WhatsApp Image 2024-03-18 at 4.53.44 PM

ಹೊಸಪೇಟೆ ಎಪಿಎಂಸಿ ಪ್ರಾಂಗಣದಲ್ಲಿ ರಾಗಿ, ಜೋಳ ಖರೀದಿ ಪ್ರಕ್ರಿಯೆ ಆರಂಭ ಜಿಲ್ಲಾಧಿಕಾರಿ ಪರಿಶೀಲನೆ

ಕರುನಾಡ ಬೆಳಗು ಸುದ್ದಿ

ವಿಜಯನಗರ,18- ಹೊಸಪೇಟೆ ಎಪಿಎಂಸಿ ಪ್ರಾಂಗಣದಲ್ಲಿ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಮುಂಗಾರು ಹಂಗಾಮಿನ ರಾಗಿ ಮತ್ತು ಜೋಳದ ಖರೀದಿ ಪ್ರಕ್ರಿಯೆ ಮಾರ್ಚ 18ರಂದು ಪ್ರಾರಂಭವಾಯಿತು.

ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ ಎಪಿಎಂಸಿ ಪ್ರಾಂಗಣಕ್ಕೆ ಭೇಟಿ ನೀಡಿ, ಸರ್ಕಾರದ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ಮೂಲಕ ರೈತರಿಂದ ರಾಗಿ ಮತ್ತು ಜೋಳ ಖರೀದಿಸುವ ಪ್ರಕ್ರಿಯೆ ಬಗ್ಗೆ ಮಾಹಿತಿ ಪಡೆದರು.

ಪ್ರಸ್ತುತ ಈ ಖರೀದಿ ಕೇಂದ್ರದಲ್ಲಿ 59 ರೈತರು 1132.50 ಕ್ವಿಂಟಾಲ್ ರಾಗಿಯನ್ನು, 23 ರೈತರು 910 ಕ್ವಿಂಟಾಲ್ ಬಿಳಿಜೋಳವನ್ನು ನೋಂದಾಯಿಸಿದ್ದಾರೆ. ಸರ್ಕಾರವು ಈ ಬಾರಿ ಎಫ್.ಎ.ಕ್ಯೂ. ಗುಣಮಟ್ಟದ ಪ್ರತಿ ಕ್ವಿಂಟಾಲ್ ರಾಗಿಗೆ 3,846 ರೂ. ಮತ್ತು ಎಫ್.ಎ.ಕ್ಯೂ. ಗುಣಮಟ್ಟದ ಜೋಳಕ್ಕೆ 3180 ರೂ.ಗಳನ್ನು ಘೋಷಿಸಿರುತ್ತದೆ ಎಂದು ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ 2022-23ನೇ ಸಾಲಿನಲ್ಲಿ ಹೊಸಪೇಟೆ ಖರೀದಿ ಕೇಂದ್ರವು ಆರಂಭವಾಗಿದೆ. 2022-23ನೇ ಸಾಲಿನ ಮುಂಗಾರು ಋತುವಿನಲ್ಲಿ ಬೆಳೆದ ಭತ್ತ, ರಾಗಿ ಮತ್ತು ಜೋಳ ಉತ್ಪನ್ನಗಳನ್ನು ಖರೀದಿಸಲು ವಿಜಯನಗರ ಜಿಲ್ಲೆಗೆ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯು ಖರೀದಿ ಎಜೆನ್ಸಿಯಾಗಿರುತ್ತದೆ. ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯು ವಿಜಯನಗರ ಜಿಲ್ಲೆಯ ಹೊಸಪೇಟೆ ಎಪಿಎಂಸಿ ಪ್ರಾಂಗಣದಲ್ಲಿ ಡಿಸೆಂಬರ್ 1 ರಿಂದ ನೋಂದಣಿ ಕೇಂದ್ರವನ್ನು ತೆರೆದಿರುತ್ತದೆ ಎಂದು ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.

ಖರೀದಿ ಮಾಡಿದ ಉತ್ಪನ್ನವನ್ನು ಸರ್ಕಾರವು ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ವಿತರಿಸುವ ಉದ್ದೇಶವಿರುವುದರಿಂದ ರಾಗಿ ಮತ್ತು ಜೋಳವನ್ನು ಬೆಳೆದ ರೈತರು ತಾವು ಬೆಳೆದ ಉತ್ಪನ್ನವನ್ನು ಚೆನ್ನಾಗಿ ಒಣಗಿಸಿ, ಯಾವುದೇ ಕಸ, ಕಡ್ಡಿ, ಧೂಳು, ಮಣ್ಣಿರದಂತೆ ಸ್ವಚ್ಚಗೊಳಿಸಿ ಖರೀದಿ ಕೇಂದ್ರಗಳಿಗೆ ತರಲು ರೈತರಲ್ಲಿ ಮನವಿ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದರು.

ಈ ಸಂದರ್ಭದಲ್ಲಿ ಆಹಾರ ಇಲಾಖೆಯ ಉಪ ನಿರ್ದೇಶಕರಾದ ಮಲ್ಲಿಕಾರ್ಜುನ, ಕೃಷಿ ಮಾರಾಟ ಮಂಡಳಿಯ ಸಿದ್ದು ಸ್ವಾಮಿ, ಖರೀದಿ ಏಜೆನ್ಸಿದಾರರು, ಜಿಲ್ಲಾ ವ್ಯವಸ್ಥಾಪಕರು ಈ ಸಂದರ್ಭದಲ್ಲಿ ಇದ್ದರು.

Leave a Reply

Your email address will not be published. Required fields are marked *

error: Content is protected !!