬಿಜೆಪಿಯವರ ಸುಳ್ಳುಗಳು ಮಾತ್ರ ಮನೆ ಮನೆ ತಲುಪುತ್ತಿವೆ : ಸಿಎಂ ಸಿದ್ದರಾಮಯ್ಯ
ಕರುನಾಡ ಬೆಳಗು ಸುದ್ದಿ
ಸಂಡೂರು, 9- ವಿಧಾನಸಭಾ ಕ್ಷೇತ್ರದ ಡಿ.ಅಂತಾಪುರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತನಾಡಿದರು.
ಮಹಾತ್ಮಗಾಂಧಿಯವರನ್ನು ಕೊಂದ ಗೋಡ್ಸೆಯಾಗಲಿ ಹಾಗೆಯೇ ಸಾವರ್ಕರ್ ಅವರಾಗಲೀ, ಗೋಳ್ವಾಲ್ಕರ್ ಅವರಾಗಲಿ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಜೈಲಿಗೆ ಹೋಗಿದ್ದಾರಾ ಎಂದು ಬಿಜೆಪಿ ಪರಿವಾರದ ಚರಿತ್ರೆಯನ್ನು ಕೆದಕಿ ನಿಷ್ಠುರ ಪ್ರಶ್ನೆಗಳನ್ನು ಕೇಳಿದರು.
ಬಿಜೆಪಿ, RSS ಪರಿವಾರದ ಯಾರೊಬ್ಬರೂ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಒಂದೇ ಒಂದು ಉದಾಹರಣೆ ಇದೆಯಾ ಎಂದು ಸಿ.ಎಂ.ಸಿದ್ದರಾಮಯ್ಯ ಪ್ರಶ್ನಿಸಿದರು.
ನಾವು ಕೊಟ್ಟ ಕಲ್ಯಾಣ ಕಾರ್ಯಕ್ರಮಗಳು ಪ್ರತಿಯೊಂದು ಮನೆ ತಲುಪಿವೆ. ಬಿಜೆಪಿ ಯವರದ್ದು ಕೇವಲ ಸುಳ್ಳುಗಳು ಮಾತ್ರ ಮನೆ ಮನೆ ತಲುಪುತ್ತಿವೆ ಎಂದು ಸಿಎಂ ವ್ಯಂಗ್ಯವಾಡಿದರು.
ನಮ್ಮ ಸರ್ಕಾರ ಇದ್ದಾಗ ಕೊಟ್ಟ ವಸತಿ ಶಾಲೆ, ಆಸ್ಪತ್ರೆ, ರಸ್ತೆ, ಸೇತುವೆ ಸೇರಿ ಹತ್ತು ಹಲವು ಭಾಗ್ಯಗಳು, ಗ್ಯಾರಂಟಿಗಳು ಪ್ರತಿಯೊಬ್ಬರ ಮನೆ ಬಾಗಿಲಿಗೆ ತಲುಪಿವೆ. ಬಿಜೆಪಿಯವರು ಜನರ ಕಲ್ಯಾಣಕ್ಕೆ ಕೊಟ್ಟ ಒಂದೇ ಒಂದು ಕಾರ್ಯಕ್ರಮ ನಿಮ್ಮ ಮನೆ ತಲುಪಿದೆಯಾ ಹೇಳಿ ಎಂದು ಸಿಎಂ ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷದ ಮನಮೋಹನ್ ಸಿಂಗ್ ಅವರು ಪ್ರಧಾನಿ ಆಗಿದ್ದಾಗ ಇಡೀ ದೇಶದ ರೈತರ ಸಾಲ ಮನ್ನಾ ಮಾಡಿದರು. ರಾಜ್ಯದಲ್ಲಿ ನಾನು ಮುಖ್ಯಮಂತ್ರಿ ಆಗಿದ್ದಾಗ ರಾಜ್ಯದ ನಮ್ಮ ರೈತರ
೮೧೬೫ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದ್ದು ನನ್ನ ಸರ್ಕಾರ. ಯಡಿಯೂರಪ್ಪ ಅವರಿಗೂ ಸಾಲ ಮನ್ನಾ ಮಾಡಿ ಅಂದರೆ, ನನ್ನ ಬಳಿ ನೋಟು ಪ್ರಿಂಟ್ ಹಾಕುವ ಮೆಷಿನ್ ಇಲ್ಲ ಎಂದು ಉತ್ತರಿಸಿದ್ದರು. ಇದೇ ಬಿಜೆಪಿಗೂ ಕಾಂಗ್ರೆಸ್ಸಿಗೂ ಇರುವ ವ್ಯತ್ಯಾಸ ಎಂದರು.
