ಪತ್ರಕರ್ತರೊಂದಿಗೆ ಕ್ರಿಕೆಟ್ ಆಡಿದ ಸಿಇಓ, ಎಸಿ (1)

ಮತದಾನ ಜಾಗೃತಿ ಮೂಡಿಸಲು ತಾಲೂಕು ಸ್ವೀಪ್ ಸಮಿತಿಯಿಂದ ಕ್ರಿಕೆಟ್ ಪಂದ್ಯ ಆಯೋಜನೆ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 29- ಲೋಕಸಭಾ ಚುನಾವಣೆ ಅಂಗವಾಗಿ ಜನರಲ್ಲಿ ಮತದಾನ ಜಾಗೃತಿ ಮೂಡಿಸಲು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ, ಉಪವಿಭಾಗದ ಅಧಿಕಾರಿಗಳಾದ ಕ್ಯಾಪ್ಟೆನ್ ಮಹೇಶ ಮಾಲಗಿತ್ತಿ ನೇತೃತ್ವದ ಅಧಿಕಾರಿಗಳ ತಂಡ & ಪತ್ರಕರ್ತರ ಕ್ರಿಕೆಟ್ ಪಂದ್ಯ ಎಲ್ಲರ ಗಮನಸೆಳೆಯಿತು.

ಗಂಗಾವತಿ ನಗರದ ಬಸವಲಿಂಗಪ್ಪ ಸ್ಕೂಲ್ ಮೈದಾನ ಆವರಣದಲ್ಲಿ ತಾಲೂಕು ಸ್ವೀಪ್ ಸಮಿತಿಯಿಂದ ಭಾನುವಾರ ಆಯೋಜಿಸಿದ್ದ ಅಧಿಕಾರಿಗಳು ಮತ್ತು ಪತ್ರಕರ್ತರ ನಡುವೆ ನಡೆದ ಕ್ರಿಕೆಟ್ ಪಂದ್ಯವನ್ನು ಜಿಪಂ ಸಿಇಓ ಅವರು ಟಾಸ್ ಮಾಡುವ ಮೂಲಕ ಉದ್ಘಾಟಿಸಿದರು.

ಜಿ.ಪಂ. ಸಿಇಓ ರಾಹುಲ್ ರತ್ನಂ ಪಾಂಡೆಯ ಅವರು ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಮತದಾನವಾಗಲು ಸ್ವೀಪ್ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಬೇಕು. ಚುನಾವಣೆ ಹಬ್ಬದಲ್ಲಿ ಎಲ್ಲರೂ ಖುಷಿಯಿಂದ ಪಾಲ್ಗೊಳ್ಳಬೇಕು. ಮತ ಚಲಾಯಿಸಲು ಯಾರೂ ಕೂಡ ನಿರ್ಲಕ್ಷ್ಯ ತೋರಬಾರದು. ಯುವಕರು ಕ್ರಿಕೆಟ್ ಪ್ರೇಮಿಗಳಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಯುವ ಮತದಾರರನ್ನು ಸೆಳೆಯಲು ಕ್ರಿಕೆಟ್ ಪಂದ್ಯ ಆಯೋಜಿಸಲಾಗಿದೆ ಎಂದರು.

ಜಿ.ಪA. ಸಿಇಓ ರಾಹುಲ್ ರತ್ನಂ ಪಾಂಡೆಯ, ಎಸಿ ಕ್ಯಾಪ್ಟೆನ್ ಮಹೇಶ ಮಾಲಗಿತ್ತಿ, ಚುನಾವಣಾ ಜಿಲ್ಲಾ ರಾಯಭಾರಿಗಳಾದ ಡಾ.ಶಿವಕುಮಾರ್ ಮಾಲಿಪಾಟೀಲ್ ಅವರು ಬ್ಯಾಟಿಂಗ್, ಬೌಲಿಂಗ್ , ಫೀಲ್ಡಿಂಗ್ ಮೂಲಕ ಎಲ್ಲರ ಗಮನ ಸೆಳೆದರು. ಜೊತೆಗೆ ಅಧಿಕಾರಿಗಳೊಂದಿಗೆ ದಿನಪತ್ರಿಕೆ, ಟಿವಿ ಮಾಧ್ಯಮದ ಪತ್ರಕರ್ತರು ಉತ್ತಮ ಬೌಲಿಂಗ್, ಬ್ಯಾಟಿಂಗ್ ಮಾಡಿದರು. ಅಧಿಕಾರಿಗಳ ತಂಡ 10 ಓವರ್ ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 99 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಪತ್ರಕರ್ತರ ತಂಡ 78 ರನ್ ಗಳಿಸಿತು. ಅಧಿಕಾರಿಗಳ ತಂಡದಲ್ಲಿ ಜಿ.ಪಂ. ಸಿಇಓ ರಾಹುಲ್ ರತ್ನಂ ಪಾಂಡೆಯ ಅವರು ವೈಯಕ್ತಿಕ 38 ರನ್ ಬಾರಿಸಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಎಸಿ ಕ್ಯಾಪ್ಟೇನ್ ಮಹೇಶ ಮಾಲಗಿತ್ತಿ ಅವರು ಉತ್ತಮ ಬೌಲಿಂಗ್ ಮಾಡಿ ಎರಡು ವಿಕೆಟ್ ಪಡೆದರು.

ನಂತರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ರಾಹುಲ್ ರತ್ನಂ ಪಾಂಡೆಯ ಅವರು ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುವಂತೆ ನೈತಿಕ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಿದರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಚುನಾವಣಾ ರಾಯಭಾರಿಗಳಾದ ಡಾ. ಶಿವಕುಮಾರ್ ಮಾಲಿ ಪಾಟೀಲ್ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷರಾದ ಲಕ್ಷ್ಮೀದೇವಿ, ನಗರಸಭೆ ಪೌರಾಯುಕ್ತರಾದ ವಿರುಪಾಕ್ಷಮೂರ್ತಿ, ವ್ಯವಸ್ಥಾಪಕರು, ಗ್ರಾಪಂ ಪಿಡಿಓಗಳು, ಪತ್ರಕರ್ತರು, ಯುವ ಮತದಾರರು, ಕ್ರೀಡಾಭಿಮಾನಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!