
ಬಿಡಾಡಿ ದನದ ಹಾವಳಿಯಿಂದ ರಸ್ತೆ ಅಪಘಾತ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 12- ನಗರದಲ್ಲಿ ಬಿಡಾಡಿ ದನಗಳ ಹಾವಳಿಯಿಂದ ವಾಹನಗಳ ಚಾಲಕರಿಗೆ ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ ಎಂದು ಸಿಪಿಐಎಂಎಲ್ ಪಕ್ಷದ ಕೊಪ್ಪಳ ಜಿಲ್ಲಾ ಕಾರ್ಯದರ್ಶಿ ವಿಜಯ್ ದೊರೆರಾಜು ತಿಳಿಸಿದರು.
ಸೆಪ್ಟೆಂಬರ್-೧೧ ರಂದು ಮದ್ಯಾಹ್ನ ೧ ಗಂಟೆಯ ಸುಮಾರಿನಲ್ಲಿ ಹಿರಿಯ ಹೋರಾಟಗಾರರಾದ ಭಾರದ್ವಾಜ್ರವರು ಗಂಗಾವತಿಯಿಂದ ಕೊಪ್ಪಳ ರಸ್ತೆಯಲ್ಲಿರುವ ಸೂರಿ ಬಾಬು ಲೇಔಟ್ನಲ್ಲಿರುವ ತಮ್ಮ ಮನೆಗೆ ಟಿವಿಎಸ್ ಸ್ಕೂಟಿ ವಾಹನದಲ್ಲಿ ಹೊಗುತ್ತಿರುವ ಸಮಯದಲ್ಲಿ ಪಾಡಗುತ್ತಿ ಗಾರ್ಡನ್ ಪಕ್ಕದಲ್ಲಿ ಇರುವ ವಿಶಾಲ ಮಾರ್ಟ್ ಎದುರಿಗೆ ಒಂದು ಎತ್ತು ಓಡಿ ಬಂದು ಗುದ್ದಿದ ಪರಿಣಾಮ ಭಾರದ್ವಾಜ್ರವರು ನೆಲಕ್ಕೆ ಬಿದ್ದಿರುವ ಘಟನೆ ನಡೆದಿದೆ.
ಅವರ ಕೈ-ಕಾಲು, ಹಣೆಗೆ ಪೆಟ್ಟಾಗಿದೆ, ಕಾಲಿನ ಮೂಳೆಗೆ ಪೆಟ್ಟಾಗಿದೆ. ಬೀಡಾಡಿ ದನಕರುಗಳು, ಆಕಳು ದಿನ ನಿತ್ಯ ರಸ್ತೆಯಲ್ಲಿ ಓಡಾಡುತ್ತಾ ವಾಹನ ಸವಾರರಿಗೆ, ವಯೋವೃದ್ಧರಿಗೆ ತೊಂದರೆಯುಂಟು ಮಾಡುತ್ತಿದ್ದರೂ ನಗರಸಭೆ ಅಧಿಕಾರಿಗಳು ಕಣ್ಣು ಮುಚ್ಚಿಕೊಂಡು ಕುಳಿತಿದ್ದಾರೆ. ಗಂಗಾವತಿಯ ಪ್ರಮುಖ ರಸ್ತೆ, ಬೀದಿ ಬೀದಿಗಳಲ್ಲಿ ಓಡಾಡುತ್ತಿರುವ ದನಕರುಗಳನ್ನು ಸಂಬಂಧಪಟ್ಟವರಿಗೆ ಒಪ್ಪಿಸಬೇಕು, ಇಲ್ಲವೇ ಗೋಶಾಲೆಗಳಿಗೆ ಸಾಗಿಸುವ ಕೆಲಸ ಮಾಡಬೇಕು. ಇಲ್ಲವಾದಲ್ಲಿ ಪಕ್ಷದಿಂದ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದರು.