
ಶ್ರೀ ಕೃಷ್ಣನ ಸಂದೇಶಗಳು ಸದಾಕಾಲ ಮನುಷ್ಯ, ಜೀವಪರವಾಗಿವೆ : ಮಹೇಶ್ ಬಳ್ಳಾರಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 26- ಶ್ರೀಕೃಷ್ಣನ ಸಂದೇಶಗಳು ಸದಾಕಾಲ ಮನುಷ್ಯಪರ ಮತ್ತು ಜೀವಪರವಾಗಿವೆ ಎಂದು ಕೊಪ್ಪಳದ ಶಿಕ್ಷಕರಾದ ಮಹೇಶ್ ಬಳ್ಳಾರಿ ಅವರು ಹೇಳಿದರು.
ಕೊಪ್ಪಳ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಸಿರಸಪ್ಪಯ್ಯನ ಮಠದ ಓಣಿಯಲ್ಲಿರುವ ಶ್ರೀ ಕೃಷ್ಣ ದೇವಸ್ಥಾನದ ಯಾದವ ಸಾಂಸ್ಕೃತಿಕ ಕಲಾ ಸಂಘದ ಆವರಣದಲ್ಲಿ ಆಗಸ್ಟ್ ೨೬ರಂದು ಹಮ್ಮಿಕೊಂಡಿದ್ದ ಶ್ರೀ ಕೃಷ್ಣ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ, ಅವರು ಮಾತನಾಡಿದರು.
ಶ್ರೀಕೃಷ್ಣ ಏಕಮುಖದ ವ್ಯಕ್ತಿಯಲ್ಲ. ಹಲವು ಕರ್ತೃತ್ವ ಶಕ್ತಿಗಳ ಮಹಾ ಸಾಧಕರು. ಅವರು ಓರ್ವ ದಾರ್ಶನಿಕ, ಸಾಮಾಜ ಸುಧಾರಕ, ಚಿಂತಕ, ನಿರ್ವಾಹಕ, ಜ್ಞಾನಿ, ಸುಜ್ಞಾನಿ, ವಿಜ್ಞಾನಿ, ತಂತ್ರಜ್ಞಾನಿಯ ಜೊತೆಗೆ ಬಹುದೊಡ್ಡ ರಾಜತಾಂತ್ರಿಕರಾಗಿದ್ದರು. ಅಲ್ಲದೇ ಶ್ರೀಕೃಷ್ಣರು ಸಂಗೀತದ ಬಹುದೊಡ್ಡ ಪ್ರೇಮಿಯಾಗಿದ್ದರು. ಜೀವನದ ಮೌಲ್ಯಗಳು, ಸಾಮಾಜ ಸುಧಾರಣೆ, ವಿಜ್ಞಾನದ ಸಂಗತಿಗಳು, ಆಧ್ಯಾತ್ಮ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಶ್ರೀಕೃಷ್ಣ ನೀಡಿರುವ ಸಂದೇಶಗಳು ಸರ್ವಕಾಲಕ್ಕು ಅತ್ಯವಶ್ಯಕವಾಗಿವೆ. ಜೀವನದಲ್ಲಿ ಕಷ್ಟ ಮತ್ತು ಸುಖಃಗಳನ್ನು ಸಮನಾಗಿ ಸ್ವೀಕರಿಸಬೇಕು. ಪ್ರತಿಯೊಬ್ಬರಲ್ಲಿಯೂ ಆತ್ಮಗೌರವನ್ನು ಹೊಂದಬೇಕು. ಪ್ರತಿ ಜೀವಿಯಲ್ಲಿಯೂ ದೇವರು ನೆಲೆಸಿರುತ್ತಾನೆ ಮತ್ತು ಪ್ರತಿಯೊಬ್ಬರನ್ನು ನಾವು ಗೌರವದಿಂದ ಕಾಣಬೇಕು. ಸೇವಾಮನೋಭಾವನೆಯನ್ನು ರೂಡಿಸಿಕೊಳ್ಳಬೇಕೆಂಬುವುದೇ ಶ್ರೀಕೃಷ್ಣರ ಪ್ರಮುಖ ಸಂದೇಶಗಳಾಗಿವೆ ಎಂದರು.
ಮೊದಲ ಗೋಪಾಲಕರಾಗಿದ್ದ ಶ್ರೀಕೃಷ್ಣನ ತಂದೆ ವಸುದೇವ ತಾಯಿ ದೇವಕಿ, ಗೋಕುಲದಲ್ಲಿ ಬೆಳೆದ ಶ್ರೀ ಕೃಷ್ಣ ಇಡೀ ಜಗತ್ತಿಗೆ ಆದರ್ಶಪ್ರಾಯವಾಗಿದ್ದಾರೆ. ಅವರ ಸಂದೇಶ ಎಲ್ಲರ ಬದುಕಿಗೂ ಅನ್ವಯಿಸುವ ಚಿಂತನೆಗಳಾಗಿವೆ. ಪ್ರತಿಯೊಬ್ಬರ ಜೀವನ ಆದರ್ಶಮಯವಾಗಿರಬೇಕು, ಜೀವನದಲ್ಲಿ ವ್ಯಕ್ತಿ ಹೇಗೆ ಬದುಕು ರೂಪಿಸಿಕೊಳ್ಳಬೇಕು ಎಂದು ಶ್ರೀ ಕೃಷ್ಣ ಉಪದೇಶಿಸಿದ್ದಾರೆ ಎಂದರು.
ರಾಧಾ-ಕೃಷ್ಣ ವೇಷದಲ್ಲಿ ಗಮನ ಸೆಳೆದ ಮಕ್ಕಳು : ಶ್ರೀ ಕೃಷ್ಣ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ರಾಧಾ-ಕೃಷ್ಣ ವೇಷದಲ್ಲಿ ಪಾಲ್ಗೊಂಡಿದ್ದ ಮಕ್ಕಳು ಎಲ್ಲರ ಗಮನ ಸೆಳೆದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಎಲ್ಲಾ ಗಣ್ಯರು ನೆರವೇರಿಸಿದರು. ಸಮಾಜದ ಮುಖಂಡರಾದ ರಮೇಶ್ ನಾಗೇಶನಹಳ್ಳಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಕೊಟ್ರೇಶ್ ಮರಬನಳ್ಳಿ, ಸಮಾಜದ ಮುಖಂಡರಾದ ಜಗನ್ನಾಥ ಹುಲಿಗಿ, ಪ್ರಾಣೇಶ್ ಪೂಜಾರ, ಹುಲಗಪ್ಪ ವಾಲಿಕಾರ, ಸಂಗಪ್ಪ ಬಾಗಲಿ, ಭೀಮಣ್ಣ ಲೇಬಗೇರಿ, ವೆಂಕಟೇಶ್ ಕಟ್ಟಿಮನಿ, ರಮೇಶ್ ನಾಗೇಶನಹಳ್ಳಿ, ಕಾಮಾಕ್ಷಿ ವಾಲಿಕಾರ, ಹುಲಿಗಮ್ಮ ವಾಲಿಕಾರ ಸೇರಿದಂತೆ ಮತ್ತಿತರರಿದ್ದರು.
ಸಾಹಿತಿಗಳಾದ ಸಾವಿತ್ರಿ ಮುಜುಮದಾರ ಅವರು ಕಾರ್ಯಕ್ರಮ ನಿರೂಪಿಸಿದರು. ಸಮಗೀತ ಶಿಕ್ಷಕರಾದ ಸದಾಶಿವ ಪಾಟೀಲ್ ಹಾಗೂ ತಂಡದವರು ನಾಡಗೀತೆಯನ್ನು ಪ್ರಸ್ತುತ ಪಡಿಸಿದರು.
ವೇದಿಕೆ ಕಾರ್ಯಕ್ರಮದ ಬಳಿಕ ಶ್ರೀಕೃಷ್ಣ ಭಾವಚಿತ್ರದ ಮೆರವಣಿಗೆಯು ನಗರದ ಸಿರಸಪ್ಪಯ್ಯನ ಮಠದ ಓಣಿಯಿಂದ ಗಡಿಯಾರ ಕಂಬದವರೆಗೆ ಅದ್ದೂರಿಯಾಗಿ ಜರುಗಿತು. ಮೆರವಣಿಗೆಯಲ್ಲಿ ಯುವಕರು, ಮಹಿಳೆಯರು, ಮಕ್ಕಳು ಉತ್ಸಾಹದಿಂದ ಪಾಲ್ಗೊಂಡಿದ್ದರು.