
ಎಲ್ಲೆಡೆ ೭೮ ನೇ ಸ್ವಾತಂತ್ರ್ಯೋತ್ಸವ ಆಚರಣೆಯ ಸಂಭ್ರಮ
ದೇಶದಾದ್ಯಂತ ಹರ್ ಘರ್ ತಿರಂಗಾ ಅಭಿಯಾನ ಹಾಗೂ ೭೮ ನೇ ಸ್ವಾತಂತ್ರ್ಯೋತ್ಸವ ಆಚರಣೆಯ ಸಂಭ್ರಮಾಚರಣೆ ಜರುಗುತ್ತಿದ್ದು ಕುಷ್ಟಗಿ ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲೆಡೆ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆಯನ್ನು ಧ್ವಾಜಾರೊಹಣ ನೆರವೇರಿಸಿ ಸಿಹಿ ಹಂಚಿ ಆಚರಿಸಲಾಯಿತು.
ಸರಕಾರಿ ಪಾಲಿಟೆಕ್ನಿಕ್ ಕಾಲೇಜ್:
ಇಲ್ಲಿನ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ೭೮ ನೇ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆ ಮಾಡಲಾಯಿತು. ಕಾಲೇಜಿನ ಪ್ರಾಚಾರ್ಯರಾದ ವಾದಿರಾಜ ಮಠದ ಅವರು ಧ್ವಜಾರೋಹಣ ನೆರವೇರಿಸಿ ನಂತರ ಮಾತನಾಡಿ ನಮ್ಮ ದೇಶದಲ್ಲಿ ಅತೀ ದೊಡ್ಡ ಹಬ್ಬ ಸ್ವಾತಂತ್ರ್ಯೋತ್ಸವ ಹಬ್ಬ. ನಮ್ಮ ದೇಶವು ೭೮ ವರ್ಷಗಳಿಂದ ಅನೇಕ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ತಾಂತ್ರಿಕತೆಯಲ್ಲಿ ಅತೀ ಹೆಚ್ಚು ಬೆಳವಣಿಗೆ ಕಾಣುತ್ತಿದೆ. ನಮ್ಮ ಕಾಲೇಜು ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿಗಳು ತಾಂತ್ರಿಕ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸ.ಹಿ.ಪ್ರಾ.ಶಾಲೆ ಕುಷ್ಟಗಿ:
ಇಲ್ಲಿನ ಭಾಗ್ಯದ ಹನಮಪ್ಪ ದೇವಸ್ಥಾನದ ಹತ್ತಿರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೭೮ ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ಪವಾಡೆಪ್ಪ ಚೌಡ್ಕಿ ನೆರವೇರಿಸಿ ಸಂಭ್ರಮಾಚರಣೆ ಮಾಡಲಾಯಿತು. ನಂತರಮಾತನಾಡಿದ ಅವರು ಮುದ್ದು ವಿದ್ಯಾರ್ಥಿಗಳು ಸ್ವಾಂತಂತ್ರ್ಯೋತ್ಸವವನ್ನು ಸಡಗರದಿಂದ ಆಚರಿಸಬೇಕು. ಶುಭ್ರತೆಯನ್ನು ಕಾಪಾಡಿಕೊಂಡು ಶಾಲೆಯಲ್ಲಿ ಗುರುಗಳು ಹೇಳಿದ ಪಾಠವನ್ನು ಚೆನ್ನಾಗಿ ಅರಿತು ಅತ್ಯುತ್ತಮ ಫಲಿತಾಂಶ ಪಡೆದು ಶಾಲೆಗೆ ಹಾಗೂ ನಿಮ್ಮ ತಂದೆ ತಾಯಿಗೆ ಕೀರ್ತಿ ತರಬೇಕು ಎಂದರು.
