
ಪ್ರಾಥಮಿಕ ಶಾಲಾ ಶಿಕ್ಷಕರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಹೋರಾಟ
ಕರುನಾಡ ಬೆಳಗು ಸುದ್ದಿ
ಕನಕಗಿರಿ, 5- 2017ರ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳನ್ನು 2016ಕ್ಕಿಂತ ಮುಂಚೆ ನೇಮಕಾತಿಗೊಂಡವರಿಗೆ ಪೂರ್ವಾನ್ವಯಗೊಳಿಸಿದರೆ ಪ್ರಾಥಮಿಕ ಶಾಲಾ ಸೇವಾ ನಿರತ ಶಿಕ್ಷಕರಿಗೆ ಅನ್ಯಾಯವಾಗಲಿದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷೆ ಶಂಶಾದಬೇಗಂ ತಿಳಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇಲ್ಲಿನ ತಹಶೀಲ್ದಾರ್ ವಿಶ್ವನಾಥ ಮುರುಡಿ ಅವರಿಗೆ ಸೋಮವಾರ ಮನವಿ ಸಲ್ಲಿಸಿ ಅವರು ಮಾತನಾಡಿದರು.
2016ರ ಪೂರ್ವದಂತೆ ಅರ್ಹತೆ ಆಧಾರದ ಮೇಲೆ ಅರ್ಹ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪ್ರೌಢಶಾಲೆಯ ಶಿಕ್ಷಕ ಹುದ್ದೆಗೆ ಬಡ್ತಿ ನೀಡಬೇಕು ಅದೇ ರೀತಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ 2016ರ ಪೂರ್ವದಂತೆ ಮುಖ್ಯಶಿಕ್ಷಕರು ಹಾಗೂ ಹಿರಿಯ ಮುಖ್ಯ ಶಿಕ್ಷಕರ ಹುದ್ದೆಗೆ ಸೇವಾ ಜೇಷ್ಠತೆ ಆಧಾರದ ಮೇಲೆ ಬಡ್ತಿ ನೀಡಬೇಕೆಂದು ಆಗ್ರಹಿಸಿದರು.
ಈ ಬೇಡಿಕೆಗಳು ನ್ಯಾಯೋಚಿತವಾಗಿದ್ದು ಬಹು ವರ್ಷಗಳಿಂದ ಹಾಗೆ ಉಳಿದುಕೊಂಡಿವೆ ಸರ್ಕಾರ ಈ ಬೇಡಿಕೆಗಳನ್ನು ಈಡೇರಿಸಬೇಕೆಂದು ಅವರು ಒತ್ತಾಯಿಸಿದರು.
ಬೇಡಿಕೆ ಈಡೇರಿಕೆಗೆ ಸರ್ಕಾರ ಸ್ಪಂದಿಸದಿದ್ದರೆ ಆಗಸ್ಟ್ 12ರಂದು ಬೃಹತ್ ಹೋರಾಟವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ ಎಂದರು.
ಶಿಕ್ಷಕರ ಸಂಘದ ಗೌರವಾಧ್ಯಕ್ಷ ಶೇಖರಯ್ಯ ಕಲ್ಮಠ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಶಿರಿಗೇರಿ, ನೌಕರರ ಸಂಘದ ಅಧ್ಯಕ್ಷ ಮಧೂಸೂದನ್, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಜ್ಯೋತಿ ಭತ್ತದ, ಪ್ರಶಾಂತ ಬಂಕಾಪುರ, ಪವಿತ್ರ ಮಂಜುನಾಥ, ಜಗದೀಶ ಟಿ.ಎಸ್, ತಿಪ್ಪೇಶ್, ಮಂಜುನಾಥ ಹಾಸಗಲ್, ಉಮೇಶ ಕಂದಕೂರು, ಶಿಕ್ಷಕರಾದ ವಿಮಲಾಬಾಯಿ ಜೋಷಿ, ಸುನೀತಾ ಪತ್ತಾರ, ರವಿ ಸಜ್ಜನ್, ದಾವಲಸಾಬ, ಶ್ರೀನಿವಾಸ ಹುನಗುಂದ, ಗೌಸುಪಾಷ, ಗೀತಾ ಹಂಚಾಟೆ, ಶ್ರೀನಿವಾಸ ಕೊಳ್ಳೆಗಾಲ, ಮಂಜುಳಾ, ಗೀತಾರೆಡ್ಡಿ, ಪೂರ್ಣಿಮಾ, ರಾಜಾಹುಸೇನ, ಎಚ್ಚರಪ್ಪ ಗೌರಿಪುರ, ಹರಳಯ್ಯ ಇತರರು ಇದ್ದರು.