
ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ನೋಂದಾಯಿಸಲು ಸೂಚನೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 29- 2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ತೋಟಗಾರಿಕೆ ಬೆಳೆಗಳನ್ನು ನೋಂದಾಯಿಸುವಂತೆ ಎಂದು ತೋಟಗಾರಿಕೆ ಉಪನಿರ್ದೇಶಕರಾದ ಕೃಷ್ಣ ಉಕ್ಕುಂದ ಅವರು ತಿಳಿಸಿದ್ದಾರೆ.
ಕರ್ನಾಟಕ ಸರ್ಕಾರವು 2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ಮತ್ತು ಸರ್ಕಾರದ ಅಧಿಸೂಚನೆ ಪ್ರಕಾರ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಗಳನ್ನು ಅನುಷ್ಠಾನಗೊಳಿಸಲು ಮಂಜೂರಾತಿ ನೀಡಿದೆ. ಈ ಯೋಜನೆಗಳಡಿ ಜಿಲ್ಲೆಯ ಎಲ್ಲಾ ರೈತರು ಪಪ್ಪಾಯ, ಮಾವು, ದ್ರಾಕ್ಷಿ, ದಾಳಿಂಬೆ, ಹಸಿಮೆಣಸಿನಕಾಯಿ ಮತ್ತು ಈರುಳ್ಳಿ(ನೀ), ಟೊಮ್ಯಟೋ, ಈರುಳ್ಳಿ(ಮ.ಆ) ಬೆಳೆಗಳನ್ನು ವಿಮೆಗೆ ಒಳಪಡಿಸಬಹುದು. ತಮ್ಮ ಪಾಲಿನ ವಿಮಾ ವಂತಿಗೆಯನ್ನು ಜುಲೈ 31ರೊಳಗಾಗಿ ಪಾವತಿಸಿದಲ್ಲಿ ಈ ಯೋಜನೆಯಡಿ ಪ್ರಾಯೋಜನೆ ಪಡೆಯಬಹುದು.
ಬೆಳೆಗಳ ಪಟ್ಟಿ ವಿಮೆ ವಿವರ: ಮರುವಿನ್ಯಾಸಗೊಳಿಸಲಾದ ಹವಾಮಾನಾಧಾರಿತ ಬೆಳೆ ವಿಮಾ ಯೋಜನೆಯಡಿ (ಆರ್-ಡಬ್ಲು.ಬಿ.ಸಿ.ಐ.ಸಿ.ಎಸ್ & ಪಿ.ಎಂ.ಎಫ್.ಬಿ.ವೈ) ಅಧಿಸೂಚಿತ ತಾಲ್ಲೂಕುಗಳ ಬೆಳೆಗಳ ಪಟ್ಟಿ ಹಾಗೂ ವಿಮೆ ವಿವರ ಇಂತಿದೆ. ಕೊಪ್ಪಳ, ಕುಷ್ಟಗಿ, ಗಂಗಾವತಿ, ಕಾರಟಗಿ, ಕನಕಗಿರಿ, ಕುಕನೂರು ಮತ್ತು ಯಲಬುರ್ಗಾಗಳಲ್ಲಿ ಹಸಿ ಮೆಣಸಿನಕಾಯಿಯನ್ನು ಅಧಿಸೂಚಿತ ಬೆಳೆಯಾಗಿ ಆಯ್ಕೆ ಮಾಡಲಾಗಿದೆ.
ಈ ಯೋಜನೆಯಡಿ ದ್ರಾಕ್ಷಿ ಬೆಳೆಗೆ ಪ್ರತಿ ಹೆಕ್ಟೇರ್ಗೆ ರೂ. 2,80,000 ವಿಮಾ ಮೊತ್ತವನ್ನು ನಿಗದಿಪಡಿಸಲಾಗಿದ್ದು, ರೈತರು ರೂ. 14,000 ವಿಮಾ ಕಂತನ್ನು ಪಾವತಿಸಬೇಕು. ಮಾವು ಬೆಳೆಗೆ ಪ್ರತಿ ಹೆಕ್ಟೇರ್ಗೆ ವಿಮಾ ಮೊತ್ತ ರೂ. 80,000 ಆಗಿದ್ದು, ರೈತರು ರೂ. 4000 ವಿಮಾ ಕಂತನ್ನು ಪಾವತಿಸಬೇಕು. ದಾಳಿಂಬೆ ಬೆಳೆಗೆ ಪ್ರತಿ ಹೆಕ್ಟೇರ್ಗೆ ವಿಮಾ ಮೊತ್ತ ರೂ. 1,27,000 ಆಗಿದ್ದು, ರೈತರು ರೂ. 