
ಚುನಾವಣಾ ಜಾಹೀರಾತುಗಳಿಗೆ ಪೂರ್ವಾನುಮತಿ ಕಡ್ಡಾಯ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 29- ಲೋಕಸಭಾ ಚುನಾವಣೆಯಲ್ಲಿ ವಿವಿಧ ಮಾಧ್ಯಮಗಳಾದ ದಿನಪತ್ರಿಕೆಗಳು,ಟಿ.ವಿ,ಕೇಬಲ್ ನೆಟ್ವರ್ಕ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳ ಮೇಲೆ ಎಂ.ಸಿ.ಎಂ.ಸಿ ಸಮಿತಿ ವತಿಯಿಂದ ನಿಗಾವಹಿಸಲಾಗುತ್ತಿದ್ದು ಚುನಾವಣಾ ಜಾಹೀರಾತುಗಳಿಗೆ ಪೂರ್ವಾನುಮತಿ ಕಡ್ಡಾಯವಾಗಿರುತ್ತದೆ.
ಜಿಲ್ಲಾಧಿಕಾರಿ ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾಧ್ಯಮ ಪ್ರಮಾಣೀಕರಣ ಹಾಗೂ ಮೇಲುಸ್ತುವಾರಿ ಸಮಿತಿ (ಎಂ.ಸಿ.ಎಂ.ಸಿ) ವಿವಿಧ ಮಾಧ್ಯಮಗಳಲ್ಲಿ ದಿನನಿತ್ಯ ಪ್ರಸಾರವಾಗುವ ಸುದ್ದಿ, ಜಾಹೀರಾತುಗಳ ಕುರಿತು 24*7 ನಿಗಾವಹಿಸುತ್ತಿರುತ್ತದೆ.
ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಣೆಗೆ ಮತದಾನದ ಮುನ್ನಾ ದಿನ ಹಾಗೂ ಮತದಾನ ದಿನದಂದು ಅಂದರೆ ಮೇ 06 ಹಾಗೂ 07 ರಂದು ಜಾಹೀರಾತು ಪ್ರಕಟಣೆಗೆ ಪೂರ್ವಾನುಮತಿ ಕಡ್ಡಾಯವಾಗಿದ್ದು, ಪೂರ್ವಾನುಮತಿ ಪಡೆದ ಜಾಹೀರಾತುಗಳನ್ನು ಮಾತ್ರ ಪ್ರಕಟಿಸಬಹುದು.
ಅಭ್ಯರ್ಥಿಗಳು ಅಥವಾ ರಾಜಕೀಯ ಪಕ್ಷಗಳು ಜಾಹೀರಾತು ಪ್ರಕಟಣೆಗೆ ಅನುಮತಿ ಪಡೆಯಲು ನಿಗದಿತ ನಮೂನೆಗಳಲ್ಲಿ ಜಾಹೀರಾತು ಪ್ರಕಟಣೆಗೆ ಎರಡು ದಿನ ಮುಂಚಿತವಾಗಿ ಅಂದರೆ ಮೇ 04 ರೊಳಗೆ ಎಂ.ಸಿ.ಎಂ.ಸಿ ಸಮಿತಿಗೆ ಅರ್ಜಿ ಸಲ್ಲಿಸಬೇಕು ಎಂದು ಚುನಾವಣಾಧಿಕಾರಿಗಳು ಹಾಗೂ ಎಂ.ಸಿ.ಎಂ.ಸಿ ಸಮಿತಿಯ ಅಧ್ಯಕ್ಷರಾದ ನಲಿನ್ ಅತುಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.