
ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ: ವಿದ್ಯಾರ್ಥಿ ಪ್ರಣಾಳಿಕೆ ಬಿಡುಗಡೆ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ,18- ಇಂದು ಎಐಡಿಎಸ್ಓ ಬಳ್ಳಾರಿ ಜಿಲ್ಲಾ ಸಮಿತಿಯಿಂದ ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಅಪ್ರಜಾತಾಂತ್ರಿಕವಾಗಿ ಹೇರಿರುವ ಎನ್.ಈ.ಪಿಯನ್ನು ಹಿಂಪಡೆಯಬೇಕು, ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಬಲಪಡಿಸಬೇಕು, ನಾಲ್ಕು ವರ್ಷದ ಪದವಿಯನ್ನು ಹಿಂಪಡೆಯಬೇಕು, ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸಬೇಕು ಹಾಗೂ ಇನ್ನಿತರ ಆಗ್ರಹಗಳನ್ನೊಳಗೊಂಡ ವಿದ್ಯಾರ್ಥಿ ಪ್ರಣಾಳಿಕೆಯನ್ನು ಎಐಡಿಎಸ್ಓ ಜಿಲ್ಲಾ ಅಧ್ಯಕ್ಷರು ಕೆ.ಈರಣ್ಣ ಬಿಡುಗಡೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ಎಐಡಿಎಸ್ಓ ರಾಜ್ಯ ಸೆಕ್ರೆಟರಿಯೇಟ್ ಸದಸ್ಯರಾದ ರವಿಕಿರಣ್ ಜಿ.ಪಿ ಮಾತನಾಡಿ, ಎಲ್ಲಾ ಸರ್ಕಾರಗಳು ದೇಶದ ನೈಜ ಸಮಸ್ಯೆಗಳನ್ನು ಮರೆಮಾಚುತ್ತಿವೆ. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಜಾತಿ-ಧರ್ಮದ ವಿಷಯಗಳನ್ನು ಮುನ್ನಲೆಗೆ ತರಲು ಯತ್ನಿಸುತ್ತಿವೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ಪ್ರಜ್ಞೆವಂತಿಕೆ ಯಿಂದ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಂಸತ್ ನಲ್ಲಿ ಚರ್ಚೆಮಾಡುವ ರೀತಿ ಧ್ವನಿಯೆತ್ತಬೇಕಿದೆ ಎಂದರು.
ದೇಶದ ಮಹಾನ್ ಕ್ರಾಂತಿಕಾರಿಗಳಾದ ಭಗತ್ ಸಿಂಗ್ ಹಾಗೂ ನೇತಾಜಿಯವರ ಉತ್ತರಾಧಿಕಾರಿಗಳಾಗಿ ಅನ್ಯಾಯ ಮತ್ತು ಅಸತ್ಯದ ವಿರುದ್ಧ ಹೋರಾಡುವ ಉದಾತ್ತ ರಾಜಕೀಯವನ್ನು ನಡೆಸಬೇಕಿದೆ. ಪ್ರತಿಯೊಬ್ಬರಿಗೂ ಪ್ರಜಾತಾಂತ್ರಿಕ, ವೈಜ್ಞಾನಿಕ ಧರ್ಮನಿರಪೇಕ್ಷ ಶಿಕ್ಷಣವು ಖಾತ್ರಿಪಡಿಸುವಂತೆ ನಮ್ಮನ್ನಾಳುವ ಸರ್ಕಾರಗಳನ್ನು ಒತ್ತಾಯಿಸಬೇಕಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಒಕ್ಕೊರಲಿನಿಂದ ಮುನ್ನುಗ್ಗಬೇಕಿದೆ ಎಂದು ಕರೆ ನೀಡಿದರು.
ಈ ಕೆಳಗಿನ ಆಗ್ರಹಗಳು ಚುನಾವಣೆಯಲ್ಲಿ ಚರ್ಚೆ ಆಗಬೇಕೆಂದು ಆಗ್ರಹಿಸಿದರು.
ಆಗ್ರಹಗಳು :
1. ರಾಜ್ಯದಲ್ಲಿ ಅಪ್ರಜಾತಾಂತ್ರಿಕವಾಗಿ ಹೇರಿರುವ NEP- 2020 ಅನ್ನು ಹಿಂಪಡೆಯಿರಿ. ಜನಪರ ಶಿಕ್ಷಣ ನೀತಿಯನ್ನು ರೂಪಿಸಿ.
2. ಶಿಕ್ಷಣಕ್ಕಾಗಿ ಕೇಂದ್ರ ಬಜೆಟ್ನಿಂದ 10% ಮತ್ತು ರಾಜ್ಯ ಬಜೆಟ್ನಿಂದ 30% ರಷ್ಟು ಮೀಸಲಿಡಿ – ಸರ್ವರಿಗೂ ವೈಜ್ಞಾನಿಕ, ಧರ್ಮನಿರಪೇಕ್ಷ, ಪ್ರಜಾಸತ್ತಾತ್ಮಕ ಮತ್ತು ಉಚಿತ ಶಿಕ್ಷಣವನ್ನು ಖಾತ್ರಿಪಡಿಸಿ.