6350 ವಿಮಾ ಕಂತನ್ನು ಪಾವತಿಸಬೇಕು. ಹಸಿ ಮೆಣಸಿನಕಾಯಿ ಬೆಳೆಗೆ ಪ್ರತಿ ಹೆಕ್ಟೇರ್ಗೆ ವಿಮಾ ಮೊತ್ತ ರೂ.71,000 ಆಗಿದ್ದು, ರೈತರು ರೂ. 3550 ವಿಮಾ ಕಂತನ್ನು ಪಾವತಿಸಬೇಕು. ಪಪ್ಪಾಯ ಬೆಳೆಗೆ ಪ್ರತಿ ಹೆಕ್ಟೇರ್ಗೆ ವಿಮಾ ಮೊತ್ತ ರೂ. 1,34,000 ಆಗಿದ್ದು, ರೈತರು ರೂ. 6700 ಕಂತನ್ನು ಪಾವತಿಸಬೇಕು. ಈರುಳ್ಳಿ(ನೀ) ಬೆಳೆಗೆ ಪ್ರತಿ ಹೆಕ್ಟೇರ್ಗೆ ವಿಮಾ ಮೊತ್ತ ರೂ. 80,500 ಆಗಿದ್ದು, ರೈತರು ರೂ. 4025 ವಿಮಾ ಕಂತನ್ನು ಪಾವತಿಸಬೇಕು. ಟೊಮೆಟೊ ಬೆಳೆಗೆ ಪ್ರತಿ ಹೆಕ್ಟೇರ್ಗೆ ವಿಮಾ ಮೊತ್ತ ರೂ. 1,41,500 ಆಗಿದ್ದು, ರೈತರು ರೂ. 7075 ವಿಮಾ ಕಂತನ್ನು ಪಾವತಿಸಬೇಕು. ಈರುಳ್ಳಿ (ಮ.ಆ) ಬೆಳೆಗೆ ಪ್ರತಿ ಹೆಕ್ಟೇರ್ಗೆ ವಿಮಾ ಮೊತ್ತ ರೂ. 75,750 ನಿಗದಿಪಡಿಸಲಾಗಿದ್ದು, ರೈತರು ರೂ. 3788 ಮೊತ್ತದ ವಿಮಾ ಕಂತನ್ನು ಪಾವತಿಸಬೇಕು.
ರೈತರು ತಮ್ಮ ಪಾಲಿನ ವಿಮಾ ವಂತಿಗೆಯನ್ನು ಜುಲೈ 31 ರೊಳಗೆ ಪಾವತಿಸಿದಲ್ಲಿ ಈ ಯೋಜನೆಯಡಿ ಪ್ರಯೋಜನ ಪಡೆಯಬಹುದು. ವಿಮಾ ಯೋಜನೆಯ ಅನುಷ್ಠಾನಕ್ಕಾಗಿ ಅಗ್ರಿಕಲ್ಚರ್ ಇನ್ಶೂರೆನ್ಸ್ ಕಂಪೆನಿ ರವರನ್ನು ಆಯ್ಕೆ ಮಾಡಲಾಗಿದೆ. ವಿಮಾ ಮೊತ್ತವು ಬೆಳೆ ಸಾಲ ಪಡೆದ ಮತ್ತು ಬೆಳೆ ಸಾಲ ಪಡೆಯದ ರೈತರಿಗೆ ಒಂದೇ ಆಗಿರುತ್ತದೆ. ಬೆಳೆ ಸಾಲ ಪಡೆಯದ ರೈತರು ವಿಮೆ ಕಟ್ಟಲು ಹತ್ತಿರದ ರಾಷ್ಟ್ರೀಕೃತ ಬ್ಯಾಂಕ್ಗಳಿಗೆ/ ಸಾಮಾನ್ಯ ಸೇವಾ ಕೇಂದ್ರಗಳಿಗೆ ನಿಗದಿತ ಅರ್ಜಿಗಳೊಂದಿಗೆ ಭೂಮಿ ಹೊಂದಿರುವ ದಾಖಲೆಗಳಾದ ಪಹಣಿ, ಬ್ಯಾಂಕ್ ಪಾಸ್ ಪುಸ್ತಕ, ಆಧಾರ್ ಕಾರ್ಡ್ ಮತ್ತು ಸ್ವಯಂ ಘೋಷಿತ ಬೆಳೆ ವಿವರಗಳೊಂದಿಗೆ ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಸಮೀಪದ ಹೋಬಳಿ ಮಟ್ಟದ ತೋಟಗಾರಿಕೆ ಅಧಿಕಾರಿಗಳು ಹಾಗೂ ಕೃಷಿ ಅಧಿಕಾರಿಗಳು ಅಥವಾ ಸಮೀಪದ ಯಾವುದೇ ಬ್ಯಾಂಕ್ಗಳಿಗೆ/ ಸಾಮಾನ್ಯ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಯೋಜನೆಯಡಿ ಆಯ್ಕೆಯಾಗಿರುವ ಗ್ರಾಮ ಪಂಚಾಯತಿ ಮತ್ತು ಬೆಳೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುವಂತೆ ತೋಟಗಾರಿಕೆ ಪ್ರಕಟಣೆ ತಿಳಿಸಿದೆ.