5

ಆರೈಕೆದಾರರ ಪಾತ್ರ ಮಹತ್ವದ್ದಾಗಿದೆ : ಡಾ.ಜಗದೀಶ್

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 29- ಮಗುವಿನ ಹುಟ್ಟಿನಿಂದ ಹಿಡಿದು ಜೀವನದ ಪ್ರತಿಯೊಂದು ಹಂತದಲ್ಲಿಯು ಆರೈಕೆದಾರರ ಪಾತ್ರ ಮಹತ್ವದ್ದಾಗಿದೆ ಎಂದು ವಿಶೇಷ ಚೇತನರ ಆರೈಕೆದಾರರು ಹಾಗೂ ವೈದ್ಯ ಡಾ.ಜಗದೀಶ್ ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲಿಕರಣ ಇಲಾಖೆ, ಜಿಲ್ಲಾ ಪುನರ್ವಸತಿ ಕೇಂದ್ರ ಹಾಗೂ ವಿಕಲಚೇತನರಿಗಾಗಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಗರದ ಬೆಳಗಲ್ ಕ್ರಾಸ್‌ನ ವಿಶ್ವಭಾರತಿ ಕಲಾ ನಿಕೇತನ ಮತ್ತು ಶಿಕ್ಷಣ ಸಂಸ್ಥೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಶ್ವ ಆರೈಕೆದಾರರ ದಿನಾಚರಣೆ-೨೦೨೪ ರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ತಾಲ್ಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಆರೈಕೆದಾರರ ಪಾತ್ರದ ಬಗ್ಗೆ, ಅರಿವು ಮೂಡಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸರ್ಕಾರದ ಯೋಜನೆಗಳನ್ನು ಆರೈಕೆದಾರರಿಗೆ ತಲುಪುವಂತಹ ಕೆಲಸವಾಗಬೇಕು. ಜೊತೆಗೆ ಅವರಿಗೆ ಪ್ರೋತ್ಸಾಹ ನೀಡಬೇಕಾಗಿದೆ ಎಂದು ತಿಳಿಸಿದರು.

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಗೋವಿಂದಪ್ಪ.ಹೆಚ್.ಎಂ ಅವರು ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಆರೈಕೆದಾರರ ಪಾತ್ರವು ನಮ್ಮ ಜೀವನದ ಪ್ರತಿಯೊಂದು ಹಂತದಲ್ಲಿ ಬಹಳ ಪ್ರಮುಖವಾಗಿದ್ದು, ಅವರಿಂದ ಮಾತ್ರ ವಿಕಲಚೇತನರ ಪುನರ್ವಸತಿ ಹಾಗೂ ಹಿರಿಯ ನಾಗರಿಕರ ಪುನರ್ವಸತಿ ಸಾಧ್ಯ ಎಂದರು.

ನಮ್ಮ ಆರೈಕೆದಾರರನ್ನು ಗೌರವಿಸುವುದರ ಜೊತೆಗೆ ಮುಪ್ಪಿನ ಕಾಲದಲ್ಲಿ ಅಸಹಾಯಕರಾಗಿರುವ ಹಿರಿಯರನ್ನು ಆರೈಕೆ ಮಾಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಶೇಷ ಚೇತನ ಮಕ್ಕಳ ಅಭಿವೃದ್ದಿಗಾಗಿ ಶ್ರಮಿಸಿ ಪಾಲನೆ-ಪೋಷಣೆ ಮಾಡಿದ ಡಾ.ಜಗದೀಶ್, ಶೇಕಂಬಿ, ವಿ.ಲಕ್ಷ್ಮೀದೇವಿ, ರಾಮಲಲಕ್ಷ್ಮೀ ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪುನರ್ವಸತಿ ಕೇಂದ್ರದ ನೋಡಲ್ ಅಧಿಕಾರಿ ನಾಗೇಂದ್ರ, ಚೆಂಗಾರೆಡ್ಡಿ ಬುದ್ದಿಮಾಂದ್ಯ ಮಕ್ಕಳ ಸಂಸ್ಥೆಯ ಮುಖೋಪಾದ್ಯಯರಾದ ಚಂದ್ರಶೇಖರ್, ಸೈಲ್ ಸಂಸ್ಥೆಯ ಮುಖ್ಯಸ್ಥ ಉಮಾಪತಿಗೌಡ, ಡಾ.ಭೀಮಾವಿದ್ಯಾ ಸಂಸ್ಥೆಯ ಮುಖ್ಯಸ್ಥ ಹೆಚ್.ಎಂ.ಮಹೇಶ್‌ಕುಮಾರ್, ವಿಶ್ವ ಭಾರತಿ ಕಲಾನಿಕೇತನ ಸಂಸ್ಥೆಯ ಮುಖ್ಯಸ್ಥ ಹೆಚ್.ಗುರುಮೂರ್ತಿ, ವಿಶೇಷ ಶಿಕ್ಷಕರಾದ ಸೋಮನಾಥ ಹಿರೇಮಠ ಸೇರಿದಂತೆ ಜಿಲ್ಲೆಯ ಎಂಆರ್‌ಡಬ್ಲ್ಯೂ, ವಿಆರ್‌ಡಬ್ಲ್ಯೂ, ಯುಆರ್‌ಡಬ್ಲ್ಯೂ ಹಾಗೂ ಇಲಾಖೆಯ ಸಿಬ್ಬಂದಿಗಳು, ವಿಶೇಷ ಚೇತನ ಮಕ್ಕಳ ಆರೈಕೆದಾರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!