ಮದರಸಾದಲ್ಲಿ ಸ್ವಾತಂತ್ರ್ಯೋತ್ಸವ:
ಸ್ಥಳೀಯ ಗಜೇಂದ್ರಗಡ ರಸ್ತೆಯಲ್ಲಿರುವ ದಾರುಲ್ ಉಲುಮ್ ಅಷರಫಿಯಾ ಮದರಸಾದಲ್ಲಿ ಅತೀ ವಿಜೃಂಭಣೆಯಿಂದ ಆಚರಿಸಲಾಯಿತು. ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಶಾಲೆಯ ಮುಖ್ಯಸ್ಥ ಹಾಫೀಜ್ ಫಜಲೇ ಅಜೀಂ, ನಮಾಜ್ ಹೇಗೆ ಕಡ್ಡಾಯವೋ ಹಾಗೆ ನಮ್ಮ ಭಾರತ ದೇಶಾಭಿಮಾನ ಬೆಳೆಸಿಕೊಳ್ಳಬೇಕೆಂದರು. ಎಂದರು. ವಿಶೇಷ ಉಪನ್ಯಾಸ ನೀಡಿದ ಇಲಕಲ್ಲ ನ ಮುಫ್ತಿ ಹಸನ್ ರವರು ಸ್ವಾತಂತ್ರ್ಯ ಪೂರ್ವ ಹೋರಾಟ ದಲ್ಲಿ ಮಡಿದ ಮಹನೀಯರ ಬಗ್ಗೆ, ಯವುದೇ ಜಾತಿ ಭೇದವಿಲ್ಲದೇ ಹೋರಾಟ ಮಾಡಿದರ ಫಲವೇ ನಮಗಿಂದು ಸಿಕ್ಕಿರುವ ಸ್ವಾತಂತ್ರ್ಯ ,ನಾವೆಲ್ಲರೂ ಅವರ ಬಲಿದಾನ ಸ್ಮರಿಸಬೇಕೆಂದರು. ವಿದ್ಯಾರ್ಥಿಗಳು ದೇಶಪ್ರೇಮದ ಬಗೆಗಿನ ಸಾಹಸ ಪ್ರದರ್ಶನ ನೀಡಿದರು.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ನಜೀರಸಾಬ ಮೂಲಿಮನಿ ನಿವೃತ್ತ ಗ್ರೇಡ್ 2 ತಹಶಿಲ್ದಾರ ಖಾಜಾಹಸೇನಸಾಬ ಶಿಕ್ಷಕ ಮುಫ್ತಿ ಫಜಲುಲ್ ಹಖ್. ಖಾಜಾಹುಸೇನ .ಮುರ್ತುಜಾಸಾಬ ಅತ್ತಾರ ಮುರ್ತುಜಾ ಪೇಂಟರ್ .ಮೆಹಬೂಬ ನೆರಬೆಂಚಿ ಖಾಜಾಸಾಬ ಅತ್ತಾರ ಹಾಗೂ ಮುಸ್ಲಿಂ ಸಮಾಜದ ಹಲವರು ಉಪಸ್ಥಿತರಿದ್ದರು.
ಎಸ್.ವಿ.ಸಿ. ಶಿಕ್ಷಣ ಸಂಸ್ಥೆ:
ಸ್ಥಳೀಯ ಶ್ರೀ ವಿಜಯಚಂದ್ರಶೇಖರ ಶಿಕ್ಷಣ ಸಂಸ್ಥೆಯಲ್ಲಿ ೭೮ ನೇ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆ ಮಾಡಲಾಯಿತು. ಅಧ್ಯಕ್ಷ ಸಿ ವಿ ಚಂದ್ರಶೇಖರ ಅವರು ಮಾತನಾಡಿ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸುವುದೇ ಭಾರತೀಯತ್ವ ಹಾಗೂ ರಾಷ್ಟ್ರೀಯತೆ. ಭಾರತ ದೇಶವನ್ನು ಅನೇಕ ಮಹನೀಯರು ಕಟ್ಟಿದ್ದಾರೆ. ವಿವಿಧ ಭಾಷಿಕರು, ಜಾತಿ, ಧರ್ಮ ಹಾಗೂ ಸಮುದಾಯದವರು ದೇಶಕ್ಕಾಗಿ ಪ್ರಾಣ ಸಮರ್ಪಿಸಿದ್ದಾರೆ. ಇಂತಹ ಸ್ವಾಂತಂತ್ರ್ಯದ ಕಿಚ್ಚು ನಮ್ಮೆಲ್ಲರಲ್ಲೂ ಮೂಡಬೇಕು ಎಂದರು. ಧ್ವಜಾರೋಹಣ ನೆರವೇರಿಸಿದ ಬಿಎಸ್ಎಫ್ ನಿವೃತ್ತ ಯೋಧ ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡ ಸೈನಿಕರಾದ ಮಹಮ್ಮದ್ ರಫಿ ಬೆಂಡೋನಿಯವರು ಮಾತನಾಡಿ ಶಿಸ್ತು ಹಾಗೂ ಸಂಯಮದಿಂದ ಮಾತ್ರ ಎಂತಹ ಕಷ್ಟವನ್ನು ಹಾಗೂ ಎದುರಾಳಿಗಳನ್ನು ಹಿಮ್ಮೆಟ್ಟಿಸುವ ಶಕ್ತಿ ಬರುತ್ತದೆ. ವಿದ್ಯಾರ್ಥಿಗಳು ಸೇನೆ, ಪೊಲೀಸ್ ಹಾಗೂ ರಕ್ಷಣಾ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಭೀಮರಾವ್ ಕುಲಕರ್ಣಿ, ಸಿಬಿಎಸ್ಇ ಶಾಲೆಯ ಪ್ರಾಂಪಾಲರಾದ ಪ್ರಶಾಂತ ಹಿರೇಮಠ, ಪಿಯುಸಿ ಕಾಲೇಜಿನ ಪ್ರಾಚಾರ್ಯರಾದ ಗುರುಪ್ರಸಾದ ಎಂ ಹಾಗೂ ಶಿಕ್ಷಣ ಕಾಲೇಜು ಪ್ರಾಂಶುಪಾಲರಾದ ಡಾ. ಎಸ್ ಸಿ ತಿಪ್ಪಾಶೆಟ್ಟಿ ಅವರು ಉಪಸ್ಥಿತರಿದ್ದರು.