
ಗ್ರಾ.ಪಂ. ತೆರವಾದ ಸ್ಥಾನಗಳಿಗೆ ಉಪ ಚುನಾವಣಾ ವೇಳಾಪಟ್ಟಿ ಪ್ರಕಟ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 23- ಜಿಲ್ಲೆಯ ವಿವಿಧ ತಾಲ್ಲೂಕುಗಳ ಗ್ರಾಮ ಪಂಚಾಯಿತಿಯಲ್ಲಿ ವಿವಿಧ ಕಾರಣಗಳಿಂದ ತೆರವಾದ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು ಚುನಾವಣಾ ವೇಳಾಪಟ್ಟಿ ಪ್ರಕಟಿಸಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಆದೇಶಿಸಿದ್ದಾರೆ.
ನಾಮಪತ್ರಗಳನ್ನು ಸಲ್ಲಿಸಲು ನ.೧೨ ರಂದು ಕೊನೆಯ ದಿನವಾಗಿರುತ್ತದೆ. ನ.೧೩ ರಂದು ನಾಮ ಪತ್ರಗಳನ್ನು ಪರಿಶೀಲಿಸುವ ದಿನವಾಗಿರುತ್ತದೆ. ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ನ.೧೫ ಕೊನೆಯ ದಿನವಾಗಿರುತ್ತದೆ. ಮತದಾನವು ನ.೨೩ ರಂದು ನಡೆಯಲಿದೆ.
ಮಾದರಿ ನೀತಿ ಸಂಹಿತೆಯು ನ.೦೬ ರಿಂದ ನ.೨೬ ರ ವರೆಗೆ ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿ ವ್ಯಾಪ್ತಿ ಪ್ರದೇಶಕ್ಕೆ ಮಾತ್ರ ಜಾರಿ ಇರುತ್ತದೆ. ಚುನಾವಣೆಯನ್ನು ಶಾಂತಿಯುತವಾಗಿ ಹಾಗೂ ಮುಕ್ತವಾಗಿ ನಡೆಸುವ ಹಿನ್ನಲೆಯಲ್ಲಿ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಆಯಾ ತಾಲ್ಲೂಕು ತಹಶೀಲ್ದಾರರ ಉಸ್ತುವಾರಿಯಲ್ಲಿ ತಾಲ್ಲೂಕು ಮಟ್ಟದ ಎಂಸಿಸಿ ತಂಡಗಳನ್ನು ರಚಿಸಿ ಜಿಲ್ಲಾಧಿಕಾರಿಯವರು ಆದೇಶಿಸಿದ್ದಾರೆ.
ಖಾಲಿ ಇರುವ ಗ್ರಾಪಂ ವಿವರ ಮತ್ತು ಸ್ಥಾನ : ಬಳ್ಳಾರಿ ತಾಲ್ಲೂಕಿನ ಕಪ್ಪಗಲ್ಲು-೧, ರ್ರಗುಡಿ-೧, ಬಿ.ಬೆಳಗಲ್ಲು-೧, ಕುರುಗೋಡು ತಾಲ್ಲೂಕಿನ ಕಲ್ಲುಕಂಭ-೨, ದಮ್ಮೂರು-೧, ಸಿರುಗುಪ್ಪ ತಾಲ್ಲೂಕಿನ ಬಿ.ಎಂ.ಸೂಗೂರು-೨, ತಾಳೂರು-೧, ಕೆಂಚನಗುಡ್ಡ-೧, ಕೆ.ಸೂಗೂರು-೧, ಕಂಪ್ಲಿ ತಾಲ್ಲೂಕಿನ ಸಣಾಪುರ-೧, ಎಮ್ಮಿಗನೂರು-೧, ದೇವಲಾಪುರ-೧, ಮೆಟ್ರಿ-೧ ಸೇರಿ ಒಟ್ಟು ೧೫ ಗ್ರಾಮಪಂಚಾಯತಿಗಳಿಗೆ ಉಪ ಚುನಾವಣೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಅವರು ತಿಳಿಸಿದ್ದಾರೆ.