
ತನ್ನ ಭದ್ರಕೋಟೆಯನ್ನು ಮತ್ತೆ ವಶಪಡಿಸಿಕೊಂಡ ಕಾಂಗ್ರೆಸ್
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 4- ಮೇ 07 ರಂದು ನಡೆದ 2024ರ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಲೊಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಮಾಜಿ ಸಚಿವ ಹಾಲಿ ಸಂಡೂರು ಶಾಸಕ ಇ ತುಕಾರಾಮ್ ಭಾರಿ ಅಂತರದ ಗೆಲುವನ್ನು ಕಾಣುವ ಮೂಲಕ ಕಾಂಗ್ರೆಸ್ ಪಕ್ಷ ಈ ಹಿಂದೆ ತನ್ನ ಭದ್ರಕೋಟೆಯನ್ನಾಗಿಸಿಕೊಂಡಿದ್ದ ಬಳ್ಳಾರಿಯನ್ನು ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.
ಬಳ್ಳಾರಿ ಲೋಕಸಭಾ ಕ್ಷೇತ್ರವಾದಾಗಿನಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳೆ ಹೆಚ್ಚಿನಭಾರಿ ಗೆಲವು ಕಂಡಿದ್ದಾರೆ. ಬಸವರಾಜೇಶ್ವರಿಯವರು ಮೂರು ಸಾರಿ ಎಂ.ಪಿ ಯಾಗಿ ಆಯ್ಕೆಯಾಗುವ ಮೂಲಕ ಒಂದು ಭಾರಿ ಕೇಂದ್ರ ಸಚಿವರಾಗಿ ಕೂಡ ಕಾರ್ಯನಿರ್ವಹಸಿದ್ದರು. ನಂತರ ಕೆ.ಸಿ ಕೊಂಡಯ್ಯನವರು ಎಂ.ಪಿ ಯಾಗಿ ಆಯ್ಕೆಯಾಗುವ ಮೂಲಕ ಬಳ್ಳಾರಿ ಲೋಕಸಭಾ ಕ್ಷೆತ್ರದಲ್ಲಿ ಕಾಂಗ್ರೆಸ್ ಪರವಾಗಿ ಕತ್ತೆ ನಿಂತರು ಗೆಲ್ಲುತ್ತದೆ ಎಂಬ ನುಡಿಯೊಂಡು ಬಹಳ ವರ್ಷಗಳ ಕಾಲ ಹರಿದಾಡುತ್ತಿತ್ತು.
ನಂತರ 1998ರಲ್ಲಿ ಸೋನಿಯಾ ಗಾಂಧಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸುಷ್ಮಾ ಸ್ವರಾಜ್ ರವರ ವಿರುದ್ಧ ಗೆದ್ದು ಬಂದಿದ್ದರು. ಇದರಿಂದ ಇಡೀ ದೇಶ ಬಳ್ಳಾರಿ ಕಡೆ ಮುಕಮಾಡಿತ್ತು. ನಂತರ ಕೋಳೂರು ಬಸವನಗೌಡ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸಿದ್ದರು. ಮುಂದಿನ ದಿನಗಳಲ್ಲಿ 2004 ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಜಿ ಕರುಣಾಕರ ರೆಡ್ಡಿ ಗೆಲ್ಲುವ ಮೂಲಕ ಪ್ರಪ್ರಥಮ ಭಾರಿಗೆ ಬಳ್ಳಾರಿಯಲ್ಲಿ ಬಿ.ಜೆ.ಪಿ ತನ್ನ ಖಾತೆಯನ್ನು ತೆರೆಯಿತು. ರೆಡ್ಡಿ ರಾಮುಲುಗಳ ಅರ್ಭಟದಿಂದ ಸತತವಾಗಿ ನಾಲ್ಕು ಭಾರಿ ಬಿ.ಜೆ.ಪಿ ಸಂಸತ್ ಸದಸದ್ಯರಾಗಿ ಆಯ್ಕೆಯಾಗಿದ್ದು ಬಿಟ್ಟರೆ ಸುಮಾರು 14 ಭಾರಿ ಕಾಂಗ್ರೆಸ್ ಮತ್ತು ಒಂದು ಭಾರಿ ಸಿ.ಪಿ.ಎಂ ನ ವೀರಭದ್ರಪ್ಪ ಗೆದ್ದಿದ್ದರು.