3. ವಿಲೀನದ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವುದನ್ನು ನಿಲ್ಲಿಸಿ.
4. ಎಲ್ಲಾ ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಸುಧಾರಿಸಲು ಹಣವನ್ನು ಬಿಡುಗಡೆ ಮಾಡಿ ಮತ್ತು ಹೆಚ್ಚಿನ ಸರ್ಕಾರಿ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸಿ.
5. ಅಗತ್ಯವಿರುವ ಸಂಖ್ಯೆಯಲ್ಲಿ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಹಾಸ್ಟೆಲ್ ಸೌಲಭ್ಯವನ್ನು ಒದಗಿಸಿ.
6. ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ, ಶೈಕ್ಷಣಿಕ ಅನುದಾನಗಳು ಮತ್ತು ವಿದ್ಯಾರ್ಥಿವೇತನಗಳ ಸರಿಯಾದ
ವಿತರಣೆಯನ್ನು ಖಾತ್ರಿಪಡಿಸಿ.
7. ಅಪ್ರಜಾತಾಂತ್ರಿಕವಾಗಿ ಹೇರಿದ ನಾಲ್ಕು ವರ್ಷಗಳ ಪದವಿ ಕೋರ್ಸ್ ಹಿಂತೆಗೆದುಕೊಳ್ಳಿ.
8. ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಒದಗಿಸಿ.
9. ವಿದ್ಯಾರ್ಥಿಗಳಿಗೆ ನೈಜ ವೈಜ್ಞಾನಿಕ ಜ್ಞಾನವನ್ನು ಪಠ್ಯದ ಮೂಲಕ ಒದಗಿಸಿ.
10. ಪಠ್ಯಪುಸ್ತಕದಲ್ಲಿ ನಮ್ಮ ದೇಶದ ನವೋದಯದ ಮಹಾನ್ ವ್ಯಕ್ತಿಗಳು ಹಾಗೂ ಕ್ರಾಂತಿಕಾರಿಗಳ ಜೀವನ ಹೋರಾಟಗಳನ್ನು ಸೇರಿಸಿ.
11. ಖಾಸಗಿ ವಿಶ್ವವಿದ್ಯಾಲಯಗಳು ಮತ್ತು ವಿದೇಶಿ ವಿಶ್ವವಿದ್ಯಾಲಯಗಳು ನಮ್ಮ ದೇಶದಲ್ಲಿ ಬೇಡ.
12. ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಸರಿಯಾದ ಅನುದಾನ ನಿಗದಿ ಮಾಡಿ.
13. ಎಲ್ಲಾ ಪದವಿ ಮತ್ತು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಶುಲ್ಕ ಹೆಚ್ಚಳಕ್ಕೆ ಕಡಿವಾಣ ಹಾಕಿ.
14. ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಎಲ್ಲಾ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಿ.
15. ಶಿಕ್ಷಣದ ಸ್ವ-ಹಣಕಾಸು ವ್ಯವಸ್ಥೆಯನ್ನು ಉತ್ತೇಜಿಸುವುದನ್ನು ನಿಲ್ಲಿಸಿ.
16. ಎಲ್ಲಾ ಸರ್ಕಾರಿ ಕಾಲೇಜುಗಳಲ್ಲಿ NEET, JEE Main ಮತ್ತು JEE Advanced ಆಕಾಂಕ್ಷಿಗಳಿಗೆ ಉಚಿತ ಕೋಚಿಂಗ್ ಅನ್ನು ಒದಗಿಸಿ.
17. ಸಾರ್ವಜನಿಕ ಬಜೆಟ್ನ 3% ಅನ್ನು ಸಂಶೋಧನೆಗೆ ಮತ್ತು ಒಟ್ಟು GDP ಯ 3% ಅನ್ನು ಸಂಶೋಧನೆಗೆ ನಿಯೋಜಿಸಿ ಮತ್ತು ಎಲ್ಲಾ ಸಂಶೋಧನಾ ವಿದ್ಯಾರ್ಥಿಗಳಿಗೆ ಗೌರವಾನ್ವಿತ ಮತ್ತು ನಿಯಮಿತ ಫೆಲೋಶಿಪ್ ಅನ್ನು ಖಚಿತಪಡಿಸಿ.
18. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸಿ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಐಡಿಎಸ್ಓ ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ ಅವರು ವಹಿಸಿದ್ದರು. ಈ ಸಂದರ್ಭದಲ್ಲಿ ಎಐಡಿಎಸ್ಓ ಉಪಾಧ್ಯಕ್ಷರಾದ ಎಂ.ಶಾಂತಿ, ಉಮಾ, ಪ್ರಮೋದ್ ಹಾಗೂ ಖಜಾಂಚಿ ಅನುಪಮಾ, ಇನ್ನಿತರರು ಭಾಗವಹಿಸಿದ್ದರು.