
ವಿದ್ಯಾರ್ಥಿವೇತನವು ಸರ್ಕಾರ ನೀಡುವ ಭಿಕ್ಷೆ ಅಲ್ಲ
ಎಐಡಿಎಸ್ಓ ರಾಜ್ಯ ಉಪಾಧ್ಯಕ್ಷ ಅಭಯ ದಿವಾಕರ್
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, ೨೧- ಇಂದು ಎಐಡಿಎಸ್ಓ ಬಳ್ಳಾರಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಗರದ ಗಾಂಧಿಭವನದಿಂದ ರಾಯಲ್ ಸರ್ಕಲ್, ಮೀನಾಕ್ಷಿ ವೃತ್ತ ಹಾಗೂ ಸಿಟಿ ಬಸ್ ನಿಲ್ದಾಣ ಮೂಲಕ ಡಿ.ಸಿ ಕಛೇರಿ ವರೆಗೂ ಎಲ್ಲಾ ವಿದ್ಯಾರ್ಥಿಗಳಿಗೂ ವಿದ್ಯಾರ್ಥಿವೇತನ ಖಾತ್ರಿಪಡಿಸಲು ಆಗ್ರಹಸಿ ಪ್ರತಿಭಟನಾ ಮೆರವಣಿಗೆ ಜರುಗಿತು.
ನಂತರ ಪ್ರತಿಭಟನೆ ನಡೆಸಿ ಮಾನ್ಯ ಜಿಲ್ಲಾಧಿಕಾರಿಗಳ ಪರವಾಗಿ ತಹಶೀಲ್ದಾರ್ ಗುರುರಾಜ್ ಅವರು ಮನವಿ ಸ್ವೀಕರಿಸುವುದರ ಮೂಲಕ ಮಾನ್ಯ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯ ಉಪಾಧ್ಯಕ್ಷರು ಅಭಯ್ ದಿವಾಕರ್ ಅವರು ಮಾತನಾಡಿ…. ಸರ್ಕಾರ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿವೇತನ ಬಿಕ್ಷೆ ಅಲ್ಲ, ಅದು ವಿದ್ಯಾರ್ಥಿಗಳ ಹಕ್ಕು. ಯಾಕೆಂದರೆ ಜನಸಾಮಾನ್ಯರಿಂದ ಸಂಗ್ರಹವಾಗಿರುವ ತೆರಿಗೆ ದುಡ್ಡನ್ನು ಶಿಕ್ಷಣಕ್ಕೆ ಆದ್ಯತೆ ನೀಡಿ ಸರ್ಕಾರವು ವಿನಿಯೋಗಿಸಬೇಕು. ಸೆಸ್ ಹೆಸರಲ್ಲಿ ಸಂಗ್ರಹವಾಗುತ್ತಿರುವ ಹಣವು
ಕಾರ್ಮಿಕ ನಿಧಿಯಲ್ಲಿ ಹೇರಳವಾಗಿ ಶೇಖರಣೆಯಾಗುತ್ತಿದೆ. ಇದು ಕಾರ್ಮಿಕರ ಬೆವರಿನ ಫಲ. ಮತ್ತು ಇದನ್ನು ಸಂಪೂರ್ಣವಾಗಿ ಅವರ ಏಳಿಗೆಗೆ ಬಳಸಬೇಕು. ಘನ ಸರ್ಕಾರವು ಈ ಕುರಿತು ಗಮನ ಹರಿಸಿ ಕೂಡಲೇ ವಿದ್ಯಾರ್ಥಿ ವೇತನಗಳನ್ನು ಮಂಜೂರು ಮಾಡಬೇಕು ಮತ್ತು ಕಡಿತಗೊಳಿಸಿರುವ ಕಾರ್ಮಿಕರ ಮಕ್ಕಳ ಶಿಷ್ಯವೇತನದ ಮೊತ್ತವನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಎಐಡಿಎಸ್ಓ ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ ಅವರು ಮಾತನಾಡಿ… ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರೆ ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತ ಸೇರಿದಂತೆ ಹಲವು ವಿಭಾಗಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವು ಮಂಜೂರಾಗಿಲ್ಲ. ಕಳೆದ ಶೈಕ್ಷಣಿಕ ವರ್ಷದಲ್ಲಿ ಅರ್ಜಿ ಹಾಕಿದ್ದ ವಿದ್ಯಾರ್ಥಿವೇತನಗಳು ಇಲ್ಲಿಯವರೆಗೂ ಕೂಡ ವಿದ್ಯಾರ್ಥಿಗಳಿಗೆ ದೊರೆತಿಲ್ಲ. ಇನ್ನು ಕೆಲವು ದಿನಗಳ ಹಿಂದಷ್ಟೇ ರಾಜ್ಯದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ನೀಡುತ್ತಿದ್ದ ಶಿಷ್ಯವೇತನವನ್ನು ಭಾರೀ ಪ್ರಮಾಣದಲ್ಲಿ ಕಡಿತಗೊಳಿಸಲಾಗಿದೆ. ಪ್ರತಿ ವಿದ್ಯಾರ್ಥಿಗೆ ವಾರ್ಷಿಕ 5,000ದಿಂದ 60,000ದವರೆಗೆ ವಿತರಿಸಲ್ಪಡುತ್ತಿದ್ದ ವಿದ್ಯಾರ್ಥಿ ವೇತನದ ಮೊತ್ತವನ್ನು 1100 ರಿಂದ 11,000ಕ್ಕೆ ಇಳಿಸಲಾಗಿದೆ. ಈಗಾಗಲೇ ಎಲ್ಲಾ ಹಂತದ ಶಿಕ್ಷಣವು ವ್ಯಾಪಾರಿಕರಣಗೊಂಡು ಶುಲ್ಕಗಳು ಗಗನಕ್ಕೇರಿವೆ. ಬಡ ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯುವುದು ಅತ್ಯಂತ ದುಸ್ತರವಾಗಿರುವ ಇಂದಿನ ಪರಿಸ್ಥಿತಿಯಲ್ಲಿ ಸರ್ಕಾರದ ಶಿಷ್ಯವೇತನವು ಸಾಕಷ್ಟು ಸಹಕಾರಿಯಾಗಿದೆ.
ಈ ಶಿಷ್ಯವೇತನದಿಂದಾಗಿ ಬಡ ವಿದ್ಯಾರ್ಥಿಗಳು ಪಿಯ,ಪದವಿ ಸೇರಿದಂತೆ ಇಂಜಿನಿಯರಿಂಗ್ ಮತ್ತು ಮೆಡಿಕಲ್ ನಂತಹ ಉನ್ನತ ವ್ಯಾಸಂಗವನ್ನು ಕೂಡ ಪಡೆಯಬಹುದಾಗಿದೆ. ಆದರೆ ಈಗ ಭಾರೀ ಪ್ರಮಾಣದಲ್ಲಿ ಶಿಷ್ಯವೇತನದ ಮೊತ್ತವನ್ನು ಕಡಿತಗೊಳಿಸಿರುವುದು ಹಾಗೂ ವಿತರಣೆಯಲ್ಲಿ ದೀರ್ಘ ವಿಳಂಬವಾಗಿರುವುದು ಕಾರ್ಮಿಕರ ಹಾಗೂ ಬಡಮಕ್ಕಳ ಶಿಕ್ಷಣದ ಕನಸುಗಳನ್ನು ಚಿವುಟಿ ಹಾಕಿದಂತಾಗಿದೆ ಎಂದರು.
ಪ್ರತಿಭಟನೆಯನ್ನು ಉದ್ದೇಶಿಸಿ ಎಐಡಿಎಸ್ಓ ಜಿಲ್ಲಾ ಖಜಾಂಚಿ ಎಂ.ಶಾಂತಿ ಅವರು ಮಾತನಾಡಿದರು. ಪ್ರತಿಭಟನೆಯ ಅಧ್ಯಕ್ಷತೆಯನ್ನು ಎಐಡಿಎಸ್ಓ ಸೆಕ್ರೆಟರಿಯೇಟ್ ಸದಸ್ಯರು ಪ್ರಮೋದ್ ವಹಿಸಿದ್ದರು ಹಾಗೂ ಸೆಕ್ರೆಟರಿಯೇಟ್ ಸದಸ್ಯರು ಅನುಪಮಾ, ಸಿದ್ದು, ಉಮಾ ಮತ್ತು ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್