ಮೊದಲ ಬಾರಿ ಮುಖ್ಯಮಂತ್ರಿಯಾಗಿ ಹಲವಾರು ಭಾಗ್ಯಗಳನ್ನು ಯಶಸ್ವಿಯಾಗಿ ಕೊಟ್ಟ ರೀತಿಯಲ್ಲೇ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ವರ್ಷಕ್ಕೆ ೫೬ ಸಾವಿರ ಕೋಟಿ ವೆಚ್ಚದಲ್ಲಿ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ ಎಂದರು.
ಗಣಿ ಲೂಟಿ ಮಾಡಿದ ಜನಾರ್ದನ ರೆಡ್ಡಿಯವರು, ಗಣಿ ಉದ್ಯಮಿಗಳಿಂದ ಹಫ್ತಾ ವಸೂಲಿ ಮಾಡಿದವರು ಓಟು ಕೊಡಿ ಅಂತ ಕೇಳೋಕೆ ನಿಮ್ಮ ಬಳಿಗೆ ಬರ್ತಾರೆ. ನಾನಾ ರೀತಿ ಸುಳ್ಳುಗಳನ್ನು ಹೇಳಿ ಮತ ಕೇಳ್ತಾರೆ. ಅವರಿಂದ ಸಂಡೂರಿನ ಅಭಿವೃದ್ಧಿ ಈ ಹಿಂದೆಯೂ ಆಗಿಲ್ಲ, ಮುಂದೆಯೂ ಆಗಲ್ಲ ಈ.ತುಕಾರಾಮ್ ಸಂಸದರಾಗಿದ್ದಾರೆ. ಇವರ ಪತ್ನಿ ಅನ್ನಪೂರ್ಣಮ್ಮ ಸಂಡೂರಿನ ಶಾಸಕಿ ಆಗ್ತಾರೆ. ಇಬ್ಬರೂ ಸೇರಿ ಸಂಡೂರನ್ನು ಹೆಚ್ಚೆಚ್ಚು ಅಭಿವೃದ್ಧಿ ಮಾಡ್ತಾರೆ. ಇಲ್ಲಿ ಅನ್ನಪೂರ್ಣಮ್ಮ ಗೆದ್ದರೆ ನಾನೇ ಗೆದ್ದ ಹಾಗೆ. ಸಂತೋಷ್ ಲಾಡ್ ಗೆದ್ದ ಹಾಗೆ.
ಸಂತೋಷ್ ಲಾಡ್ ಅವರ ಪ್ರಶ್ನೆ : ರಾಮುಲು, ಜನಾರ್ದನರೆಡ್ಡಿ, ಕರುಣಾಕರರೆಡ್ಡಿ ಶಾಸಕರು-ಸಚಿವರಾಗಿದ್ರು. ಶಾಂತಕ್ಕ, ದೇವೇಂದ್ರಪ್ಪ ಸಂಸದರಾಗಿದ್ದರು. ಇವರೆಲ್ಲಾ ಸೇರಿ ಬಳ್ಳಾರಿಗೆ ಏನು ಕೊಟ್ರು ಅನ್ನೋದನ್ನು ಹುಡುಕಿ ಹೇಳಿ. ಏನೇನೂ ಕೊಟ್ಟಿಲ್ಲ.