- 23ರಂದು ಜಿಲ್ಲೆಯಲ್ಲಿ ಏಕಕಾಲಕ್ಕೆ ಜಪ ಸಂಕಲ್ಪ
ಕೊಪ್ಪಳ : ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ಜಿಲ್ಲೆಯಾದ್ಯಂತ ಅ. 23ರಂದು ಸಂಜೆ 5.30ಕ್ಕೆ ಏಕಕಾಲಕ್ಕೆ ಲೋಕಕಲ್ಯಾಣಾರ್ಥಕ್ಕಾಗಿ ಶ್ರೀರಾಮ ತಾರಕ ಮಂತ್ರ ಮತ್ತು ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್ ಜಪದ ಸಂಕಲ್ಪ ಆರಂಭವಾಗಲಿದೆ.
ಜಿಲ್ಲೆಯ ಧಾರ್ಮಿಕ ಶ್ರದ್ಧಾ ಕೇಂದ್ರಗಳು, ಮಹಿಳಾ ಮಂಡಳಿಗಳು ಸೇರಿದಂತೆ ವಿವಿಧೆಡೆ ಜಪದ ಸಂಕಲ್ಪ ಮಾಡಲು ಇತ್ತೀಚೆಗೆ ನಗರದಲ್ಲಿ ನಡೆದ ವಿಪ್ತ ಸಮಾಜದ ಪ್ರಮುಖರ ಸಭೆಯಲ್ಲಿ ತೀರ್ಮಾನಿಸಲಾಯಿತು.
‘ಜಪ ಸಂಕಲ್ಪ ನಡೆಸುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಸಮಾಜದ ಪ್ರಮುಖರ ಸಭೆ ನಡೆಸಲಾಗಿದೆ. ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಜಪವನ್ನು ಸಮರ್ಪಣೆ ಮಾಡಲು ಮುಂಬರುವ ದಿನಗಳಲ್ಲಿ ಯಜ್ಞ ಹಮ್ಮಿಕೊಳ್ಳಲಾಗುತ್ತದೆ. ಅದೇ ದಿನದಂದು ಶೋಭಾಯಾತ್ರೆಯೂ ನಡೆಯಲಿದೆ. ಆ ಕಾರ್ಯಕ್ರಮದ ದಿನಾಂಕವನ್ನು ಶೀಘ್ರದಲ್ಲಿಯೇ ನಿರ್ಧಾರ ಮಾಡಲಾಗುವುದು’ ಎಂದು ಸಮಾಜದ ಪ್ರಕಟಣೆ ತಿಳಿಸಿದೆ.
‘ಜಿಲ್ಲೆಯಲ್ಲಿ ಮಹಾಸಭಾದ ಸಂಘಟನೆ ನಡೆಸಲಾಗುತ್ತಿದೆ. ವಿಪ್ರ ಬಂಧುಗಳು ಸದಸ್ಯತ್ವ ಪಡೆದುಕೊಳ್ಳುವ ಮೂಲಕ ಸಮಾಜವನ್ನು ಬಲಿಷ್ಠಗೊಳಿಸಲು ಕೈ ಜೋಡಿಸಬೇಕು’ ಎಂದು ಕೋರಿದ್ದಾರೆ.
ಸಭೆಯಲ್ಲಿ ವೈದ್ಯ ಕೆ.ಜಿ. ಕುಲಕರ್ಣಿ ಮಹಾಸಭಾದ ಕಾರ್ಯಕಾರಿಣಿ ಸದಸ್ಯ ಎಚ್.ಬಿ. ದೇಶಪಾಂಡೆ, ವೇಣುಗೋಪಾಲ ಆಚಾರ್ ಜಹಗೀರದಾರ, ಪ್ರಾಣೇಶ ಮಾದನೂರು, ವಸಂತ ಪೂಜಾರ, ಗುರುರಾಜ ಜೋಶಿ, ಅನಿಲ್ ಕುಮಾರ ಕುಲಕರ್ಣಿ ಮುರುಡಿ, ಲತಾ ಮುಧೋಳ್, ಮಹಾಸಭಾದ ಕಾರ್ಯಕಾರಿ ಸದಸ್ಯೆ ವೈಷ್ಣವಿ ಹುಲಿಗಿ, ಜಿಲ್ಲಾ ವಿಪ್ರ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಮಧುರಾ ಕರ್ಣಂ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