ಮತ್ತೆ ಈಗ 2024ರ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಮಾಜಿ ಸಚಿವ ಬಿ.ಶ್ರೀರಾಮುಲು ಮತ್ತು ಕಾಂಗ್ರೆಸ್ನ ಇ. ತುಕಾರಾಮ್ ಅವರ ಮಧ್ಯೆ ನೇರ ಹಣಾಹಣಿ ಇತ್ತು, ಬಹತೇಕ ಆಡು ಭಾಷೆಯಲ್ಲಿ ಹೇಳುವದಾದರೆ ಕಾಂಗ್ರೆಸ್ ಪಕ್ಷದ ಇ ತುಕಾರಾಮ್ ಪರವಾಗಿ ಮತದಾರರು ವನ್ ಸೈಡ್ ತೀರ್ಮಾನ ತೆಗೆದುಕೊಂಡಿದ್ದರು. ನಾಮಪತ್ರ ಸಲ್ಲಿಸಿದಾಗಲೇ ತುಕಾರಾಮ್ ಗೆದ್ದಾಗಿದೆ ಎಂದು ಜಿಲ್ಲೆಯ ಬಹುತೇಕ ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದರು.
ಅದೇ ಪ್ರಕಾರವಾಗಿ ಇಂದಿನ ಫಲಿತಾಂಶ ಹೊರಬಿದ್ದಿದ್ದು ಬಳ್ಳಾರಿ ಗ್ರಾಮಾಂತರದಲ್ಲಿ 25878, ನಗರ 16570, ಸಂಡೂರು 21093, ಕೂಡ್ಲಿಗಿ 8545, ಹಡಗಲಿ 8443, ಎಚ್.ಬಿ ಹಳ್ಳಿ 12200, ಕಂಪ್ಲಿ 8767 ಮತ್ತು ಹೊಸಪೇಟೆಯಲ್ಲಿ ಮಾತ್ರ 165 ಮತಗಳ ಹಿನ್ನೆಡಯೊಂದಿಗೆ ಸುಮಾರು 87 ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್ ಪಕ್ಷದ ಇ ತುಕಾರಾಮ್ ಶ್ರೀರಾಮುಲು ರವರನ್ನು ಸೋಲಿಸಿ ವಿಜಯ ಪತಾಕೆ ಹಾರಿಸಿದ್ದಾರೆ.
ಈ ಸಂದರ್ಭದಲ್ಲಿ ವಿಜೇತ ಅಭ್ಯರ್ಥಿ ಇ ತುಕಾರಾಮ್ ಮಾದ್ಯಮದ ಜೊತೆ ಮಾತನಾಡಿ, ನನ್ನ ಗೆಲುವಿಗೆ ಕಾರಣರಾದ ಅವಿಭಜಿತ ಬಳ್ಳಾರಿ ಜಿಲ್ಲೆಯ ಎಲ್ಲಾ ಮತದಾರ ಬಂಧುಗಳಿಗೆ ಮತ್ತು ಶಾಸಕರ ಸಚಿವರುಗಳಿಗೆ ಮತ್ತು ವಿಶೇಷವಾಗಿ ನಮ್ಮ ನಾಯಕರಾದ ಸಿದ್ಧರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ರವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ ಎಂದು ತಮ್ಮ ಗೆಲುವಿಗೆ ಹರ್ಷ ವ್ಯಕ್ತಪಡಿಸಿದರು.